ಇಂದಿನಿಂದ ಬಸ್ ಸಂಚಾರ
Team Udayavani, May 19, 2020, 5:56 AM IST
ಕೊಪ್ಪಳ: ಸರ್ಕಾರ ಮಂಗಳವಾರದಿಂದ ಸಾರಿಗೆ ಬಸ್ ಸಂಚಾರಕ್ಕೆ ಆರಂಭವಾಗಲಿದೆ ಎಂದು ಘೋಷಿಸಿದ್ದು, ಕೊಪ್ಪಳ ಘಟಕದಿಂದಲೂ ಬಸ್ಗಳು ರಸ್ತೆಗಿಳಿಯಲಿವೆ.
ಜಿಲ್ಲೆಯ ವ್ಯಾಪ್ತಿಯೊಳಗೆ ಸೇರಿ ಅನ್ಯ ಜಿಲ್ಲೆಗಳಿಗೂ ಸಾರಿಗೆ ಸೇವೆ ಲಭ್ಯವಾಗಲಿದೆ. ಜಿಲ್ಲೆಯಲ್ಲಿ ಲಾಕ್ಡೌನ್ ಮಧ್ಯದಲ್ಲಿ ತಾಲೂಕು-ತಾಲೂಕು ಕೇಂದ್ರ ಹಾಗೂ ಜಿಲ್ಲಾ ಕೇಂದ್ರದಿಂದ-ತಾಲೂಕು ಕೇಂದ್ರಕ್ಕೆ ಮಾತ್ರ ಬಸ್ ಸಂಚಾರ ಆರಂಭಿಸಲಾಗಿತ್ತು. ಈಗ ಲಾಕ್ಡೌನ್ ಮುಕ್ತಾಯವಾಗಿದ್ದು, ತಾಲೂಕು- ಹೋಬಳಿ ಕೇಂದ್ರಗಳಿಗೆ ಬಸ್ಗಳ ಓಡಾಟಕ್ಕೆ ಕೊಪ್ಪಳ ಘಟಕವು ಯೋಜನೆ ರೂಪಿಸಿದೆ. ಮೇ 19ರಿಂದ ಜಿಲ್ಲೆಯ ಒಳಗೆ 35 ಬಸ್ ಗಳು ವಿವಿಧ ಘಟಕಗಳಿಂದ ಸಂಚಾರ ನಡೆಸಲಿವೆ. ಒಂದು ಬಸ್ನಲ್ಲಿ 25 ಜನ ಮಾತ್ರ ಪ್ರಯಾಣಿಸಲು ಅವಕಾಶ ಕಲ್ಪಿಸಲಿದೆ.
ಈ ಮೊದಲು ಗ್ರಾಮೀಣ ನಿಲ್ದಾಣಗಳಲ್ಲಿ ಬಸ್ ಗಳನ್ನು ನಿಲ್ಲಿಸುತ್ತಿರಲಿಲ್ಲ. ಮೇ 19ರಿಂದ ಕೆಲವು ಹಳ್ಳಿಗಳಲ್ಲಿ ಬಸ್ ನಿಲುಗಡೆಯಾಗಲಿವೆ. ಇನ್ನು ಅನ್ಯ ಜಿಲ್ಲೆಗಳಿಗೂ ಬಸ್ಗಳ ಸಂಚಾರ ಆರಂಭಿಸಲು ಕೊಪ್ಪಳ ಘಟಕವುಮುಂದಾಗಿದ್ದು, ಹುಬ್ಬಳ್ಳಿ-02, ವಿಜಯಪುರ-04, ರಾಯಚೂರು-06, ಹೊಸಪೇಟೆ-04, ದಾವಣಗೆರೆ-02, ಹಿರೇಕೆರೂರು-01, ರೋಣ-01, ಗದಗ-04 ಬಸ್ಗಳು ಮೇ 19ರಿಂದ ಸಂಚಾರ ಆರಂಭಿಸಲಿವೆ. ಪ್ರತಿ ಬಸ್ನಲ್ಲಿ 25 ಪ್ರಯಾಣಿಕರಿಗೆ ಮಾತ್ರ ಅವಕಾಶವಿದೆ.