ಗ್ರಾಮೀಣ ಪ್ರತಿಭೆಗೆ ಒಲಿದ 8 ಸರ್ಕಾರಿ ಹುದ್ದೆ
ಚಿಕ್ಕಮನ್ನಾಪುರ ಯುವಕನ ಸಾಧನೆಗೆ ಎಲ್ಲರ ಪ್ರಶಂಸೆ
Team Udayavani, Apr 29, 2021, 11:00 PM IST
ವರದಿ: ಮಲ್ಲಪ್ಪ ಮಾಟರಂಗಿ
ಯಲಬುರ್ಗಾ: ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆಯುವುದು ಕಷ್ಟ. ಅಂಥದ್ದರಲ್ಲಿ ತಾಲೂಕಿನ ಚಿಕ್ಕಮನ್ನಾಪುರದ ಯುವಕ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಬರೆದು 8 ಸರ್ಕಾರಿ ಹುದ್ದೆಗೆ ಆಯ್ಕೆಯಾಗಿದ್ದಾನೆ.
ತಾಲೂಕಿನ ಬೋದುರು ಗ್ರಾಪಂ ವ್ಯಾಪ್ತಿಯ ಚಿಕ್ಕಮನ್ನಾಪುರ ಗ್ರಾಮದ ಸಂಗನಗೌಡ ಮಾಲಿಪಾಟೀಲ ಎಂಬಾತನೇ ಈ ಸಾಧನೆ ಮಾಡಿದ ಯುವಕ.
ಪ್ರಯತ್ನ:
ಸಂಗನಗೌಡ ಮಾಲಿಪಾಟೀಲ 2016ರಿಂದ ಸರ್ಕಾರಿ ನೌಕರಿಗಾಗಿ ಅರ್ಜಿ ಹಾಕಲು ಪ್ರಾರಂಭಿಸಿದ್ದಾರೆ. ಅಂದಿನಿಂದ ಸರ್ಕಾರ ಕರೆದ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆದಿದ್ದಾರೆ. ಪ್ರಾರಂಭದಲ್ಲಿ ಕೆಲ ಪರೀಕ್ಷೆಗಳಲ್ಲಿ ಕಡಿಮೆ ಅಂಕದಿಂದ ವಂಚಿತರಾದರು.
ಆಯ್ಕೆಯಾದ ಹುದ್ದೆಗಳು:
ಪ್ರಥಮ ದರ್ಜೆ ಸಹಾಯಕ (ಎಫ್ ಡಿಎ) (2019), ದ್ವಿತೀಯ ದರ್ಜೆ ಸಹಾಯಕರು (ಎಸ್ಡಿಎ) (2019), ಮೌಲಾನ ಅಜಾದ ಶಾಲಾ ಶಿಕ್ಷಕರು (2021), ಬಿಸಿಎಂ ವಾರ್ಡನ್ (2021), ಮೊರಾರ್ಜಿ ದೇಸಾಯಿ ಮೆಟ್ರಿಕ ಪೂರ್ವ ವಸತಿ ಶಾಲೆ ವಾರ್ಡನ್ (2021), ನವೋದಯ ಆಫೀಸ್ ಸೂಪರಿಟೆಂಡೆಂಟ್ (2021), ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಮಾಜ ವಿಜ್ಞಾನ ಶಿಕ್ಷಕ(2021) ಹುದ್ದೆಗಳಿಗೆ ಆಯ್ಕೆಯಾಗಿದ್ದಾನೆ.
ಕುಗ್ರಾಮದ ಪ್ರತಿಭೆ:
ಸಂಗನನಗೌಡ ಮಾಲಿಪಾಟೀಲ ಸ್ವಗ್ರಾಮ ಚಿಕ್ಕಮನ್ನಾಪುರ ಹಲವು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ಜತೆಗೆ ತಾಲೂಕಿನಲ್ಲಿಯೇ ಅತ್ಯಂತ ಹಿಂದುಳಿದ ಕಟ್ಟಕಡೆ ಗ್ರಾಮವಾಗಿದೆ. ತೀರ ಬಡತನದ ಹಿನ್ನೆಲೆಯುಳ್ಳ ಕುಟುಂಬದವರಾದ ಸಂಗನಗೌಡ ಅವರ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದು ಅವರ ಸಹೋದರ ಶರಣಪ್ಪ. ಈತ ಹಲವಾರು ಪರೀಕ್ಷೆಗಳಲ್ಲಿ ವಿಫಲನಾದ ಸಂದರ್ಭದಲ್ಲಿ ಈತನ ಸಹೋದರ ಧೈರ್ಯ ತುಂಬಿ ಸಹಾಯ, ಸಹಕಾರ ನೀಡಿದ್ದಾರೆ.
ಸರ್ಕಾರಿ ಶಾಲೆಯಲ್ಲಿ ಅಭ್ಯಾಸ:
ಸಂಗನಗೌಡ ತಮ್ಮ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿಯೇ ಮುಗಿಸಿದ್ದಾರೆ. ನಿರಂತರ ಪ್ರಯತ್ನದಿಂದಲೇ ಇಷ್ಟೆಲ್ಲ ಸಾಧನೆ ಮಾಡಲು ಸಾಧ್ಯವಾಯಿತು, ಕೆಲವರಲ್ಲಿ ಸರ್ಕಾರಿ ಶಾಲೆಯಲ್ಲಿ ಕಲಿತರೆ ಕೆಲಸ ಸಿಗುವುದಿಲ್ಲ ಎಂಬ ಕೀಳರಿಮೆ ಇದೆ. ಅದನ್ನು ತೊಲಗಿಸಬೇಕು. ಸರ್ಕಾರಿ ಶಾಲೆಯಲ್ಲಿಯೂ ಉತ್ತಮ ಶಿಕ್ಷಣ ದೊರೆಯುತ್ತದೆ. ಕುಟುಂಬದ ಸಹಕಾರ, ಸ್ನೇಹಿತರು, ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಪದವಿವರೆಗಿನ ಶಿಕ್ಷಕರು, ಉಪನ್ಯಾಸಕರು ಪ್ರೋತ್ಸಾಹ ನೀಡಿದ್ದಾರೆ. ಹೀಗಾಗಿ ಇದೆಲ್ಲ ಸಾಧ್ಯವಾಯಿತು ಎನ್ನುತ್ತಾರೆ ಸಂಗನಗೌಡ.
ಕೆಎಎಸ್ ಗುರಿ ತಲುಪಲಿ:
ನಮ್ಮೂರ ಯುವಕ ಕೆಎಎಸ್ ಗ್ರೇಡ್ ಅಧಿಕಾರಿಯಾಗಬೇಕು. ಕಠಿಣ ಪರಿಶ್ರಮದೊಂದಿಗೆ ನಿರಂತರ ಅಭ್ಯಾಸ ಮುಂದುವರಿಸಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದೆ ಗ್ರಾಮದ ಸ್ನೇಹಿತರ ಬಳಗ. 2017ರಲ್ಲಿ ಕೆಎಎಸ್ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಕಾರಣಾಂತರಗಳಿಂದ ಮೇನ್ಸ್ ಪರೀಕ್ಷೆಗೆ ಹಾಜರಾಗಿರಲಿಲ್ಲ.