ನಷ್ಟ ತಪ್ಪಿಸಲು ಕೆಆರ್ಎಸ್ ಬೃಂದಾವನ ಪ್ರವಾಸಿಗರಿಗೆ ಮುಕ್ತ
Team Udayavani, Nov 30, 2022, 9:15 PM IST
ಶ್ರೀರಂಗಪಟ್ಟಣ: ಕಳೆದ ಒಂದು ತಿಂಗಳಿಂದ ಚಿರತೆ ಸಿಗದೆ, ಪ್ರವಾಸಿಗರೂ ಇಲ್ಲದೆ ಕೆಆರ್ಎಸ್ ಬೃಂದಾವನಕ್ಕೆ ಆಗುತ್ತಿರುವ ಆರ್ಥಿಕ ನಷ್ಟ ತಪ್ಪಿಸಲು ಬೃಂದಾವನ ವೀಕ್ಷಣೆ ಮಾಡಲು ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿದೆ.
ಕಳೆದ ತಿಂಗಳು ಬೃಂದಾವನದಲ್ಲಿ ಚಿರತೆ ಪ್ರತ್ಯಕ್ಷವಾಗಿ ಪ್ರವಾಸಿಗರು ಆತಂಕಗೊಂಡ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಅರಣ್ಯ ಇಲಾಖೆಯೊಂದಿಗೆ ಚರ್ಚಿಸಿ ಚಿರತೆ ಹಿಡಿಯಲು ಬೋನ್ ಇಟ್ಟು ಪ್ರವಾಸಿಗರಿಗೆ ನಿರ್ಭಂದ ಹೇರಿದ್ದರು.
ಚಿರತೆ ಸೆರೆಗೆ ಬೋನು ಇಟ್ಟಿದ್ದರೂ ಬೋನಿಗೆ ಬೀಳದ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಹಲವಾರು ಪ್ರಯತ್ನಗಳನ್ನೂ ನಡೆಸಲಾಯಿತು.
ಸತತ ಒಂದು ತಿಂಗಳ ಕಾರ್ಯಾಚರಣೆ ನಡೆಸಿದರೂ ಚಿರತೆ ಪತ್ತೆಯಾಗಲಿಲ್ಲ. ಒಂದು ಬಾರಿ ಸಿಸಿ ಕ್ಯಾಮರಗಳಲ್ಲಿ ಕಾಣಿಸಿಕೊಂಡ ಚಿರತೆ ಮತ್ತೆ ಕಾಣಸಿಕ್ಕಿಲ್ಲ. ಚಿರತೆ ಆತಂಕದಿಂದಾಗಿ ಬೃಂದಾವನಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿತ್ತು. ಇದರಿಂದಾಗಿ ಸರ್ಕಾರಕ್ಕೆ ಭಾರೀ ಪ್ರಮಾಣದಲ್ಲಿ ನಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಬೃಂದಾವನಕ್ಕೆ ಪ್ರವಾಸಿಗರಿಗೆ ಪ್ರವೇಶವನ್ನು ಮುಕ್ತ ಗೊಳಿಸಲಾಗಿದೆ.