ಆದೇಶ ವಾಪಸು ಪಡೆಯಿರಿ: ಕೊಡವ ಹಿತ ರಕ್ಷಣಾ ಸಮಿತಿ ಒತ್ತಾಯ
Team Udayavani, Aug 19, 2017, 6:40 AM IST
ಮಡಿಕೇರಿ: ಆಹಾರ ಭದ್ರತೆಯ ನೆಪದಲ್ಲಿ ಕೊಡಗಿನ ಪಾಳು ಬಿದ್ದಿರುವ ಭೂಮಿಯ ವಿವರವನ್ನು ಸಲ್ಲಿಸುವಂತೆ ಸರಕಾರ ಜಿಲ್ಲಾಡಳಿತಕ್ಕೆ ಆದೇಶ ನೀಡಿದೆ ಎಂದು ಆರೋಪಿಸಿರುವ ವಿರಾಜಪೇಟೆ ಕೊಡವ ಹಿತ ರಕ್ಷಣಾ ಸಮಿತಿ ಸರಕಾರದ ಕ್ರಮವನ್ನು ತೀವ್ರವಾಗಿ ವಿರೋಧಿಸುವುದಾಗಿ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷರಾದ ಸಿ.ಬಿ. ಪಳಂಗಪ್ಪ, ಕೆಲವು ಕೋಮುವಾದಿ ಹಾಗೂ ಫ್ಯಾಸಿಸ್ಟ್ ಶಕ್ತಿಗಳ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿಗಳು ಪಾಳು ಬಿದ್ದಿರುವ ಭೂಮಿಯ ಸಮೀಕ್ಷೆ ಮಾಡಲು ಕೊಡಗು ಜಿಲ್ಲೆಗೆ ಸೀಮಿತವಾಗುವಂತೆ ಆದೇಶ ಹೊರಡಿಸಿದ್ದಾರೆ ಎಂದು ಆರೋಪಿಸಿದರು.
ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಹೊಲ ಹಾಗೂ ಗದ್ದೆಗಳು ಕೃಷಿ ಮಾಡದೆ ಪಾಳು ಬಿಟ್ಟಿದ್ದು, ಲಕ್ಷಾಂತರ ಎಕರೆ ಕೃಷಿ ಯೋಗ್ಯ ಭೂಮಿಗಳು ಇಂದು ಮನೆ ನಿವೇಶಗಳಾಗಿ ಪರಿವರ್ತನೆಗೊಂಡಿವೆ. ಇವುಗಳನ್ನು ಬಿಟ್ಟು ಜಿಲ್ಲೆಯಲ್ಲಿ ಸಮೀಕ್ಷೆಗೆ ಆದೇಶ ಮಾಡಿ ಆಹಾರ ಭದ್ರತೆ ಕಾನೂನನ್ನು ಕೊಡಗಿಗೆ ಮಾತ್ರ ಸೀಮಿತ ಮಾಡುವ ಮೂಲಕ ಸಂಘರ್ಷಕ್ಕೆ ಅವಕಾಶ ಕಲ್ಪಿಸಿಕೊಟ್ಟಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮಿತಿಯ ಸದಸ್ಯರಾದ ಸಿ.ಎಸ್. ಸೂರಜ್ ತಮ್ಮಯ್ಯ ಮಾತನಾಡಿ, ಹೊಲ, ಗದ್ದೆಗಳು ಪಾಳುಬೀಳಲು ಇಂದು ಕೃಷಿಕರು ಅನುಭವಿ ಸುತ್ತಿರುವ ಕಷ್ಟ, ನಷ್ಟಗಳೇ ಕಾರಣವೆಂದು ಅಭಿಪ್ರಾಯಪಟ್ಟರು.
ಲಾಭದಾಯಕವಲ್ಲದ ಕೃಷಿ ಕ್ಷೇತ್ರ, ಮಳೆ ನೀರು ಅಥವಾ ನಾಲೆಯಿಂದ ನಿಗದಿತ ಸಮಯದಲ್ಲಿ ನೀರು ಸಿಗದೆ ಇರುವುದು, ಲಾಭದಾಯಕ ವೃತ್ತಿ ಅಲ್ಲದಿರುವುದರಿಂದ ಕೃಷಿಕರ ಮಕ್ಕಳು ಕೃಷಿಯನ್ನು ಒಂದು ವೃತ್ತಿಯಾಗಿ ಅವಲಂಬಿಸದೇ ಇರುವುದು, ಬಾಲ ಕಾರ್ಮಿಕ ಕಾನೂನುಗಳು, ರೈತರಿಗೆ ಕನಿಷ್ಟ ಎಕರೆಗೆ ಹತ್ತು ಸಾವಿರ ರೂ. ಸಹಾಯಧನ ನೀಡದಿರುವುದು, ಕಾಡಾನೆ ಸೇರಿದಂತೆ ವನ್ಯಜೀವಿಗಳ ಹಾವಳಿ, ಕೃಷಿ ಇಲಾಖೆ ರೈತರಿಗೆ ಸಹಾಯ ಮಾಡುವ ನೆಪದಲ್ಲಿ ವಂಚಿಸುತ್ತಿರುವುದು, ಮಳೆಯ ಅಭಾವ, ಹವಾಗುಣ ವೈಪರೀತ್ಯ ಹೀಗೆ ಅನೇಕ ಕಾರಣಗಳು ರೈತರ ಸಂಕಷ್ಟಕ್ಕೆ ಕಾರಣವಾಗಿವೆ ಎಂದು ಅವರು ಹೇಳಿದರು.