AICC ಅಧ್ಯಕ್ಷರ ತವರು ಕ್ಷೇತ್ರದಲ್ಲಿ ಶನಿವಾರ ಪಿಎಂ ಮೋದಿ ಚುನಾವಣ ರಣಕಹಳೆ
2019ರಲ್ಲೂ ಚುನಾವಣಾ ಭಾಷಣ ಮಾಡಿದ್ದರು.. ಖರ್ಗೆ ಸೋತಿದ್ದರು..
Team Udayavani, Mar 14, 2024, 8:07 PM IST
ಕಲಬುರಗಿ: ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರು ಕ್ಷೇತ್ರ ಕಲಬುರಗಿ ಯಿಂದ ಚುನಾವಣಾ ಕಹಳೆ ಮೊಳಗಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾರ್ಚ್ 16 ರಂದು ಆಗಮಿಸುತ್ತಿದ್ದಾರೆ.
ಚುನಾವಣ ದಿನಾಂಕ ನಿಗದಿ ದಿನಗಣನೆ ನಡುವೆ ಪ್ರಧಾನಿ ಆಗಮಿಸುತ್ತಿರುವುದು ತೀವ್ರ ಕೂತುಹಲ ಮೂಡಿಸಿದೆ. ಮಾರ್ಚ್ 16 ರಂದು ಮಧ್ಯಾಹ್ನ 1ಕ್ಕೆ ವಿಶೇಷ ವಿಮಾನ ಮೂಲಕ ಇಲ್ಲಿನ ವಿಮಾನ ನಿಲ್ದಾಣಕ್ಕೆ ಆಗಮಿಸಿ, ತದನಂತರ ಹೆಲಿಕ್ಯಾಪ್ಟರ್ ಮೂಲಕ ನಗರದ ಪೊಲೀಸ್ ಮೈದಾನಕ್ಕೆ ಆಗಮಿಸಿ ಮಿನಿ ರೋಡಶೋ ಮುಖಾಂತರ ಸಮಾವೇಶ ನಡೆಯುವ ನೂತನ ವಿದ್ಯಾಲಯಕ್ಕೆ ಆಗಮಿಸುವರು.
ತದನಂತರ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡು ಪಕ್ಷದ ಕಾರ್ಯಕರ್ತರು, ಜನರನ್ನು ಉದ್ದೇಶಿಸಿ ಭಾಷಣ ಮಾಡಿ ಚುನಾವಣ ಕಹಳೆ ಮೊಳಗಿಸಲಿದ್ದಾರೆ. 2019 ಲೋಕಸಭಾ ಚುನಾವಣೆ ಮುಂಚೆಯೂ ಪ್ರಧಾನಿ ಇದೇ ನೂತನ ವಿದ್ಯಾಲಯ ಮೈದಾನದಲ್ಲಿ ಚುನಾವಣಾ ಭಾಷಣ ಮಾಡಿದ್ದರು. ಇದೇ ಸಮಾವೇಶದಲ್ಲಿ ಆಗ ಕಾಂಗ್ರೆಸ್ ಪಕ್ಷದಿಂದ ಚಿಂಚೋಳಿ ಕ್ಷೇತ್ರದ ಶಾಸಕರಾಗಿದ್ದ ಡಾ. ಉಮೇಶ ಜಾಧವ್ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆ ಯಾಗಿದ್ದರು.
ಈಗ ಎರಡನೇ ಬಾರಿಗೆ ಲೋಕಸಭಾ ಅಭ್ಯರ್ಥಿ ಯಾಗಿ ಕಣಕ್ಕಿಳಿಯುತ್ತಿರುವ ಸಂದರ್ಭದಲ್ಲಿ ಅದರಲ್ಲೂ ಟಿಕೆಟ್ ಪಟ್ಟಿ ಪ್ರಕಟವಾದ ನಂತರ ಮೊದಲ ಬಾರಿಗೆ ಪ್ರಧಾನಿ ಮೋದಿ ಆಗಮಿಸುತ್ತಿರುವುದರಿಂದ ಎಲ್ಲರ ನೋಟ ಕಲಬುರಗಿ ಯತ್ತ ಎನ್ನುವಂತಾಗಿದೆ.
ಸಿದ್ದತೆ ಪರಿಶೀಲನೆ
ನೂತನ ವಿದ್ಯಾಲಯ ಮೈದಾನದಲಿ ನಡೆಯುವ ಪ್ರಧಾನಿ ಕಾರ್ಯಕ್ರಮದ ಸಿದ್ದತೆ ಯನ್ನು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ,ಪೊಲೀಸ್ ಆಯುಕ್ತ ಆರ್ ಚೇತನ್, ಎಸ್ಪಿ ಅಕ್ಷಯ ಹಾಕೆ ಪರಿಶೀಲನೆ ನಡೆಸಿದರು.
ಸಂಸದ ಡಾ.ಉಮೇಶ ಜಾಧವ್, ಬಿಜೆಪಿ ಮುಖಂಡ ರಾದ ರಾಜುಗೌಡ, ಪಿ.ರಾಜೀವ್, ರಾಜಕುಮಾರ ಪಾಟೀಲ್ ತೇಲ್ಕೂರ, ಶಿವರಾಜ ಪಾಟೀಲ್ ರದ್ದೇವಾಡಗಿ, ಚಂದು ಪಾಟೀಲ್ ಮುಂತಾದವರು ಸಹ ಸಮಾವೇಶದ ಸಿದ್ದತೆ ಗಳನ್ನು ಅವಲೋಕಿಸಿ ಪ್ರಧಾನಿ ಪ್ರವಾಸದ ವಿವರಣೆ ನೀಡಿದರು.