ಸಾಕಾನೆ ದಾಳಿಗೆ ಮಾವುತ ಬಲಿ
Team Udayavani, Apr 18, 2017, 11:48 AM IST
ಮಡಿಕೇರಿ: ಆಕ್ರೋಶ ಗೊಂಡ ಸಾಕಾನೆಯೊಂದರ ಹಠಾತ್ ದಾಳಿಗೆ ಸಿಲುಕಿ ಮಾವುತ ಸಾವನ್ನಪ್ಪಿ, ಮತ್ತೋರ್ವ ಕಾರ್ಮಿಕ ಗಂಭೀರ ಸ್ವರೂಪದಲ್ಲಿ ಗಾಯಗೊಂಡಿರುವ ಘಟನೆ ದುಬಾರೆಯ ಸಾಕಾನೆ ಶಿಬಿರದಲ್ಲಿ ನಡೆದಿದೆ. ಶಿಬಿರದಲ್ಲಿ ಮಾವುತನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಣ್ಣು (48) ಮೃತಪಟ್ಟವರು. ಕಾರ್ಮಿಕ ಚಂದ್ರ (28) ಗಾಯಗೊಂಡಿದ್ದಾರೆ.
ಶಿಬಿರದಲ್ಲಿರುವ ರಂಜನ್ ಎಂಬ ಸಾಕಾನೆಯ ಮಾವುತನಾಗಿ ಅಣ್ಣು ಕಾರ್ಯ ನಿರ್ವಹಿಸುತ್ತಿದ್ದರು. ಸೋಮವಾರ ಬೆಳಗ್ಗೆ 8 ಗಂಟೆಯ ಸುಮಾರಿಗೆ ಸಾಕಾನೆ ರಂಜನ್ನನ್ನು ಕಟ್ಟಿದ ಜಾಗದಿಂದ ಬಿಚ್ಚುತ್ತಿರುವ ಸಂದರ್ಭ ಸಮೀಪದಲ್ಲೇ ಇದ್ದ 8 ವರ್ಷ ಪ್ರಾಯದ ಕಾರ್ತಿಕ್ ಎಂಬ ಸಾಕಾನೆ ಅಣ್ಣು ಮತ್ತು ಚಂದ್ರನ ಮೇಲೆ ದಾಳಿ ನಡೆಸಿತ್ತು.
ಸಾಕಾನೆ ಕಾರ್ತಿಕ್ ತಿವಿತದಿಂದ ಅಣ್ಣುವಿನ ಹೊಟ್ಟೆಯ ಭಾಗಕ್ಕೆ ಗಂಭೀರ ಗಾಯಗಳಾದವು. ಸಿದ್ದಾಪುರ ಸಮುದಾಯ ಕೇಂದ್ರಕ್ಕೆ ಸಾಗಿಸುವ ಸಂದರ್ಭ ಆತ ಸಾವನ್ನಪ್ಪಿ ದ್ದಾರೆೆ. ಇದೇ ಸಂದರ್ಭ ಸಾಕಾನೆ ಕಾರ್ತಿಕ್ ಅಲ್ಲೇ ಸಮೀಪದಲ್ಲಿದ್ದ ಕಾರ್ಮಿಕ ಚಂದ್ರನ ಮೇಲೆಯೂ ದಾಳಿ ನಡೆಸಿತು. ಇದರಿಂದ ಆತನ ಕಾಲು ಹಾಗೂ ದೇಹಕ್ಕೆ ಗಂಭೀರ ಗಾಯಗಳಾಗಿವೆ. ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಣ್ಣುವಿನ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಗಾಯಾಳು ಚಂದ್ರನನ್ನು ಮಡಿಕೆೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿದ್ದಾಪುರ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದು, ಸ್ಥಳಕ್ಕೆ ಡಿಎಫ್ಒ ಸೂರ್ಯಸೇನ್, ಆರ್ಎಫ್ಒ ನೆಹರೂ, ಉಪ ವಲಯ ಅರಣ್ಯಾಧಿಕಾರಿ ರಂಜನ್ ಭೇಟಿ ನೀಡಿ ಪರಿಶೀಲಿಸಿದರು.