ಕಾಲುವೆ ಕಟ್ಟಲು 8 ಲಕ್ಷ , ಕೆಡವಲು 16 ಲಕ್ಷ !
Team Udayavani, Feb 4, 2019, 7:00 AM IST
ಕಲಬುರಗಿ: ಕಾಲುವೆಯಿಂದ ರೈತರ ಹೊಲಗಳಿಗೆ ನೀರು ಹರಿಯಲೆಂದು 20 ವರ್ಷಗಳ ಹಿಂದೆ ಕಟ್ಟಿಸಿದ ಮೇಲ್ಸೇತುವೆ ಕಾಲುವೆಯಿಂದ ಈಗ ನೀರು ಹರಿಸಲು ಅಸಾಧ್ಯವೆಂದು ತಿಳಿದು ಹಳೆ ಕಾಲುವೆ ಕೆಡವಿ ಹೊಸದಾಗಿ ನಿರ್ಮಿಸಲು ಮುಂದಾಗುವ ಮೂಲಕ 54 ಲಕ್ಷ ರೂ.ಗಳನ್ನು ನೀರಲ್ಲಿ ಹೋಮ ಮಾಡಿರುವ ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ.
ಜಿಲ್ಲೆಯ ಮಹತ್ವಕಾಂಕ್ಷಿ ಯೋಜನೆಯಾಗಿರುವ ಅಮರ್ಜಾ ಜಲಾಶಯದ ಬಲದಂಡೆ ಕಾಲುವೆ 52 ಕಿಮೀ ವ್ಯಾಪ್ತಿಯ ಅಫಜಲಪುರ ತಾಲೂಕಿನ ಭೈರಾಮಡಗಿ ಗ್ರಾಮದ ಬಳಿಯೇ ಹಳೆಯ ಮೇಲ್ಸೇತುವೆ ನೆಲಸಮ ಮಾಡಿ ಈಗ ಹೊಸದಾಗಿ ನಿರ್ಮಿಸಲಾಗುತ್ತಿದೆ. ಈಗ ನಿರ್ಮಿಸಲಾದ ಕಾಲುವೆಗಿಂತ ಐದು ಅಡಿ ಎತ್ತರದಲ್ಲಿ ಮೇಲ್ಸೇತುವೆ ನಿರ್ಮಿಸಿದ್ದರಿಂದ ನೀರು ಹರಿಯಲು ಅಸಾಧ್ಯ ಎನ್ನುವುದನ್ನು ಮನಗಂಡು ಹಳೆ ಸೇತುವೆ ನೆಲಸಮಗೊಳಿ ಕರ್ನಾಟಕ ನೀರಾವರಿ ನಿಗಮದಿಂದ 54 ಲಕ್ಷ ರೂ. ಮೊತ್ತಕ್ಕೆ ಹೊಸ ಕಾಲುವೆಗೆ ಟೆಂಡರ್ ಕರೆದು ಕಾಮಗಾರಿ ಶುರು ಮಾಡಲಾಗಿದೆ.
ಅಮರ್ಜಾ ಜಲಾಶದ ಬಲದಂಡೆ ಕಾಲುವೆ ನಿರ್ಮಾಣ ಕಾಮಗಾರಿ ಈಗ ಭೈರಾಮಡಗಿ ಗ್ರಾಮದ ಮೇಲ್ಸೇತುವೆ ಕಾಲುವೆ ಬಳಿ ಬಂದಿದೆ. ಆದರೆ ಮೇಲ್ಸೇತುವೆ ನಿರ್ಮಾಣವಾಗಿದ್ದು 15 ವರ್ಷಗಳ ಹಿಂದೆಯೇ. ಒಂದು ವೇಳೆ ಕಾಲುವೆ ಕಾಮಗಾರಿ ಪೂರ್ಣಗೊಂಡ ನಂತರ ಮೇಲ್ಸೇತುವೆ ನಿರ್ಮಿಸಿದ್ದರೆ ಹಣ ಪೋಲಾಗುವುದನ್ನು ತಪ್ಪಿಸಬಹುದಿತ್ತು. ಒಟ್ಟಾರೆ 15 ವರ್ಷಗಳ ಹಿಂದೆ ಮಾಡಲಾಗಿರುವ 8 ಲಕ್ಷ ರೂ. ಕಾಮಗಾರಿ ನೆಲಸಮಗೊಳಿಸಿ ಈಗ ಹೊಸದಾಗಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ 54 ಲಕ್ಷ ರೂ. ಟೆಂಡರ್ ಕರೆಯಲಾಗಿದೆ.
ಎರಡು ದಶಕಗಳ ಹಿಂದೆ ನಿರ್ಮಿಸಲಾದ ಮೇಲ್ಸೇತುವೆ ಕಾಲುವೆ ಈಗಲೂ ಹೊಸತನವಿರುವುದರಿಂದ ಆಗ ನಿರ್ಮಿಸಿದ ವೆಚ್ಚಕ್ಕಿಂತ ಈಗ ಕೆಡವಲು ಹೆಚ್ಚು ವೆಚ್ಚ ತಗಲುತ್ತಿದೆ. ಆಗ ಕಾಲುವೆ ನಿರ್ಮಾಣಕ್ಕೆ 8 ಲಕ್ಷ ತಗುಲಿದ್ದರೆ ಈಗ ಬೀಳಿಸಲು 16 ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ. ದೊಡ್ಡ ಹಿಟಾಚಿಗಳ ಮೂಲಕ ಮೇಲ್ಸೇತುವೆ ಕಾಲುವೆ ನೆಲಸಮಗೊಳಿಸಲಾಗುತ್ತಿದೆ. ಕಾಲುವೆ ನಿರ್ಮಾಣಕ್ಕೆ ಹಣ ಖರ್ಚಾಗಿದ್ದು ಕೇಳಿದ್ದೇವೆ. ಆದರೆ ಇಲ್ಲಿ ಕೆಡವಲಿಕ್ಕೇ ಅಧಿಕ ಹಣ ಎನ್ನುವಂತಾಗಿದೆ. ಒಟ್ಟಾರೆ ಆಗಿನ 8 ಲಕ್ಷ ರೂ. ಮಣ್ಣು ಪಾಲು ಮಾಡಿರುವುದಂತು ಸತ್ಯ.
ಕೂಸು ಹುಟ್ಟುವ ಮುನ್ನ ಕುಲಾಯಿ ಹೊಲಿಸಿದರು ಎನ್ನುವಂತೆ ಅಮರ್ಜಾ ಜಲಾಶಯ ಕಾಲುವೆ ಕಾಮಗಾರಿ ಕೈಗೊಳ್ಳುವ ಮುಂಚೆಯೇ ಕಾಲುವೆ ಮೇಲ್ಸೇತುವೆ ನಿರ್ಮಿಸಲಾಗಿದೆ. ಈಗ ಕಾಲುವೆ ನಿರ್ಮಾಣ ಕಾಮಗಾರಿ ಈ ಮೇಲ್ಸೇತುವೆ ಬಳಿ ಬಂದಿದೆ. ಆದರೆ ಕಾಲುವೆ ಕೆಳಗಡೆಯಾಗಿದ್ದರೆ ಮೇಲ್ಸೇತುವೆ ಅತಿ ಎತ್ತರವಾಗಿದೆ. ನೀರು ಮೇಲಿಂದ ಕೆಳಗಡೆ ಹರಿದು ಬರುವುದು. ಆದರೆ ಇಲ್ಲಿ ಮೇಲ್ಸೇತುವೆ ಕಾಲುವೆಗಿಂತ ಐದು ಅಡಿ ಎತ್ತರ ಆಗುತ್ತಿರುವುದರಿಂದ ಕಾಲುವೆಯಿಂದ ನೀರು ಮೇಲ್ಸೇತುವೆ ಮುಖಾಂತರ ಹರಿಯಲು ಸಾಧ್ಯವೇ ಇಲ್ಲ. ಹೀಗಾಗಿ ಈಗ ಮೇಲ್ಸೇತುವೆ ಸಂಪೂರ್ಣ ನಾಶಗೊಳಿಸಿ ಹೊಸದಾಗಿ ನಿರ್ಮಸಲಾಗುತ್ತಿದೆ. ಈ ಮೂಲಕ ಕಾಲುವೆ ಹೆಸರಿನಲ್ಲಿ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಜೇಬು ತುಂಬಿಸುವಂತಾಗಿದೆ.
ಅವೈಜ್ಞಾನಿಕ ಮೇಲ್ಸೇತುವೆ ನಿರ್ಮಾಣ: ಇದು ಯಾರಾದಾರೂ ಖಾಸಗಿಯವರು ಕಟ್ಟಿದ ಮೇಲ್ಸೇತುವೆ ಅಲ್ಲ. ಸರ್ಕಾರಿ ಅಧಿಕಾರಿಗಳೇ ಸ್ಥಳ ಪರಿಶೀಲಿಸಿ ನೀಡಿದ ಟೆಂಡರ್ ಕಾಮಗಾರಿಯಾಗಿದೆ. ಒಂದು ವೇಳೆ ಅಧಿಕಾರಿಗಳು ತಮ್ಮ ಮನೆ ನಿರ್ಮಾಣ ಮಾಡುವಂತಿದ್ದರೆ ಹೀಗೆ ನಿರ್ಲಕ್ಷ್ಯತನ ಹಾಗೂ ಅವೈಜ್ಞಾನಿಕತೆ ತೋರುತ್ತಿದ್ದರೆ ಎಂದು ರೈತರು ಹಾಗೂ ಸಾರ್ವಜನಿರಕು ಖಾರವಾಗಿ ಪ್ರಶ್ನಿಸಿದ್ದಾರೆ. ಹೊಸದಾಗಿ ನಿರ್ಮಾಣಕ್ಕೆ ತಗಲುವ ಮೇಲ್ಸೇತುವೆ ವೆಚ್ಚವನ್ನು ಅಂದಿನ ಅಧಿಕಾರಿಗಳಿಂದಲೇ ವಸೂಲಿ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಅಧಿಕಾರಿಗಳ ಭೇಟಿ: ಅವೈಜ್ಞಾನಿಕ ಮೇಲ್ಸೇತುವೆ ಮಾಡುವ ಹಾಗೂ ಹೊಸದಾಗಿ ಕಾಲುವೆ ನಿರ್ಮಾಣ ನಿರ್ಮಾಣ ಸಂಬಂಧ ನೀರಾವರಿ ಇಲಾಖೆ ಅಧೀಕ್ಷಕ ಅಭಿಯಂತರ ಜಗನ್ನಾಥ ಹಲಿಂಗೆ ಅಫಜಲಪುರ ತಾಲೂಕಿನ ಭೈರಾಮಡಗಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿಂದೆ ತಪ್ಪು ಆಗಿದೆ. ಆದರೆ ಈಗ ಸರಿಪಡಿಸಲಾಗತ್ತಿದೆ. ಮುಂದಿನ ದಿನಗಳಲ್ಲಿ ಕಾಲುವೆಯಿಂದ ಸರಳವಾಗಿ ಮುಂದೆ ಹೋಗುವಂತೆ ನಿರ್ಮಿಸಲು ಯೋಜನೆ ರೂಪಿಸಿ ಟೆಂಡರ್ ನೀಡಲಾಗಿದೆ ಎಂದು ವಿವರಣೆ ನೀಡಿದ್ದಾರೆ.
ಜಲಾಶಯದಲ್ಲೇ ನೀರಿಲ್ಲ, ಇನ್ನು ಕಾಲುವೆಗೆ ಯಾವಾಗ?: ಮುಖ್ಯವಾಗಿ ಆಳಂದ ತಾಲೂಕಿನ ಕೊರಳ್ಳಿ ಬಳಿ ಇರುವ ಅಮರ್ಜಾ ಜಲಾಶಯದಲ್ಲಿಯೇ ನೀರು ಇರೋದಿಲ್ಲ. ಹೀಗಾದರೆ ಕಾಲುವೆಗೆ ನೀರು ಹರಿಯುವುದು ಅಸಾಧ್ಯ. ಕಾಲುವೆ ನಿರ್ಮಾಣ ಹೆಸರಿನಲ್ಲಿ ಅನಗತ್ಯವಾಗಿ ಖರ್ಚು ಮಾಡಲಾಗುತ್ತಿದೆ. ಒಂದು ವೇಳೆ ಕಾಲುವೆ ಮೂಲಕ ನೀರು ಹರಿದು ಬಂದರೂ ಕಾಲುವೆ ಕೊನೆ ಭಾಗವಾದ ಭೈರಾಮಡಗಿ ಹಾಗೂ ದಿಕ್ಸಂಗಾ ಗ್ರಾಮದ ಹೊಲಗಳಿಗಂತೂ ನೀರು ಹರಿದು ಬರುವುದು ಅಷ್ಟು ಸರಳವಾಗಿಲ್ಲ. ಒಂದು ವೇಳೆ ನೀರು ಹರಿದು ಬಂದರೆ ಒಂದು ಪವಾಡವೇ ಸರಿ ಎನ್ನಲಾಗುತ್ತಿದೆ. ಒಟ್ಟಾರೆ 20 ವರ್ಷಗಳ ಹಿಂದೆಯೇ ಯಾವುದೇ ಮುಂದಾಲೋಚನೆ ಇಲ್ಲದೇ ಕಾಲುವೆ ಮೇಲ್ಸೇತುವೆ ನಿರ್ಮಿಸಿರುವುದು ಯಾವ ನ್ಯಾಯ? ಎನ್ನುವ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ. ಆದರೆ ಸೇತುವೆ ನಿರ್ಮಾಣದ ಬಿಲ್ ಮಾತ್ರ ಸಂಬಂಧಪಟ್ಟವರ ಜೇಬಿಗೆ ಸೇರಿರುವುದು ಮಾತ್ರ ಸತ್ಯ.
ಕಲಬುರಗಿ ಜಿಲ್ಲೆಯಲ್ಲಿರುವ ನೀರಾವರಿ ಯೋಜನೆಗಳಿಗಾಗಿ ಇಲ್ಲಿಯವರೆಗೆ ಸುಮಾರು 3 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ. ಆದರೆ ಯಾವುದೇ ಯೋಜನೆ ಅಡಿ 100 ಎಕರೆ ನೀರಾವರಿಯಾಗಿಲ್ಲ. ಕಾಲುವೆ ನಿರ್ಮಾಣ ಹೆಸರಿನಲ್ಲಿ ಹಣ ಎತ್ತಿ ಹಾಕಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡು ಬರುತ್ತದೆ. ಮೊದಲು ಶಹಾಬಾದ್ ಕಲ್ಲಿನಿಂದ ಕಾಲುವೆ ನಿರ್ಮಾಣವಾಗಿರುವುದ್ದನ್ನು ಅಗೆದು ಈಗ ಸಿಮೆಂಟ್ನಿಂದ ಕಾಲುವೆ ನಿರ್ಮಿಸಲಾಗುತ್ತಿದೆ. ಇದರರ್ಥ ಕೆಲಸ ಆಗಿರಬೇಕು, ಆದರೆ ಯಾರಿಗೂ ಉಪಯೋಗಕ್ಕೆ ಬರದಂತಿರಬೇಕು ಎಂಬ ನುಡಿಯನ್ನು ನೀರಾವರಿ ಇಲಾಖೆ ಅನುಸರಿಸುತ್ತಿದೆ.
ಅವೈಜ್ಞಾನಿಕ ಮೇಲ್ಸೇತುವೆ ಕಾಲುವೆ ನಿರ್ಮಾಣ ಕಾಮಗಾರಿ ಕೈಗೊಳ್ಳುವ ಮುಖಾಂತರ ನಿಗಮಕ್ಕೆ ಹಾನಿ ಮಾಡಲಾಗಿದೆ ಎನ್ನುವ ಕುರಿತಾಗಿ ಹಣ ವಸೂಲಾತಿಗಾಗಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದೆ. ತಪ್ಪಿತಸ್ಥರಿಂದ ಹಣ ವಸೂಲಾತಿಯಾದರೆ ಮುಂದೆ ಇಂತಹ ಕಾಮಗಾರಿಗಳನ್ನು ಸಂಪೂರ್ಣ ತಡೆಹಿಡಿಯಬಹುದಾಗಿದೆ.
•ಜಗನ್ನಾಥ ಹಲಿಂಗೆ, ಮುಖ್ಯ ಇಂಜಿನಿಯರ್, ನೀರಾವರಿ ಯೋಜನೆಗಳ ವಲಯ, ಕಲಬುರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ