ಕೊಪ್ಪಳದ ಶ್ರೀರಾಮನಗರದ ಸುತ್ತ ಮಳೆಗಾಳಿಗೆ ನೆಲಕ್ಕುರುಳಿದ ಭತ್ತದ ಬೆಳೆ
Team Udayavani, May 2, 2020, 2:46 PM IST
ಗಂಗಾವತಿ: ತಾಲ್ಲೂಕಿನ ಶ್ರೀರಾಮನಗರ ಸುತ್ತಮುತ್ತ ಶುಕ್ರವಾರ ಸಂಜೆ ಸುರಿದ ಮಳೆಗಾಳಿಗೆ ಬೆಳೆದು ನಿಂತಿದ್ದ ಭತ್ತಬೆಳೆ ನೆಲಕ್ಕುರುಳಿ ಅಪಾರ ಪ್ರಮಾಣದ ನಷ್ಟವುಂಟಾಗಿದೆ.
ಕುಂಟೋಜಿ, ಬರಗೂರು, ಸಿದ್ದಾಪುರ, ಕೊಟ್ನೆಕಲ್ ಜಮಾಪೂರ, ಅಂಜೂರಿ ಕ್ಯಾಂಪ್, ಮುಸ್ಟೂರು ಕ್ಯಾಂಪ್ ಸೇರಿ ಸುತ್ತಲೂ ಸುಳಿದ ಮಳೆಗೆ 300 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದ ಭತ್ತ ಸಂಪೂರ್ಣವಾಗಿ ನೆಲಕ್ಕುರುಳಿದ್ದು ರೈತರು ಸಂಕಷ್ಟದಲ್ಲಿದ್ದಾರೆ. ಕುಂಟೋಜಿ ಗ್ರಾಮದ ಸುತ್ತಲಿನ ಪ್ರದೇಶದಲ್ಲಿ ಹಲವು ವರ್ಷಗಳಿಂದ ಸುಗ್ಗಿ ಬೆಳೆ ಮಾತ್ರ ಬೆಳೆಯಲಾಗುತ್ತಿತ್ತು. ಈ ಭಾರಿ ಕುಂಟೋಜಿ ಏತನೀರಾವರಿ ನಿರ್ಮಿಸಿ ಭೂಮಿಗೆ ನೀರು ಪೂರೈಕೆ ಮಾಡುತ್ತಿರುವುದರಿಂದ ರೈತರು ಬೇಸಿಗೆ ಬೆಳೆ ಬೆಳೆದಿದ್ದು ಮಳೆಗೆ ಸಂಪೂರ್ಣ ಭತ್ತದ ಬೆಳೆ ನಷ್ಟವಾಗಿದೆ.
ಬೆಳೆ ನಷ್ಟ ಪರಿಹಾರಕ್ಕೆ ಒತ್ತಾಯ: ಕುಂಟೋಜಿ ಸುತ್ತಮುತ್ತ ಅಕಾಲಿಕ ಮಳೆಗೆ ಬೆಳೆದುನಿಂತ ಭತ್ತಬೆಳೆ ನಷ್ಟವಾಗಿದ್ದು ಕೂಡಲೇ ಸರಕಾರ ರೈತರಿಗೆ ಪರಿಹಾರ ಕೊಡುವಂತೆ ಕುಂಟೋಜಿ ಏತನೀರಾವರಿ ಹೋರಾಟ ಸಮಿತಿ ಮುಖಂಡ ಮರಿಯಪ್ಪ ಕುಂಟೋಜಿ ಸರಕಾರವನ್ನು ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಕಾರಟಗಿ ತಹಸೀಲ್ದಾರ್ ಕವಿತಾ ಭೇಟಿ ನೀಡಿದ್ದು ನಷ್ಟದ ಸರ್ವೇ ನಡೆಸಿ ಸರಕಾರಕ್ಕೆ ಕಳುಹಿಸಲಾಗುತ್ತದೆ ಎಂದು ಉದಯವಾಣಿ ಗೆ ತಿಳಿಸಿದ್ದಾರೆ.