ಉದುರುತ್ತಿದೆ ಮೇಲ್ಛಾವಣಿ ಕಾಂಕ್ರೀಟ್: ಆತಂಕದಲ್ಲಿ ಮಕ್ಕಳು
Team Udayavani, Dec 9, 2019, 3:48 PM IST
ಕನಕಗಿರಿ: ಪಟ್ಟಣದ ಶಾಸಕರ ಮಾದರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಮೂಲಭೂತ ಸೌಲಭ್ಯದಿಂದ ವಂಚಿತವಾಗಿದ್ದು, ಮೇಲ್ಛಾವಣಿ ಶಿಥಿಲಗೊಂಡು ಮಕ್ಕಳು ಭಯದ ವಾತವರಣದಲ್ಲೇ ವಿದ್ಯಾಭ್ಯಾಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೂ ಒಟ್ಟು 492 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಒಟ್ಟು 21 ಕೊಠಡಿಗಳಲ್ಲಿ 7 ಕೊಠಡಿಗಳ ಮೇಲ್ಛಾವಣಿ ಕಾಂಕ್ರೀಟ್ ಉದುರಿ ಬೀಳುತ್ತಿದೆ. ಇನ್ನು 4 ಕೊಠಡಿಗಳಿಗೆ ತಗಡುಗಳನ್ನು
ಹಾಕಲಾಗಿದ್ದು, ಮಳೆಗಾಲದಲ್ಲಿ ಸೋರುತ್ತವೆ. ಕೆಲ ಕೊಠಡಿಗಳನ್ನು 1936ರಲ್ಲೇ ನಿರ್ಮಿಸಲಾಗಿದೆ. ವಿದ್ಯಾರ್ಥಿಗಳ ಪಾಲಕರು ಹಾಗೂ ಎಸ್ಡಿಎಂಸಿ ಪದಾಧಿಕಾರಿಗಳು ಕೊಠಡಿಗಳ ಸಮಸ್ಯೆಯ ಕುರಿತು ಶಿಕ್ಷಣ ಇಲಾಖೆಯ ಮೇಲಾ ಧಿಕಾರಿಗಳಿಗೆ ಮತ್ತು ಶಾಸಕ ಬಸವರಾಜ ದಢೇಸುಗೂರು ಅವರ ಗಮಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.
ಆಟದ ಮೈದಾನ ಸರಿಯಿಲ್ಲ: ಕ್ರೀಡೆಯನ್ನು ಪೋತ್ಸಾಹಿಸಲು ಸರ್ಕಾರ ಸಾವಿರಾರು ಕೋಟಿ ವೆಚ್ಚ ಮಾಡುತ್ತಿದೆ. ಆದರೆ ಇಲ್ಲಿ ಆಟ ಆಡಿಸಲು ಸೂಕ್ತವಾದ ಮೈದಾನವಿಲ್ಲ. ಇರುವ ಶಾಲಾ ಮೈದಾನವೂ ತಗ್ಗು–ದಿನ್ನೆಗಳಿಂದ ಕೊಡಿದೆ. ಮಳೆಗಾಲದಲ್ಲಿ ಶಾಲಾ ಆವರಣದಲ್ಲಿ ನೀರು ನಿಲ್ಲುತ್ತದೆ. ಸೂಳ್ಳೆಗಳ ಕಾಟ ಹೆಚ್ಚಾಗಿದ್ದು,
ಮೈದಾನವನ್ನು ದುರಸ್ತಿಗೊಳಿಸುವಂತೆ ಪಪಂ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಶಿಕ್ಷಕರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಮಕ್ಕಳ ಶಿಕ್ಷಣಕ್ಕೆ ಸಾಕಷ್ಟು ಅನುದಾನ ನೀಡುತ್ತಿವೆ. ಆದರೆ ಶಾಲೆಗಳ ಅಭಿವೃದ್ಧಿಯಾಗಿಲ್ಲ. ಸರಿಯಾದ ಶೌಚಾಲಯ, ಕುಡಿಯುವ ನೀರು, ಕಟ್ಟಡ, ಶಿಕ್ಷಕರನ್ನುನೀಡುವಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಇನ್ನಾದರೂ ಶಾಸಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಹಳೆ ಕಟ್ಟಡಗಳ ಮೇಲ್ಛಾವಣಿಯನ್ನು ದುರಸ್ತಿಗೊಳಿಸಲು ಮುಂದಾಗಬೇಕಾಗಿದೆ.
-ಶರಣಪ್ಪ ಗೋಡಿನಾಳ