ಗವಿಸಿದ್ದೇಶ್ವರ ಜಾತ್ರೆ; 22 ವಿಚೇತನ ಜೋಡಿಗಳಿಗೆ ಕಂಕಣ ಭಾಗ್ಯ: ಜೀವನೋಪಾಯಕ್ಕೂ ಸಹಾಯ
ದಕ್ಷಿಣ ಭಾರತದ ಕುಂಭಮೇಳ ಅಜ್ಜನ ಜಾತ್ರೆಯಲ್ಲಿ ಸ್ವಾಮೀಜಿಗಳ ಸಾನಿಧ್ಯ
Team Udayavani, Jan 20, 2024, 6:43 PM IST
ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಮಠದಿಂದ ಜ.21 ರಂದು 22 ವಿಕಲಚೇತನ ಜೋಡಿಗಳಿಗೆ ಕಂಕಣ ಭಾಗ್ಯ ಕಲ್ಪಿಸಲು ಸಿದ್ದವಾಗಿದೆ. ಜತೆಗೆ ಎಲ್ಲ ಜೋಡಿಗೂ ಜೀವನೋಪಾಯಕ್ಕಾಗಿ ಸೆಲ್ಕೋ ಕಂಪನಿಯಿಂದಲೂ Xerox ಯಂತ್ರ, ಸಣ್ಣ ಅಂಗಡಿಯ ನೆರವು ಸಿಗಲಿದೆ.
ಪ್ರತಿ ವರ್ಷವೂ ಶ್ರೀ ಗವಿಮಠವು ಜಾತ್ರೆಯ ಸಮಯದಲ್ಲಿ ಒಂದೊಂದು ವಿಶಿಷ್ಟ ಹಾಗೂ ವಿಭಿನ್ನ ಜಾಗೃತಿಯ ಅಭಿಯಾನ, ಕಾರ್ಯಕ್ರಮಗಳ ಮೂಲಕ ನಾಡಿನ ಭಕ್ತರ ಗಮನ ಸೆಳೆಯುತ್ತಿದೆ. ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಮಠವನ್ನೇ ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಿ ಸಾವಿರಾರು ಜನರ ಪ್ರಾಣ ಉಳಿಸಿ ನಾಡಿನೆಲ್ಲೆಡೆ ಹೆಸರಾಗಿತ್ತು. ಇದಲ್ಲದೇ ಪರಿಸರ ಜಾಗೃತಿ, ಜಲ ಸಂರಕ್ಷಣೆ, ಹಿರೇಹಳ್ಳ ಸ್ವಚ್ಛತೆ, ಕೆರೆಗಳ ಹೂಳೆತ್ತುವುದು ಸೇರಿದಂತೆ ಪ್ರತಿಭಾನ್ವಿತರಿಗೆ ದಿನದ 24 ಗಂಟೆಯೂ ಅಭ್ಯಾಸಕ್ಕಾಗಿ ಗ್ರಂಥಾಲಯದ ಸೌಕರ್ಯವನ್ನು ಶ್ರೀಮಠದಲ್ಲಿ ಕಲ್ಪಿಸಿ ಹೆಸರಾಗಿದೆ.
ಇದಲ್ಲದೇ ದೇಹದಾನ, ನೇತ್ರದಾನ, ರಕ್ತದಾನದಂತ ಸಮಾಜಿಕ ಜಾಗೃತಿಗಳು ಜಾತ್ರೆಯಲ್ಲಿ ಪ್ರತಿ ವರ್ಷ ಮೊಳಗುತ್ತಿವೆ. ಈ ಬಾರಿ ವಿಶೇಷವೆಂಬಂತೆ ಕಾಯಕ ದೇವೋಭವ ಎನ್ನುವ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡು ಜನರಲ್ಲಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಕಾರ್ಯಕ್ಕೂ ಅಣಿಯಾಗಿದೆ.
ಅಲ್ಲದೇ, ವಿಕಲಚೇತನರ ಮೇಲೆ ಹೆಚ್ಚಿನ ಒಲವು ತೋರಿಸಿರುವ ಶ್ರೀಮಠವು ಅವರಿಗೆ ಕಲ್ಯಾಣ ಭಾಗ್ಯ ಕರುಣಿಸಲು ಮುಂದಾಗಿ ಕಳೆದ ತಿಂಗಳೇ, ಯಾರಾದರೂ ಜೋಡಿಗಳು ಮದುವೆ ಮಾಡಿಕೊಳ್ಳುವಂಥ ಇಚ್ಛೆ ವ್ಯಕ್ತಪಡಿಸಿದಲ್ಲಿ ಮಠದಲ್ಲಿ ನೊಂದಾಯಿಸಲೂ ಕರೆ ನೀಡಿತ್ತು. ಅದರಂತೆ ಜ.21 ರಂದು ಮದುವೆ ಮಾಡಿಕೊಡುವ ಯೋಜನೆ ರೂಪಿಸಿತ್ತು. ಪ್ರಸ್ತುತ 22 ಜೋಡಿಗಳು ಮದುವೆಗೆ ಹೆಸರು ನೊಂದಣಿ ಮಾಡಿಕೊಂಡಿವೆ.
ಜ.27 ರಂದು ಗವಿಸಿದ್ದೇಶ್ವರ ಮಹಾ ರಥೋತ್ಸವ ನಡೆಯಲಿದ್ದು ಆ ಪ್ರಯುಕ್ತ ಜ.21 ರಂದು ಬೆಳಗ್ಗೆ 11.30 ಗಂಟೆಗೆ ಮಠದ ಯಾತ್ರಿನಿವಾಸದ ಶಾಂತವನದಲ್ಲಿ ವಿಶೇಷ ಚೇತನರ ಬದುಕಿಗೆ ವಿಶೇಷ ಚೈತನ್ಯ ಒದಗಿಸಲು ಸಜ್ಜಾಗಿ ಉಚಿತ ಸಾಮೂಹಿಕ ವಿವಾಹ ನೆರವೇರಿಸಲು ನಿರ್ಧರಿಸಿದೆ. ಹೆಸರು ನೊಂದಾಯಿಸಿದ ನವಜೋಡಿಗಳಿಗೆ ಮದುವೆಯ ನಂತರ ಉತ್ತಮ ಜೀವನೋಪಾಯಕ್ಕೆ ಅನುವು ಮಾಡಿಕೊಡಲು ಬೆಂಗಳೂರು ಸೆಲ್ಕೋ ಪೌಂಡೇಶನ್ನಿಂದ 1 Xerox ಯಂತ್ರ, ಪೆಟ್ಟಿ ಶಾಪ್ (ಸಣ್ಣ ಅಂಗಡಿ) ವ್ಯವಸ್ಥೆ ಮಾಡಲಿದೆ.
ಈ ಕಾರ್ಯಕ್ರಮದಲ್ಲಿ ಬಿಜಕಲ್ನ ವಿರಕ್ತಮಠದ ಶ್ರೀ ಶಿವಲಿಂಗ ಮಹಾಸ್ವಾಮಿಗಳು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಘನಶ್ಯಾಮ ಬಾಂಡಗೆ, ಸೆಲ್ಕೋ ಕಂಪನಿ ವಲಯ ವ್ಯವಸ್ಥಾಪಕ ಮಂಜುನಾಥ ಭಾಗವತ, ಜಿಲ್ಲಾ ವಿಶೇಷಚೇತನ ಹಾಗೂ ಕಲ್ಯಾಣಯೋಜನಾಅಧಿಕಾರಿ ಶ್ರೀದೇವಿ ನಿಡಗುಂದಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ತಿಪ್ಪಣ್ಣ ಶೃಂಗೇರಿ ಅವರು ಭಾಗವಹಿಸಲಿದ್ದಾರೆ.
ಸಾಮೂಹಿಕ ವಿವಾಹ ಮಹೋತ್ಸವವು ಸಾಂಪ್ರದಾಯಿಕ ವಿಧಿವಿದಾನಗಳಂತೆ ನಡೆಯಲಿದ್ದು11.30 ಕ್ಕೆ ಮಾಂಗಲ್ಯಧಾರಣ ಕಾರ್ಯಕ್ರಮ ನೆರವೇರುವುದು. ನವ ಜೋಡಿಗಳ ಸಂಬಂಧಿಕರು, ಭಕ್ತರು ಭಾಗವಹಿಸಲಿದ್ದಾರೆ. ಕು. ಶಕುಂತಲಾ ಬಿನ್ನಾಳ ಸಂಗೀತ ಕಾರ್ಯಕ್ರಮ ನಡೆಸುವರು. ಗವಿಮಠದಲ್ಲಿನ ಮಹಾದಾಸೋಹದಲ್ಲಿ ಪ್ರಸಾದ ವ್ಯವಸ್ಥೆ ಇರಲಿದೆ. ಹೆಚ್ಚಿನ ಮಾಹಿತಿಗಾಗಿ 9448263019, 9901501235 ಸಂಖ್ಯೆಗಳನ್ನು ಸಂಪರ್ಕಿಸಲು ಮಠವು ಪ್ರಕಟಣೆಯಲ್ಲಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ