ಕೆಎಸ್ಆರ್ಟಿಸಿ ಸಿಬ್ಬಂದಿಗೆ ಸೋಂಕು
Team Udayavani, Jul 19, 2020, 12:29 PM IST
ಹನುಮಸಾಗರ: ಕೋವಿಡ್ ವೈರಸ್ ಕೆಎಸ್ ಆರ್ಟಿಸಿ ಸಿಬ್ಬಂದಿಯೊಬ್ಬರಿಗೆ ತಗುಲಿದ್ದು, ಗ್ರಾಮದ ಕುಂಬಾರ ಓಣಿಯನ್ನು ಸೀಲ್ ಡೌನ್ ಮಾಡಲಾಗಿದೆ.
ಕೆಎಸ್ಆರ್ಟಿಸಿ ಸಿಬ್ಬಂದಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮನಿ ತಾಲೂಕಿನಲ್ಲಿ ಕೆಎಸ್ಆರ್ ಟಿಸಿ ಡ್ರೈವರ್ ಕಂ ಕಂಡಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಗಂಟಲು ದ್ರವ ಪರೀಕ್ಷೆ ಮಾಡಿದಾಗ ಸೋಂಕು ದೃಢಪಟ್ಟಿದೆ. ಆದರೆ ಸೋಂಕಿತ ವ್ಯಕ್ತಿ ಬೆಂಗಳೂರಿನಿಂದ ಗುರುವಾರ ಮಧ್ಯಾಹ್ನದ ವೇಳೆ ಹನುಮಸಾಗರಕ್ಕೆ ಬಂದಿದ್ದು ಸಂಜೆ ವೇಳೆ ಸೋಂಕು ದೃಢಪಟ್ಟ ಮಾಹಿತಿ ಸ್ಥಳೀಯ ಆಸ್ಪತ್ರೆಗೆ ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತ ಆರೋಗ್ಯ ಇಲಾಖೆ ಸಿಬ್ಬಂದಿ ಕುಂಬಾರ ಓಣಿಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಸೋಂಕಿತ ವ್ಯಕ್ತಿಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೂರಿಸಿ ಕುಟುಂಬ ವಾಸವಿರುವ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಗುರುತಿಸಿ ಕುಂಬಾರ ಓಣಿಯಲ್ಲಿ ಬ್ಯಾರಿಕೇಡ್ ಹಾಕಿ ಸೀಲ್ ಡೌನ್ ಮಾಡಲಾಗಿದೆ ಎಂದು ಪಿಡಿಒ ಬಸವರಾಜ ಸಂಕನಾಳ ತಿಳಿಸಿದ್ದಾರೆ.
ಸೋಂಕಿತ ವ್ಯಕ್ತಿಯ ಪ್ರಥಮ ಸಂಪರ್ಕಿತರೆಂದು 8 ಜನರನ್ನು ಗುರುತಿಸಿ ಹೋಂ ಕ್ವಾರಂಟೈನ್ಗೆ ಸೂಚಿಸಲಾಗಿದೆ ಎಂದು ಪ್ರಭಾರಿ ಹಿರಿಯ ಆರೋಗ್ಯ ಸಹಾಯಕ ನಿಜಾಮುದ್ದಿನ್ ತಿಳಿಸಿದ್ದಾರೆ. ಈ ವೇಳೆ ಪೊಲೀಸ್ ಮುಖ್ಯಪೇದೆ ಡಿ.ಕೆ. ನಾಯಕ, ಕಿರಿಯ ಆರೋಗ್ಯ ಸಹಾಯಕರಾದ ರೇಖಾ ಬಡಿಗೇರ, ಗ್ರಾಮಲೆಕ್ಕಿಗರಾದ ವೀರನಗೌಡ ಪಾಟೀಲ, ಮಹಾಂತಯ್ಯ ಕೊಮಾರಿ, ವೀರೇಶ ಕುರುನಾಳ ಸೇರಿದಂತೆ ಗ್ರಾಪಂ ಸಿಬ್ಬಂದಿ ಇದ್ದರು.