ಸಿಬ್ಬಂದಿ ವಜಾ ಕಾನೂನು ಬಾಹಿರ
•ಟೋಲ್ ಪ್ಲಾಜಾ ಸಿಬ್ಬಂದಿ ಅನಿರ್ದಿಷ್ಟ ಧರಣಿ ಮುಂದುವರಿಕೆ•ಕಂಪನಿ ವಿರುದ್ಧ ಆಕ್ರೋಶ
Team Udayavani, Jun 23, 2019, 12:12 PM IST
ಕುಷ್ಟಗಿ: ಸಂಸದ ಕರಡಿ ಸಂಗಣ್ಣ ಧರಣಿ ನಿರತರ ಅಹವಾಲು ಆಲಿಸಿದರು.
ಕುಷ್ಟಗಿ: ವಜಾಗೊಂಡ ಟೋಲ್ ಪ್ಲಾಜಾ ಕೆಲಸಗಾರರ ಪುನರ್ ನೇಮಕದಲ್ಲಿ ಭಾರತೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಯೋಜನಾ ನಿರ್ದೇಶಕ ವಿಜಯಕುಮಾರ ಮಣಿ ನಿಷ್ಕ್ರೀಯವಾಗಿರುವ ಹಿನ್ನೆಲೆಯಲ್ಲಿ ಜೂ. 25ರಂದು ದೆಹಲಿಯಲ್ಲಿ ಸಂಬಂಧಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಭಾರತೀಯ ಹೆದ್ದಾರಿ ಪ್ರಾಧಿಕಾರ ಮುಖ್ಯಸ್ಥರಿಗೆ ದೂರು ಸಲ್ಲಿಸಲಾಗುವುದು ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.
ರಾಷ್ಟ್ರೀಯ ಹೆದ್ದಾರಿ ಕ್ರಾಸ್ ಡಾ| ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ಟೋಲ್ ಪ್ಲಾಜಾ ವಜಾಗೊಂಡ ಕೆಲಸಗಾರರ ಅಹವಾಲು ಆಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ವಜಾಗೊಂಡಿರುವ ಕೆಲಸಗಾರರನ್ನು ಪುನರ್ ನೇಮಕ ಸ್ಥಳೀಯ ಮಟ್ಟದಲ್ಲಿ ಬಗೆಹರಿಯುವ ವಿಚಾರ. ಆದರೆ ಈ ಅಧಿಕಾರಿ ರಜೆ ಇದೆ, ಇದು ತಮಗೆ ಸಂಬಂಧಿಸಿಲ್ಲ. ಈ ಕಂಪನಿಯ ಗುತ್ತಿಗೆದಾರರಿಗೂ ತಮಗೂ ಸಂಬಂಧವೇ ಇಲ್ಲ ಎಂದು ಅಸಹಾಯಕರಾಗಿ ಪ್ರಸ್ತಾಪಿಸಿದ್ದು, ಇದನ್ನೇ ಲಿಖೀತವಾಗಿ ನೀಡುವಂತೆ ತಿಳಿಸಿರುವೆ ಎಂದರು.
ವಜಾಗೊಂಡ ಕೆಲಸಗಾರರು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದು, ಆರೋಗ್ಯದಲ್ಲಿ ವ್ಯತ್ಯಾಸವಾದರೆ ಯಾರು ಹೊಣೆ? ಇಲ್ಲಿ ಗುತ್ತಿಗೆದಾರರ ಏಕಸ್ವಾಮ್ಯ ನಡೆಯುತ್ತಿದ್ದು, ಕಂಪನಿಯವರೇ ಸುಪ್ರೀಂ ಆಗಿದ್ದು, ಇದನ್ನೆಲ್ಲ ಪರಿಹರಿಸಬೇಕಾದ ಜವಾಬ್ದಾರಿ ಅಧಿಕಾರಿ ವಿಜಯಕುಮಾರ ಮಣಿ ನುಣಚಿಕೊಳ್ಳುತ್ತಿದ್ದಾರೆ. ಸ್ಥಳೀಯರನ್ನು ಕೈ ಬಿಟ್ಟು ಬೇರೆಯವರನ್ನು ನೇಮಿಸಿಕೊಂಡಿರುವುದು ಕಾನೂನಿಗೆ ವಿರುದ್ಧವಾಗಿದೆ. ಯಾವೂದೇ ಮುನ್ಸೂಚನೆ, ನೋಟಿಸ್ ಇಲ್ಲದೇ ಕೆಲಸದಿಂದ ತೆಗೆದು ಹಾಕಿದ್ದರಿಂದ ಸುಮಾರು 400 ಕುಟುಂಬಗಳು ಬೀದಿಗೆ ಬಿದ್ದಿದೆ. ಸ್ಥಳೀಯ ಶಾಸಕ, ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ನೌಕರರಿಂದ ಆಗಿರುವ ಪ್ರಮಾದ ಸರಿಪಡಿಸಿ ಮುಂದುವರಿಸಿಕೊಳ್ಳಬೇಕಿತ್ತು. ಸದರಿ ಕಂಪನಿಯವರು ಈ ಕೆಲಸಗಾರರನ್ನು ತೆಗೆದುಕೊಳ್ಳುವುದಿಲ್ಲ ಎಂದು ಹೇಳುತ್ತಿರುವುದು ಸರಿಯಲ್ಲ. ಇದನ್ನು ಖಂಡಿಸುವುದಾಗಿ ತಿಳಿಸಿದರು.
ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ, ಕೆ. ಶರಣಪ್ಪ, ಮಲ್ಲಣ್ಣ ಪಲ್ಲೇದ್, ಜಿಪಂ ಸದಸ್ಯರಾದ ವಿಜಯ ನಾಯಕ್, ಕೆ. ಮಹೇಶ, ಬಸವರಾಜ್ ಹಳ್ಳೂರು, ಶಶಿಧರ ಕವಲಿ, ವಿಜಯಕುಮಾರ ಹಿರೇಮಠ, ಮಲ್ಲಿಕಾರ್ಜುನ ಮಸೂತಿ ಇತರರಿದ್ದರು.