ಜವಾಬ್ದಾರಿ ಸ್ಥಾನದಲ್ಲಿರುವವರಿಂದ ಹಣ ವಸೂಲಿ
ಮಾರುಕಟ್ಟೆ ಇ ಹರಾಜು | ಮಧ್ಯವರ್ತಿಗಳನ್ನು ದೂರವಿಡಿ | ವಿಧಾನಸಭೆಯಲ್ಲಿ ರೂಪಕಲಾ ತಾಕೀತು
Team Udayavani, Feb 5, 2021, 3:29 PM IST
ಕೆಜಿಎಫ್: ಎಂ.ಜಿ.ಮಾರುಕಟ್ಟೆ ಇ ಹರಾಜಿನ ವಿಚಾರವಾಗಿ ಸರ್ಕಾರದ ಜವಾಬ್ದಾರಿ ಸ್ಥಾನದಲ್ಲಿರುವವರು ವರ್ತಕರನ್ನು ಹಿಂಸಿಸಿ, ಬ್ರೋಕರ್ ಕೆಲಸ ಮಾಡಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಶಾಸಕಿ ಎಂ.ರೂಪಕಲಾ ವಿಧಾನಸಭೆಯಲ್ಲಿ ಗಂಭೀರ ಆರೋಪ ಮಾಡಿದರು.
ಗುರುವಾರ ಎಂ.ಜಿ.ಮಾರುಕಟ್ಟೆಯ ಇ ಹರಾಜು ವಿಚಾರವಾಗಿ ಮಾತನಾಡಿದ ಅವರು,ನೂರು ವರ್ಷದ ಹಿಂದೆ ಬ್ರಿಟಿಷರು ವ್ಯಾಪಾರ ಮಾಡಲು ವರ್ತಕರಿಗೆ ಜಾಗ ಕೊಟ್ಟಿವರು. ನಂತರ ವ್ಯಾಪಾರಸ್ಥರು ಸ್ವಂತ ಖರ್ಚಿನಲ್ಲಿ ಅಂಗಡಿ ಕಟ್ಟಿಕೊಂಡರು. ನನ್ನ ಕ್ಷೇತ್ರದಲ್ಲಿ 1500 ಅಂಗಡಿಗಳು ಒಂದೇ ಸ್ಥಾನದಲ್ಲಿದೆ. ಸರ್ಕಾರದ ಜವಾಬ್ದಾರಿ ಸ್ಥಾನದಲ್ಲಿರುವವರು, ಅವರನ್ನು ದಲ್ಲಾಳಿಗಳು ಎಂದು ಹೇಳಲಾ, ಅಥವಾ ಬ್ರೋಕರ್ ಎಂದು ಹೇಳಲಾ, ಅವರು ವರ್ತಕರನ್ನು ಹಿಂಸಿಸಿ ಹಣ ಕೀಳುತ್ತಿದ್ದಾರೆ. ಮಳಿಗೆಯನ್ನು ನಿಮಗೇ ಮಾಡಿಕೊಡುತ್ತೇವೆ ಎಂದು ದಾರಿ ತಪ್ಪಿಸುತ್ತಿದ್ದಾರೆ.
ಠೇವಣಿ, ಬಾಡಿಗೆ ಪಾವತಿ: ಸರ್ಕಾರ ನ್ಯಾಯಾಲಯ ಟೆಂಡರ್ ಮಾಡಬೇಕೆಂದು ಹೇಳಿದೆ. ಅವರದೇ ಪಕ್ಷದ ಮುಖಂಡರು ಬಡವರು,ಸಕೂಲಿ ಕಾರ್ಮಿಕರಿಂದ 2 ರಿಂದ 5 ಕೋಟಿ ಹತ್ತು ತಿಂಗಳಿಂದ ಹಣ ವಸೂಲಿ ಮಾಡಿದ್ದಾರೆ. ವರ್ತಕರು ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದಾರೆ. ಲೋಕೋಪಯೋಗಿ ಇಲಾಖೆ ನಿಗದಿ ಮಾಡುವ ಠೇವಣಿ ಮತ್ತು ಬಾಡಿಗೆ ಕಟ್ಟುತ್ತೇವೆ ಎಂದಿದ್ದಾರೆ.
ನ್ಯಾಯ ಒದಗಿಸಿ: ಮಾರುಕಟ್ಟೆ ನಂಬಿ ಸಾವಿರಾರು ಕುಟುಂಬಗಳು ಜೀವನ ಮಾಡುತ್ತಿವೆ.ಈ ಹಿನ್ನೆಲೆಯಲ್ಲಿ ಪೌರಾಡಳಿತ ಸಚಿವರು ಮಧ್ಯವರ್ತಿಗಳನ್ನು ದೂರವಿಡಬೇಕು. ವಿಶೇಷ ಪ್ರಕರಣ ಎಂದು ಪರಿಗಣಿಸಿ, ವರ್ತಕರಿಗೆ ನ್ಯಾಯ ಒದಗಿಸಬೇಕು ಎಂದು ಕೋರಿದರು.
ಇದನ್ನೂ ಓದಿ :ಭಗವಾನ್ ಮುಖಕ್ಕೆ ಮಸಿ ಬಳಿದಿದ್ದು ಘಟನೆ ಅಲ್ಲ, ಪ್ರತಿಭಟನೆ: ಪೇಜಾವರ ಶ್ರೀ
ಕಾಡಾನೆ ಹಾವಳಿ ನಿಯಂತ್ರಿಸಿ: ತಾಲೂಕಿನಲ್ಲಿ ಕಾಡಾನೆಗಳು ನಡೆಸುತ್ತಿರುವ ದಾಳಿ ಗಳ ಬಗ್ಗೆ ಕೂಡ ಅವರು ಪ್ರಸ್ತಾಪಿಸಿ, ಬೆಳೆದ ಬೆಳೆ ಕೈಗೆ ಬರದೆ ರೈತರು ಕಷ್ಟಪಡುತ್ತಿದ್ದಾರೆ. ಅವರ ನೋವು ಹೇಳತೀರದು. ಆದ್ದರಿಂದ ಆನೆಗಳ ಹಾವಳಿಗೆಗೆ ಕಡಿವಾಣ ಹಾಕಬೇಕು ಎಂದು ಅಗ್ರಹಿಸಿದರು.
ಪ್ರತಿನಿತ್ಯ ಹತ್ತರಿಂದ ಹದಿನೈದು ಸಾವಿರ ಕಾರ್ಮಿ ಕರು ಬೆಂಗಳೂರು, ವೈಟ್ಫಿಲ್ಡ್ ಮೊದಲಾದ ಜಾಗಗಳಿಗೆ ಕೆಲಸ ಅರಿಸಿಕೊಂಡು ಹೋಗುತ್ತಿದ್ದಾರೆ. ಕೋವಿಡ್ನಿಂದಾಗಿ ರೈಲುಗಳು ನಿಂತಿವೆ. ಉದ್ಯೋಗ ಸೃಷ್ಟಿಸುವ ಕೆಲಸ ನನ್ನ ಕ್ಷೇತ್ರದಲ್ಲಿ ಆಗಬೇಕು ಎಂದು ಕೋರಿದರು.