ಪೈಪ್ ಒಡೆದು ಕುಡಿಯುವ ನೀರು ಪೋಲು ನಗರಸಭೆ ನಿರ್ಲಕ್ಷ್ಯ
Team Udayavani, Oct 12, 2019, 5:58 PM IST
ಗಂಗಾವತಿ: ಕಳೆದ ಒಂದು ತಿಂಗಳಲ್ಲಿ ನಗರದ ಹತ್ತು ಕಡೆ ಕುಡಿಯುವ ನೀರಿನ ಪೈಪ್ ಒಡೆದು ಸಾವಿರಾರು ಲೀಟರ್ ನೀರು ಪೋಲಾಗಿ ಚರಂಡಿ ಸೇರಿದೆ.
ನಗರಕ್ಕೆ ಐದು ಕಿ.ಮೀ ದೂರದಲ್ಲಿರುವ ತುಂಗಭದ್ರಾ ನದಿಯಿಂದ ಕುಡಿಯುವ ನೀರನ್ನು ಪೈಪ್ ಗಳ ಮೂಲಕ ಪೂರೈಸಲಾಗುತ್ತದೆ. ಒಂದು ತಿಂಗಳಲ್ಲಿ ಕೇಂದ್ರ ಬಸ್ ನಿಲ್ದಾಣ, ಜೂನಿಯರ್ ಕಾಲೇಜ್ ಮೈದಾನ, ನೀಲಕಂಠೇಶ್ವರ ಕ್ಯಾಂಪ್, ಹೊಸಳ್ಳಿ ರಸ್ತೆ ಇಸ್ಲಾಂಪೂರ ಸೇರಿ ಹತ್ತು ಹಲವು ಕಡೆ ಪೈಪ್ ಒಡೆದು ನಿರಂತರವಾಗಿ ನೀರು ಪೋಲಾಗುತ್ತಿದ್ದರೂ ನಗರಸಭೆ ಅಧಿಕಾರಿಗಳು ಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ.
ಇಂಜಿನಿಯರಿಂಗ್ ನಾಪತ್ತೆ: ನಗರಸಭೆಯ ಕುಡಿಯುವ ನೀರು ನಿರ್ವಾಹಣೆ ಮಾಡಲು ಒಬ್ಬ ಇಂಜಿನಿಯರ್ ನೈರ್ಮಲ್ಯಾಧಿಕಾರಿ ಸೇರಿ ಹತ್ತು ಹಲವು ಪೌರಕಾರ್ಮಿಕರಿದ್ದರು ಹೊಡೆಯುತ್ತಿರುವ ಪೈಪ್ ಗಳ ದುರಸ್ತಿ ಕಾರ್ಯ ಮಾಡುತ್ತಿಲ್ಲ ಎಂಬ ಆರೋಪ ವ್ಯಾಪಕವಾಗಿದೆ. ಶನಿವಾರ ಆನೆಗೊಂದಿ ರಸ್ತೆಯಲ್ಲಿ ಪೈಪ್ ಒಡೆದು ಪರಿಣಾಮ ಹತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಹಾನಿಯುಂಟಾಗಿದೆ.
ಮೊಬೈಲ್ ಕರೆ ಸ್ವೀಕಾರ ಇಲ್ಲ: ನಗರಕ್ಕೆ ಪೂರೈಕೆಯಾಗುವ ನೀರಿನ ಪೈಪ್ ಒಡೆಯುವುದು ಸೇರಿ ಇತರೆ ಸಮಸ್ಯೆಗಳ ಕುರಿತು ದೂರು ನೀಡಲು ಸಾರ್ವಜನಿಕರು ಮೊಬೈಲ್ ಕರೆ ಮಾಡಿದರೆ ನೀರಿನ ವಿಭಾಗದ ಅಧಿಕಾರಿಗಳು ಕರೆ ಸ್ವೀಕಾರ ಮಾಡದೇ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ದೂರುಗಳು ಕೇಳಿ ಬಂದಿವೆ.