ಹದಗೆಟ್ಟ ಕ್ಯಾದಗುಂಪಾ ರಸ್ತೆ
Team Udayavani, Nov 5, 2019, 3:14 PM IST
ದೋಟಿಹಾಳ: ಗ್ರಾಮದ ಮಧ್ಯದಲ್ಲಿರುವ ಕೊಪ್ಪಳ-ಕ್ಯಾದಗುಂಪಾ ರಾಜ್ಯ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದೆ ಕೇವಲ 4 ಕಿ.ಮೀ. ಮಾತ್ರ ಬಾಕಿ ಉಳಿದಿದ್ದು, ಪ್ರಯಾಣಿಕರ ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ.
ಕುಷ್ಟಗಿಯಿಂದ ಗೋತಗಿ ಕ್ರಾಸ್ವರೆಗೆ ಕೊಪ್ಪಳ-ಕ್ಯಾದಿಗುಂಪಾ ರಾಜ್ಯ ಹೆದ್ದಾರಿ ಅಭಿವೃದ್ಧಿ ಪಡಿಸಲಾಗಿದ್ದು, ಗೋತಗಿ ಕ್ರಾಸ್ನಿಂದ ಕ್ಯಾದಗುಂಪಾ ಗ್ರಾಮದವರೆಗಿನ ನಾಲ್ಕು ಕಿ.ಮೀ. ಮಾತ್ರ ಕಾಮಗಾರಿ ನಡೆದಿಲ್ಲ. ಒಂದು ತಿಂಗಳಿಂದ ಸುರಿಯುತ್ತಿರುವ ಮಳೆಯಿಂದ ರಸ್ತೆಯ ಅನೇಕ ಕಡೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿವೆ. ಮಳೆ ಬಂದಾಗ ಗುಂಡಿಗಳಲ್ಲಿ ನೀರು ನಿಲ್ಲುತ್ತದೆ. ಇದರಿಂದ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ಉಳಿದ 4 ಕಿ.ಮೀ ರಸ್ತೆಯ ಅಭಿವೃದ್ಧಿ ಪಡಿಸುವ ಕಾರ್ಯವಾಗಬೇಕು. ಈ ರಸ್ತೆ ಸ್ಥಿತಿಯ ಬಗ್ಗೆ ಮಾಹಿತಿ ಇದ್ದರು ಪಿಡಬ್ಲೂ ಡಿ ಇಲಾಖೆಯವರು ಯಾವುದೇ ಕೆಲಸಕ್ಕೆ ಮುಂದಾಗುತ್ತಿಲ್ಲ ಎಂದು ವಾಹನ ಸವಾರರು ಆರೋಪಿಸುತ್ತಿದ್ದಾರೆ.
ಪಿಡಬುಡಿ ಇಲಾಖೆಯವರ ಪ್ರಕಾರ ಈ ಹಿಂದೆ ನಡೆದ ಕೊಪ್ಪಳ-ಕ್ಯಾದಿಗುಂಪಾ ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿ ಕೆಲಸ ಗೋತಗಿ ಕ್ರಾಸ್ ವರೆಗೆ ಮಾತ್ರ ಟೆಂಡರ್ ಆಗಿತ್ತು. ಹೀಗಾಗಿ ಅಲ್ಲಿಯವರೆಗೆ ಮಾತ್ರ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ. ಆದರೆ ಉಳಿದ 4 ಕಿ.ಮೀ ರಸ್ತೆ ಕಾಮಗಾರಿಯನ್ನು ಯಾವುದಾದರು ಅಭಿವೃದ್ಧಿ ಕಾಮಗಾರಿಯಲ್ಲಿ ಸೇರಿಸಿ ಕೈಗೊಂಡರೆ ಸಾರ್ವಜನಿಕರಿಗೆ ಅನುಕೂವಾಗುತ್ತದೆ. ಇಲ್ಲದಿದ್ದರೆ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಮತ್ತು ಪ್ರಯಾಣಿಕರು ಹಿಡಿಶಾಪ ಹಾಕುವುದರಲ್ಲಿ ಸಂಶಯವಿಲ್ಲ.