ನದಿ ಜೋಡಣೆಗೆ ಕೇಂದ್ರ ಸಿದ್ಧ
Team Udayavani, Jun 3, 2019, 3:20 PM IST
ಕುಕನೂರು: ಯಡಿಯಾಪುರ ಗ್ರಾಮದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಂಸದ ಕರಡಿ ಸಂಗಣ್ಣ ಮಾತನಾಡಿದರು.
ಕುಕನೂರು: ದೇಶದ ರೈತರಿಗೆ ಅನುಕೂಲವಾಗಲು ಮಳೆ ಆಶ್ರಿತ ಭೂಮಿಯನ್ನು ನೀರಾವರಿಯನ್ನಾಗಿಸಲು ಕೇಂದ್ರ ಬಿಜೆಪಿ ಸರ್ಕಾರ ಆರು ಲಕ್ಷ ಕೋಟಿ ಅನುದಾನವನ್ನು ದೇಶದ ನದಿ ಜೋಡಣೆಗೆ ನೀಡಲು ಸಿದ್ಧವಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ತಾಲೂಕಿನ ಯಡಿಯಾಪುರ ಗ್ರಾಮದಲ್ಲಿ ರವಿವಾರ ನಡೆದ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಉತ್ತಮ ಆಡಳಿತದಿಂದ ವಿಶ್ವವೇ ಭಾತರದ ಕಡೆ ತಿರುಗಿ ನೋಡುತ್ತಿದೆ. ಪ್ರಧಾನಿ ಇನ್ಮುಂದೆ ಕೂಡ ರೈತರು, ಯೋಧರು, ಕೂಲಿ ಕಾರ್ಮಿಕರನ್ನು ಆರ್ಥಿಕವಾಗಿ ಬಲಿಷ್ಠರನ್ನಾಗಿಸುವ ಕನಸು ಹೊಂದಿದ್ದಾರೆ ಎಂದರು.
ರೈತನ ಮಗ ಪರಶುರಾಮ ಮಾಗೇರಿ ಸತತ ಐದನೇ ಬಾರಿಗೆ ಸಾಮೂಹಿಕ ಮಾಡುತ್ತಿರುವುದು ಸಣ್ಣ ವಿಷಯವಲ್ಲ. ವರ್ಷಪೂರ್ತಿ ದುಡಿದ ವರಮಾನ ಎಲ್ಲಾ ಸಮಾಜದ ಹಿತಕ್ಕಾಗಿ ಖರ್ಚು ಮಾಡುವುದು ಹೆಮ್ಮೆಯ ಸಂಗತಿ. ಪರಶುರಾಮನ ಸಹೋದರಿ ಸಿಆರ್ಪಿಎಫ್ನಲ್ಲಿ ಸೇವೆ ಸಲ್ಲಿಸುತ್ತಿರುವುದು ಯುವತಿಯರಿಗೆ ಪ್ರೇರಣೆಯಾಗಿದ್ದಾಳೆ ಎಂದರು. ಸಾನ್ನಿಧ್ಯ ವಹಿಸಿದ್ದ ಅನ್ನದಾನೇಶ್ವರ ಶಾಖಾಮಠದ ಮಹಾದೇವ ದೇವರು ಮಾತನಾಡಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ದಂಪತಿ ತಂದೆ, ತಾಯಿಯನ್ನು ಗೌರವದಿಂದ ಕಾಣಬೇಕು ಎಂದರು. ನಂತರ ಪರಶುರಾಮ ಮಗಳ ನಾಮಕರಣ ನೆರವೇರಿತು. ಕುದರಿಮೋತಿಯ ನಿರಂಜನ ವಿಜಯಮಾಂತೇಶ ಸ್ವಾಮಿಗಳು. ಕುಷ್ಟಗಿಯ ವೀರಸಂಗಮೇಶ್ವರ ಶ್ರೀಗಳು. ಯಲಬುರ್ಗಾ ಶ್ರಿಧರ ಮುರಡಿ ಶ್ರೀಗಳು, ಕುಕನೂರಿನ ಪ್ರಭುಲಿಂಗ ದೇವರು, ಗಂಗಾವತಿ ಶಾಸಕ ಪರಣ್ಣ ಮನವಳ್ಳಿ, ರಾಮಣ್ಣ ಹೊಸಮನಿ, ಗಂಗಮ್ಮ ಗುಳಗಣ್ಣವರ್, ಕಳಕಪ್ಪ ಕಂಬಳಿ, ವೀರನಗೌಡ ಬಳೂಟಗಿ ಇತರರಿದ್ದರು.