ಉದ್ಯಾನವನ-ಅಂಚೆ ಕಚೇರಿ ನಿರ್ಮಿಸಲು ಸಂಸದರಿಗೆ ಮನವಿ
Team Udayavani, Jun 17, 2019, 10:25 AM IST
ಕಾರಟಗಿ: ಪಟ್ಟಣದ ಜಾಗೃತ ಯುವಕ ಸಂಘದ ಪದಾಧಿಕಾರಿಗಳು ಸಂಸದ ಕರಡಿ ಸಂಗಣ್ಣ ಅವರಿಗೆ ಮನವಿ ಸಲ್ಲಿಸಿದರು.
ಕಾರಟಗಿ: ಪಟ್ಟಣದಲ್ಲಿನ ಅಂಚೆ ಕಚೇರಿಗಾಗಿ ಮೀಸಲಿಟ್ಟ ನಿವೇಶನದಲ್ಲಿ ನೂತನ ಅಂಚೆ ಕಚೇರಿ ಕಟ್ಟಡ ಹಾಗೂ ಪಟ್ಟಣದ ಕೆರೆಯ ಪ್ರದೇಶದ ವ್ಯಾಪ್ತಿಯಲ್ಲಿ ಉದ್ಯಾನವನ ನಿರ್ಮಿಸುವಂತೆ ಆಗ್ರಹಿಸಿ ಸ್ಥಳೀಯ ಜಾಗೃತ ಯುವಕ ಸಂಘ ಕೊಪ್ಪಳ ಲೋಕಸಭಾ ಸದಸ್ಯ ಸಂಗಣ್ಣ ಕರಡಿ ಅವರಿಗೆ ಮನವಿ ಸಲ್ಲಿಸಿತು.
ನಂತರ ಮಾತನಾಡಿದ ಸಂಘದ ಸದಸ್ಯರು, ಕಾರಟಗಿ ಪಟ್ಟಣ ತಾಲೂಕು ಕೇಂದ್ರವಾಗಿದ್ದು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಈ ನಿಟ್ಟಿನಲ್ಲಿ ಪಟ್ಟಣದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆಯಬೇಕಾಗಿವೆ. ಪಟ್ಟಣದ ಕೆರೆ ಪ್ರದೇಶದಲ್ಲಿ ಕ್ರೀಡಾಂಗಣ ಅವಶ್ಯಕತೆ ಇದೆ. ಹಾಗೆಯೇ ಇಗಿರುವ ಅಂಚೆ ಕಚೇರಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಅಂಚೆ ಕಚೇರಿಗೆ ತನ್ನದೇ ಆದ ನಿವೇಶನ ಹೊಂದಿರುವುದರಿಂದ ಪಟ್ಟಣದ ಜನಸಂಖ್ಯೆಗೆ ಅನುಗುಣವಾಗಿ ಹಾಗೂ ತಾಲೂಕು ಕೇಂದ್ರದ ವ್ಯಾಪ್ತಿಯಲ್ಲಿ ಇರುವ ಅಂಚೆ ಕಚೇರಿ ತನ್ನದೇ ಸ್ವಂತ ಕಟ್ಟಡ ನಿರ್ಮಾಣವಾದರೆ ಸಿಬ್ಬಂದಿಗೆ ಕಾರ್ಯ ನಿರ್ವಹಿಸಲು ಹಾಗೂ ಗ್ರಾಹಕರಿಗೆ ವ್ಯವಹರಿಸಲೂ ಸಹಾಯಕವಾಗುತ್ತದೆ. ಮುಂದಿನ ದಿನಗಳಲ್ಲಿ ರೈಲ್ವೆ ಕಾಮಗಾರಿ ಸಂಪೂರ್ಣ ಮುಗಿದ ನಂತರ ಕಾರಟಗಿಯಿಂದ ಹುಬ್ಬಳ್ಳಿಗೆ ಮತ್ತು ಬೆಂಗಳೂರಿಗೆ ರೈಲ್ವೆ ಸೌಲಭ್ಯ ಕಲ್ಪಿಸಲು ತಾವುಗಳು ಶ್ರಮಿಸಬೇಕು ಎಂದರು.
ನಂತರ ಮಾತನಾಡಿದ ಸಂಸದರು, ಈಗಾಗಲೇ ಗಂಗಾವತಿಯಿಂದ ಹುಬ್ಬಳ್ಳಿಗೆ ರೈಲು ಸಂಚಾರ ಆರಂಭಿಸಲಾಗಿದೆ. ನಿಮ್ಮ ಮನವಿಯಂತೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ರೈಲು ಸಂಚಾರಕ್ಕೆ ಕ್ರಮಕೈಗೊಳ್ಳಲಾಗುವುದು. ಅಂಚೆ ಕಚೇರಿಯ ಕಟ್ಟಡ ಕುರಿತು ಸಂಬಂಧಿಸಿದ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುತ್ತೇನೆ ಎಂದರು.
ಈ ಸಂದರ್ಭದಲ್ಲಿ ಜಾಗೃತ ಯುವಕ ಸಂಘದ ಅಧ್ಯಕ್ಷ ಶರಣಪ್ಪ ಕೋಟ್ಯಾಳ, ಕಾರ್ಯದರ್ಶಿ ರುದ್ರೇಶ ಮಂಗಳೂರ, ಕಜಾಂಚಿ ಬಸವರಾಜ ಶೇಟ್ಟರ, ಸಂಘದ ಪ್ರಮುಖರಾದ ಪ್ರಹ್ಲಾದ ಜೋಶಿ, ಶರಣಯ್ಯಸ್ವಾಮಿ, ಹುಚ್ಚಪ್ಪ ಕುರಿ ಮತ್ತಿತರರು ಇದ್ದರು.