ಮಣ್ಣಿನಡಿ “ಸಮಾಧಿ’ಯಾದ ಒಡವೆ-ಹಣಕ್ಕೆ ಹುಡುಕಾಟ
Team Udayavani, Aug 23, 2018, 6:15 AM IST
ಸೋಮವಾರಪೇಟೆ: ವರ್ಷಾನುಗಟ್ಟಲೇ ತೋಟದಲ್ಲಿ ದುಡಿದು ಕೂಡಿಟ್ಟ ಹಣ ಮಣ್ಣುಪಾಲಾಗಿದ್ದು, ವಾರದಲ್ಲಿ ಹಸೆಮಣೆ ಏರುವ ಪುತ್ರಿಗೆ ಉಡುಗೊರೆ ನೀಡಲೆಂದು ತಂದಿದ್ದ ಚಿನ್ನ ಮಣ್ಣಿನಡಿ ಹೂತುಹೋಗಿದೆ. ಅದು ಸಿಗುತ್ತಾ ಎಂದು ಕಣ್ಣೀರು ಹಾಕುತ್ತಲೇ ತಂದೆ ಮಣ್ಣು ಅಗೆಯುತ್ತಿದ್ದಾರೆ. ಜೀವಮಾನವಿಡೀ ದುಡಿದು ಕೂಡಿಟ್ಟ ಆಪತ್ಧನ ಮತ್ತೆ ಕೈಸೇರುತ್ತಾ ಎಂಬ ಭರವಸೆಯೊಂದಿಗೆ ಕುಟುಂಬದ ಕಣ್ಣುಗಳು ಮಣ್ಣಿನ ಗುಡೆಯತ್ತ ನೋಡುತ್ತಿವೆ. ಮದುವೆ ಸಂಭ್ರದಲ್ಲಿದ್ದ ಕುಟುಂಬದಲ್ಲಿ ಇದೀಗ ಮೌನ. ಇದು, ಸೋಮವಾರಪೇಟೆ ತಾಲೂಕಿನ ಶುಂಠಿಕೊಪ್ಪದ ಮಾದಪುರ ಸಮೀಪದ ಹಟ್ಟಿಹಳ್ಳಿಯ ನಿವಾಸಿ ಉಮೇಶ್ ಅವರ ಕರುಣಾಜನ ಕಥೆ.
ಹಟ್ಟಿಹೊಳೆ ಸೇತುವೆಯಿಂದ ಅರ್ಧ ಕಿಲೋಮೀಟರ್ ದೂರದಲ್ಲಿರುವ ಚಿತ್ರ ಸುಬ್ಬಯ್ಯ ಅವರ ಮನೆಯ ಕೆಳ ಭಾಗದಲ್ಲಿ ಉಮೇಶ್ ಎಂಬುವರು ಮಡದಿ ಮತ್ತು ಇಬ್ಬರು ಹೆಣ್ಣು ಮಕ್ಕಳೊಂದಿಗೆ ವಾಸವಾಗಿದ್ದರು. ಅವರ ದೊಡ್ಡ ಮಗಳಿಗೆ ನಿಶ್ಚಿತಾರ್ಥವಾಗಿ, ಮದುವೆಯ ದಿನಾಂಕ ನಿಗದಿಪಡಿಸಿದ್ದರು. ಆಗಸ್ಟ್ 30ರಂದು ಮಡಿಕೇರಿಯ ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯಬೇಕಿತ್ತು. ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದರು. ಸಂಬಂಧಿಕರು, ಸ್ನೇಹಿತರು ಸೇರಿದಂತೆ ಬಹುತೇಕರಿಗೆ ಮದುವೆಯ ಆಮಂತ್ರಣ ಪತ್ರಿಕೆ ಹಂಚಿಯಾಗಿದೆ.
ಕಳೆದ ಗುರುವಾರದವರೆಗೂ (ಆ.16) ಎಲ್ಲವೂ ಚೆನ್ನಾಗಿಯೇ ಇತ್ತು. ಗುರುವಾರ ರಾತ್ರಿ ಗುಡ್ಡ ಕುಸಿದ ಪರಿಣಾಮ ಶುಕ್ರವಾರ ಬೆಳಗ್ಗೆ ಉಮೇಶ್ ಕುಟುಂಬ ಸಹಿತವಾಗಿ ಸುತ್ತಮುತ್ತಲ ಎಲ್ಲರೂ ಉಟ್ಟ ಬಟ್ಟೆಯಲ್ಲೇ ಮನೆ ಖಾಲಿ ಮಾಡಿದ್ದರು. ಹಣ, ಒಡವೆ, ಬಟ್ಟೆ ಸೇರಿದಂತೆ ಯಾವ ವಸ್ತುವನ್ನು ತೆಗೆದುಕೊಂಡು ಹೋಗಿರಲಿಲ್ಲ. ಈಗ ಎಲ್ಲರೂ ಮಡಿಕೇರಿ, ಸುಂಟಿಕೊಪ್ಪ ಮೊದಲಾದ ಭಾಗದಲ್ಲಿ ಇರುವ ನಿರಾಶ್ರಿತರ ಶಿಬಿರದಲ್ಲಿ ಆಶ್ರಯ ಪಡೆಯುತ್ತಿದ್ದಾರೆ.
ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಉಮೇಶ್ ಅವರು ಮಗಳ ಮದುವೆಗಾಗಿ ಹತ್ತು ಪವನ್ ಚಿನ್ನ (8 ಗ್ರಾಂ ಚಿನ್ನ ಒಂದು ಪವನ್) ಮಾಡಿಸಿ ಒಂದು ವಾರದ ಹಿಂದೆ ಮನೆಗೆ ತಂದಿಟ್ಟಿದ್ದರು. ಅದರ ಜತೆಗೆ ಮದುವೆ ಖರ್ಚಿಗಾಗಿ ಸುಮಾರು 25 ಸಾವಿರ ರೂ.ಗಳನ್ನು ಕೂಡಿಟ್ಟಿದ್ದರು. ಅದೆಲ್ಲವೂ ಈಗ ಮಣ್ಣಿನ ಅಡಿಯಲ್ಲಿ ಹೂತು ಹೋಗಿದೆ. ನಿರಾಶ್ರಿತರ ಶಿಬಿರಕ್ಕೆ ಹೋದ ದಿನದಿಂದಲೂ ಮಗಳ ಒಡವೆ ಹಾಗೂ ಹಣದ ಚಿಂತೆಯಲ್ಲಿದ್ದ ಉಮೇಶ್, ತಮ್ಮ ನಿವಾಸ ಇರುವ ಸ್ಥಳಕ್ಕೆ ಬರಲು ಎಷ್ಟೇ ಪ್ರಯತ್ನ ಮಾಡಿದರೂ ಆಗಿರಲಿಲ್ಲ. ಮಂಗಳವಾರ ಮನೆ ಇರುವ ಜಾಗಕ್ಕೆ ಹೋಗಿದ್ದಾಗ ಅಲ್ಲಿ ಮನೆಯೇ ಕಾಣಲಿಲ್ಲ. ಗುಡ್ಡ ಕುಸಿತದಿಂದ ಮನೆಯ ಮೇಲೆ ಮಣ್ಣು ಆವರಿಸಿದೆ. ಬುಧವಾರ 15 ಜನರ ತಂಡದೊಂದಿಗೆ ಚಿನ್ನ ಹಾಗೂ ಹಣಕ್ಕಾಗಿ ಗುಡ್ಡ ಅಗೆಯಲು ಆರಂಭಿಸಿದ್ದಾರೆ.
ದೇವಸ್ಥಾನದಲ್ಲಿ ಮದುವೆ ಮಾಡುವೆ
‘ಉದಯವಾಣಿ‘ ಜತೆ ನೋವು ಹಂಚಿಕೊಂಡ ಉಮೇಶ್, ಆ.16ರ ರಾತ್ರಿ ಎಡೆಬಿಡದೆ ಮಳೆ ಸುರಿಯುತಿತ್ತು. ಬೆಳಗ್ಗೆ ಎದ್ದು ನೋಡುವಾಗ ಮನೆಯ ಹಿಂಭಾಗದ ಗುಡ್ಡ ಸಂಪೂರ್ಣ ಕುಸಿದಿತ್ತು ಮತ್ತು ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದವು. ತಕ್ಷಣವೇ ಮನೆಯಲ್ಲಿದ್ದ ಇಬ್ಬರು ಮಕ್ಕಳ ಹಾಗೂ ಪತ್ನಿಯ ಸಹಿತವಾಗಿ ನಾವೆಲ್ಲರೂ ಹೊರೆಗೆ ಓಡಿ ಬಂದವು. ನಾವು ಬಂದ ಕೆಲವೇ ಕ್ಷಣದಲ್ಲಿ ಗುಡ್ಡ ಪೂರ್ಣವಾಗಿ ನಮ್ಮ ಮನೆಯ ಮೇಲೆ ಬಿದ್ದಿತು. ನಾವು ಹೊರಗೆ ಬರುವುದು ಸ್ವಲ್ಪ ತಡವಾಗಿದ್ದರೂ, ಯಾರ ಜೀವವೂ ಉಳಿಯುತ್ತಿರಲಿಲ್ಲ ಎಂದು ಅಂದಿನ ಘಟನೆ ವಿವರಿಸಿದರು.
ಮುಂದಿನ ಗುರುವಾರ(ಆ.30) ದೊಡ್ಡ ಮಗಳ ಮದುವೆ ನಿಶ್ಚಯವಾಗಿತ್ತು. ಸಾಲದ ಹಣ ಮತ್ತು ಕೂಲಿ ಮಾಡಿದ ದುಡ್ಡು ಸೇರಿಸಿ 10 ಪವನ್ ಚಿನ್ನ ಮಾಡಿಸಿದ್ದೆ. ಹಾಗೆಯೇ ಮದುವೆ ಖರ್ಚಿಗಾಗಿ ಸುಮಾರು 25 ಸಾವಿರ ರೂ. ತೆಗೆದು ಮನೆಯ ಬೀರು ಒಳಗೆ ಇಟ್ಟಿದ್ದೆ. ಗಾಬರಿಯಲ್ಲಿ ಮನೆ ಬಿಟ್ಟು ಓಡುವಾಗ ಇದ್ಯಾವುದೂ ನೆನಪಿಗೆ ಬರಲೇ ಇಲ್ಲ. ಈಗ ಅನಿವಾರ್ಯವಾಗಿ ಹುಡುಕಬೇಕಾಗಿದೆ. ಕಲ್ಯಾಣ ಮಂಟಪದಲ್ಲಿ ಮದುವೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಯಾವುದಾದರೂ ದೇವಸ್ಥಾನದಲ್ಲಿ ಮದುವೆ ಮಾಡುವ ಬಗ್ಗೆ ಯೋಚಿಸುತ್ತಿದ್ದೇವೆ. ಗಂಡಿನ ಮನೆಯವರೂ ಕೂಡ ಇದಕ್ಕೆ ಒಪ್ಪಿದ್ದಾರೆ. ಚಿನ್ನ ಮತ್ತು ಹಣ ಸಿಗುತ್ತದೋ ಇಲ್ಲವೋ ಎಂದು ಹೇಳುತ್ತಾರೆ.
– ರಾಜು ಖಾರ್ವಿ ಕೊಡೇರಿ