ಛಾಯಾಗ್ರಾಹಕ ಕಂದಕೂರಗೆ ರಾಷ್ಟ್ರ ಪ್ರಶಸ್ತಿ
Team Udayavani, Oct 16, 2019, 2:16 PM IST
ಕೊಪ್ಪಳ: ಕೊಲ್ಕತ್ತಾದ ವೈಡ್ ಆ್ಯಂಗಲ್ ಕಾಂಟೆಂಪರ್ರಿ ಫೋಟೋ ಆರ್ಟಿಸ್ಟ್ ಫೋರಂ ಸಂಸ್ಥೆಯಿಂದ ಆಯೋಜಿಸಿದ್ದ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಕೊಪ್ಪಳದ ಖ್ಯಾತ ಛಾಯಾಗ್ರಾಹಕ ಪ್ರಕಾಶ ಕಂದಕೂರ ಅವರಿಗೆ ಎರಡು ಪ್ರಶಸ್ತಿಗಳು ಲಭಿಸಿವೆ.
ನೀರಿನ ಸಂರಕ್ಷಣೆ ಮತ್ತು ಅದರ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಏರ್ಪಡಿಸಲಾಗಿದ್ದ ಈ ಸ್ಪರ್ಧೆಯ “ಸೇವ್ ವಾಟರ್-ಸೇವ್ ಲೈಫ್’ ವಿಭಾಗದಲ್ಲಿ ಉತ್ತರ ಕರ್ನಾಟಕದ ನೀರಿನ ಸಮಸ್ಯೆಯನ್ನು ಬಿಂಬಿಸುವ ಕಂದಕೂರರ “ವಾಟರ್ ವಾರ್’ ಶೀರ್ಷಿಕೆಯ ಚಿತ್ರ “ದಿ ಬೆಸ್ಟ್ ಜರ್ನಲಿಸ್ಟಿಕ್ ವರ್ಕ್ ಅವಾರ್ಡ್’ ಪಡೆದುಕೊಂಡರೆ, ಅದೇ ವಿಭಾಗದಲ್ಲಿ ಅವರ “ಡ್ರಾಟ್’ (ಬರ) ಶೀರ್ಷಿಕೆಯ ಮತ್ತೂಂದು ಚಿತ್ರ ಫೆಡರೇಷನ್ ಆಫ್ ಇಂಡಿಯನ್ ಫೋಟೋಗ್ರಫಿಯ ರಿಬ್ಬನ್ ಗೌರವಕ್ಕೆ ಪಾತ್ರವಾಗಿದೆ. ಅಲ್ಲದೆ ಒಟ್ಟಾರೆ ಅವರ ನಾಲ್ಕು ಚಿತ್ರಗಳು ಪ್ರದರ್ಶನಕ್ಕೆ ಆಯ್ಕೆಗೊಂಡಿವೆ.
ದೇಶದ ವಿವಿಧ ರಾಜ್ಯಗಳ ಒಟ್ಟು 100 ಜನ ಛಾಯಾಗ್ರಾಹಕರ 600ಕ್ಕೂ ಹೆಚ್ಚು ಛಾಯಾಚಿತ್ರಗಳು ಸ್ಪರ್ಧೆಯಲ್ಲಿದ್ದವು. ಖ್ಯಾತ ಛಾಯಾಗ್ರಾಹಕರಾದ ಡಾ| ಸಂಘಮಿತ್ರ ಸರ್ಕಾರ್, ಆಸಿಸ್ ಸುಧೀರ್, ಪಬಿತ್ರ ಸೇನ್ ಶರ್ಮಾ ಹಾಗೂ ಮಧು ಸರ್ಕಾರ್ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಅ. 18ರಂದು ಕಲ್ಕತ್ತಾದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದ್ದು, ಮೂರು ದಿನಗಳ ಕಾಲ ಛಾಯಾಚಿತ್ರಗಳ ಪ್ರದರ್ಶನ ಸಹ ನಡೆಯಲಿದೆ.