ಜಿಲ್ಲೆಯಲ್ಲಿ 3250ಕ್ಕೂ ಹೆಚ್ಚು ಕ್ಷಯರೋಗಿಗಳು ಪತ್ತೆ
ರೋಗ ಸಂಪೂರ್ಣ ನಿರ್ಮೂಲನೆಗೆ ಪಣ ತೊಡಿ
Team Udayavani, Mar 5, 2020, 4:02 PM IST
ಕೊಪ್ಪಳ: ಜಿಲ್ಲೆಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿ 2019ರಲ್ಲಿ 3250ಕ್ಕೂ ಹೆಚ್ಚು ರೋಗಿಗಳನ್ನು ಪತ್ತೆ ಹಚ್ಚಲಾಗಿದ್ದು, ಈ ಕಾರ್ಯಕ್ಕೆ ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಭಿಯಾನ ನಿರ್ದೇಶಕರು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಅಧಿಕಾರಿ ಡಾ| ಮಹೇಶ್ ಎಂ.ಜಿ ಅವರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಡಳಿತ ಮತ್ತು ಜಿಪಂ ನೇತೃತ್ವದಲ್ಲಿ ನಿರ್ಮೂಲನೆ ಮೊದಲ ಹೆಜ್ಜೆ ಎಂಬ ಮಹತ್ತರ ಯೋಜನೆ ಹಾಕಿಕೊಂಡು ಪತ್ತೆ ಹಚ್ಚಲು ಪಣ ತೊಡಲಾಗಿದೆ. ಕ್ಷಯರೋಗಿಗಳನ್ನು ಪತ್ತೆ ಹಚ್ಚಲು ಜಿಲ್ಲೆಯ ಎಲ್ಲ ಆಶಾ ಕಾರ್ಯಕರ್ತೆಯರು, ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ಷಯರೋಗ ನಿರ್ಮೂಲನೆಯಲ್ಲಿ ಎಲ್ಲ ರೋಗಿಗಳನ್ನು ಪತ್ತೆ ಹಚ್ಚುವುದು ಅತೀ ಮುಖ್ಯ. ಅನೇಕ ಖಾಸಗಿ ವೈದ್ಯರು ಕ್ಷಯರೋಗಿಗಳ ಮಾಹಿತಿ ನೀಡದಿರುವುದು ಹಾಗೂ 73 ಗ್ರಾಮಗಳಲ್ಲಿ ಯಾವುದೇ ಕ್ಷಯರೋಗಿ ಪತ್ತೆ ಮಾಡದಿರುವುದು ಕಂಡುಬಂದಿದೆ. ಆದ್ದರಿಂದ ಸಾರ್ವಜನಿಕರು, ಸ್ವಯಂ ಸೇವಾ ಸಂಘ ಸಂಸ್ಥೆಗಳು, ಖಾಸಗಿ ವೈದ್ಯರು, ಸರ್ಕಾರದ ಕ್ಷಯ ರೋಗ ನಿರ್ಮೂಲನಾ ಅಭಿಯಾನಕ್ಕೆ ಕೈಜೋಡಿಸಿ 2025ರೊಳಗೆ “ಕ್ಷಯರೋಗ ನಿರ್ಮೂಲನೆ’ ಮಾಡಲು ಶ್ರಮಿಸಬೇಕು ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ|
ಮಹೇಶ್ ಎಂ.ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.