ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಗೆ ಒಳ್ಳೆಯ ಸ್ಥಿತಿಯಿದೆ: ಮಲ್ಲಿಕಾರ್ಜುನ ಖರ್ಗೆ
Team Udayavani, Oct 19, 2019, 2:11 PM IST
ಕಲಬುರಗಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ಅಂತ್ಯ ಬೀಳಲಿದ್ದು, ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಮಹಾರಾಷ್ಟ್ರ ಉಸ್ತುವಾರಿ ಹಾಗೂ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಹಾರಾಷ್ಟ್ರದಲ್ಲಿ ಒಳ್ಳೆಯ ಸ್ಥಿತಿ ಇದೆ, ನಾನು ಸಾಧ್ಯವಾದಷ್ಟು ಪ್ರಮುಖ ಸ್ಥಳದಲ್ಲಿ ಪ್ರಚಾರ ಮಾಡಿದ್ದೇನೆ ಎಂದು ತಿಳಿಸಿದರು.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಸೇರಿದಂತೆ ಜನರು ಮಹಾರಾಷ್ಟ್ರ ಸರ್ಕಾರ ವಿರುದ್ಧ ರೊಚ್ಚಿಗೆದ್ದಿದ್ದಾರೆ.ಮುಂಬೈ ಸುತ್ತಮುತ್ತ ಹಾಗೂ ಮಹಾರಾಷ್ಟ್ರದಲ್ಲಿ 2200 ಉದ್ಯಮಗಳು ಮುಚ್ಚಿಹೋಗಿವೆ. ಹೀಗಾಗಿ ಸರ್ಕಾರದ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಎನ್ಸಿಪಿ, ಕಾಂಗ್ರೆಸ್, ಸಿಪಿಎಂ ಎಲ್ಲರೂ ಒಗ್ಗೂಡಿ ಚುನಾವಣೆ ಎದುರಿಸುತ್ತಿದ್ದೇವೆ. ಈ ಬಾರಿ ಮೈತ್ರಿ ಸರ್ಕಾರ ಬರುವ ಸಾಧ್ಯತೆ ಹೆಚ್ಚಿದೆ ಎಂದರು.
ಕೆಲವು ಚಾನೆಲ್ ಗಳ ಜನಾಭಿಪ್ರಾಯ ಸಂಗ್ರಹದಲ್ಲಿ ಬಿಜೆಪಿಗೆ ಮೇಲುಗೈ ಬಂದಿರುವ ವಿಚಾರವಾಗಿ ಮಾತನಾಡಿದ ಖರ್ಗೆ, ಒಪಿನಿಯನ್ ಪೋಲ್ ನಲ್ಲಿ ಎಲ್ಲವನ್ನೂ ಕೂಡ ತೋರಿಸುತ್ತಾರೆ. ಅನೇಕ ಉಧ್ಯಮಪತಿಗಳು ಚಾನೆಲ್ಗಳನ್ನು ನಡೆಸುತ್ತಿದ್ದಾರೆ. ಅಪ್ರತ್ಯಕ್ಷವಾಗಿ ಕೆಲವು ಮಾಧ್ಯಮಗಳನ್ನು ಕಂಟ್ರೋಲ್ನಲ್ಲಿ ಇಟ್ಟುಕೊಂಡಿದ್ದಾರೆ ಎಂದರು.
ಪ್ರಧಾನಿ ಚುನಾವಣೆಗಾಗಿ ಹತ್ತಾರು ದಿವಸಗಳ ಕಾಲ ಪ್ರವಾಸ ಮಾಡುತ್ತಾರೆ. ರಾಜ್ಯದಲ್ಲಿ ಏನು ಕೆಲಸ ಮಾಡಿದ್ದಾರೆ ಎಂದು ಹೇಳಲಿಕ್ಕೆ ಯಾವುದೇ ವಿಷಯ ಇಲ್ಲ. ಐದು ವರ್ಷಗಳಲ್ಲಿ ಫಡ್ನವೀಸ್ ಸರ್ಕಾರ ಏನು ಮಾಡಿದೆ ಇದರ ಉತ್ತರ ಕೊಡು ಅಂದರೆ ಕೊಡುತ್ತಿಲ್ಲ. 370 ರದ್ದು ಕಿಯಾ, ಓ ಕಿಯಾ ಅಂತಾ ಎಲ್ಲಾ ಹೇಳ್ತಾರೆ. ರಾಷ್ಟ್ರೀಯ ವಿಷಯದ ಮೇಲೆ ಅವರು ಚುನಾವಣೆ ಮಾಡ್ತಾರೆ, ರಾಜ್ಯದಲ್ಲಿ ಏನು ಮಾಡಿದ್ದಾರೆ ಎಂದು ಹೇಳಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಮಹದಾಯಿ ವಿಚಾರ ನಾವು ಹಿಂದೆ ಅಧಿಕಾರದಲ್ಲಿದ್ದಾಗಲೂ ಚರ್ಚೆ ಮಾಡಿದ್ದೇವೆ. ಗೋವಾಗೆ ಬಹಳಷ್ಟು ನೀರು ಹರಿದು ಹೋಗುತ್ತದೆ. 8 ಟಿಎಂಸಿ ನೀರು ಕೇಳಿದ್ದೇವೆ, ಗೋವಾದವರು ಗಮನ ಹರಿಸುತ್ತಿಲ್ಲ. ಆ ಭಾಗದ ಜನರ ಸಮಸ್ಯೆಯಷ್ಟೇ ಅಲ್ಲ. ಇದು ನಮ್ಮ ರಾಜ್ಯದ ಸಮಸ್ಯೆ ಅಂತಾ ಎಲ್ಲರೂ ಪಕ್ಷಾತೀತವಾಗಿ ಸೇರಿ ಇದನ್ನು ಬಗೆಹರಿಸಬೇಕು. ರಾಜ್ಯಪಾಲರು ಪ್ರತಿಭಟನಾ ನಿರತ ರೈತರನ್ನು ಭೇಟಿ ಮಾಡಲು ಅವಕಾಶ ಕೊಡಬೇಕು ಎಂದರು.
ಹರಿಯಾಣದಲ್ಲೂ ಕಾಂಗ್ರೆಸ್ ಒಳ್ಳೆಯ ಪ್ರಯತ್ನ ಮಾಡುತ್ತಿದ್ದು, ಎಲ್ಲರೂ ಒಗ್ಗೂಡಿ ಕೆಲಸ ಮಾಡ್ತಿದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ವೀರ್ ಸಾವರ್ಕರ್ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗ, ಈಗ ಮಹಾರಾಷ್ಟ್ರ, ಹರಿಯಾಣ ವಿಧಾನಸಭೆ ಚುನಾವಣೆ ಇರೋದರಿಂದ ಈ ಬಗ್ಗೆ ಆಮೇಲೆ ಮಾತನಾಡುತ್ತೇನೆ ಎಂದರು.
ಮುಂಬೈನಲ್ಲಿ 1993ರ ಬಾಂಬ್ ಬ್ಲಾಸ್ಟ್ ಸಂತ್ರಸ್ತರನ್ನು ಅಂದಿನ ಕಾಂಗ್ರೆಸ್ ಸರ್ಕಾರ ಕಡೆಗಣಿಸಿತ್ತು ಎಂಬ ಪ್ರಧಾನಿ ಮೋದಿ ಹೇಳಿಕೆ ವಿಚಾರದಲ್ಲಿ ಮಾತನಾಡಿದ ಅವರು, ಈಗ ಐದು ವರ್ಷ ರಾಜ್ಯ ಹಾಗೂ ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇತ್ತು ಅವರೇನು ಮಾಡಿದ್ರು? ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವುದು ಅವರ ಕೆಲಸವಾಗಿದೆ. 70 ವರ್ಷ ಏನು ಮಾಡಿದ್ದಾರೆ ಎಂದು ಅವರು ನಮ್ಮನ್ನ ಕೇಳ್ತಾರೆ. ಕಳೆದ ಐದು ವರ್ಷಗಳಲ್ಲಿ ಮಹಾರಾಷ್ಟ್ರದ ಫಡ್ನವೀಸ್ ಸರ್ಕಾರ ಕೇಂದ್ರದ ಮೋದಿ ಸರ್ಕಾರ ಏನು ಮಾಡಿದೆ ಎಂದು ಖರ್ಗೆ ಪ್ರಶ್ನಿಸಿದರು.
ಮಹಾರಾಷ್ಟ್ರಕ್ಕೆ ನೀರು ಬಿಡುಗಡೆ ಬಗ್ಗೆ ಸಿಎಂ ಬಿಎಸ್ವೈ ಹೇಳಿಕೆ ವಿಚಾರವಾಗಿ ಮಾತನಾಡಿದ ಖರ್ಗೆ, ಮುಖ್ಯಮಂತ್ರಿ ಬಿಎಸ್ವೈ ಈ ಬಗ್ಗೆ ಏನು ಮಾತನಾಡಿದ್ದಾರೆ ಎಂದು ಗೊತ್ತಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.