ಭರವಸೆ ಹುಸಿಗೊಳಿಸಿದ ಪ್ರಧಾನಿ ಮೋದಿ
Team Udayavani, Apr 22, 2019, 3:38 PM IST
ಕೊಪ್ಪಳ: ನಗರದ ವಿವಿಧ ವಾರ್ಡ್ಗಳಲ್ಲಿ ಲೋಕಸಭಾ ಮೈತ್ರಿ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಪರ ಜೆಡಿಎಸ್ ಜಿಲ್ಲಾ ವೀಕ್ಷಕ ಸಿ.ಎಂ. ನಾಗರಾಜ ಸೇರಿದಂತೆ ಕಾಂಗ್ರೆಸ್ ಮುಖಂಡರಿಂದ ಜಂಟಿ ಪ್ರಚಾರ ನಡೆಸಿದರು.
ಈ ವೇಳೆ ಸಿ.ಎಂ. ನಾಗರಾಜ ಮಾತನಾಡಿ, ಕೇಂದ್ರ ಸರ್ಕಾರವು ಹಿಂದೆ 2014ರಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿ ಯಾವೊಂದು ಕೆಲಸವನ್ನು ಮಾಡಿಲ್ಲ. ಮೋದಿ ಅವರು ಹೇಳಿದ 15 ಲಕ್ಷ ರೂ. ಯಾರ ಖಾತೆಗೂ ಜಮೆಯಾಗಿಲ್ಲ. ಯುವಕರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದ ಮೋದಿ ಭರವಸೆ ಹುಸಿಗೊಳಿಸಿದ್ದಾರೆ.
ರೈತರಿಗೆ, ಕೃಷಿ ಕಾರ್ಮಿಕರಿಗೆ ಹಿಂದುಳಿದ ವರ್ಗಕ್ಕೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವರ್ಗಕ್ಕೆ ಯಾವುದೇ ಕೊಡುಗೆ ನೀಡದೆ ಕಾಲ ಹರಣ ಮಾಡಿದ್ದಾರೆ. ಬಿಜೆಪಿಯನ್ನು ಕಟ್ಟಿ ಬೆಳೆಸಿದ ಎಲ್.ಕೆ. ಅಡ್ವಾನಿ ಅವರನ್ನು ಮರೆತು ಮೂಲೆಗುಂಪು ಮಾಡಿದ್ದಾರೆ. ಬಿಜೆಪಿಗೆ ಮತ ಹಾಕದೇ ಮೈತ್ರಿ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದರು.
ಈ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ, ಕಾರ್ಯಧ್ಯಕ್ಷ ವೀರೇಶ ಮಹಾಂತಯ್ಯನಮಠ, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಸೈಯದ್, ವಕ್ತಾರ ಮೌನೇಶ ಎಸ್. ವಡ್ಡಟ್ಟಿ, ನಗರಸಭೆ ಸದಸ್ಯರಾದ ಅಮ್ಜದ ಪಟೇಲ್, ಚನ್ನಪ್ಪ ಕೊಟ್ಯಾಳ, ಮುಖಂಡರಾದ ಮಾನ್ವಿ ಪಾಷಾ, ಕಾಟನ ಪಾಷಾ, ಅಯೂಬ್ ಅಡ್ಡೇವಾಲೆ, ವೆಂಕಟೇಶ ಬೆಲ್ಲಪ್ಪ, ಶಫಿ ಗಾರ್ಮೆಂಟ್ಸ್, ಸಲೀಂ ಅಳವಂಡಿ, ಸಿ.ಎಂ. ಹಿರೇಮಠ, ಮಂಜುನಾಥ ಸೊರಟೂರು ಸೇರಿ ಇತರರು ಪಾಲ್ಗೊಂಡಿದ್ದರು.