ಕೇಂದ್ರ ಸರ್ಕಾರ ಬಿಎಸ್ವೈಯವರನ್ನು ಗೌರವದಿಂದ ಕಾಣಲಿ: ಯುಟಿ ಖಾದರ್
Team Udayavani, Sep 28, 2019, 3:34 PM IST
ಮಂಗಳೂರು: ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕೇಂದ್ರ ಸರ್ಕಾರವು ಗೌರವದಿಂದ ಕಾಣಬೇಕು. ದೆಹಲಿಗೆ ಬಿ.ಎಸ್ ಯಡಿಯೂರಪ್ಪ ಹೋದರೆ ಅವರಿಗೆ ಕೇಂದ್ರದ ಜೊತೆ ಮಾತನಾಡಲು ಅವಕಾಶ ಸಿಗಲ್ಲ. ಹಾಗೆಯೇ ಅವಮಾನ ಮಾಡುವುದು ನಮಗೆ ಇಷ್ಟ ಇಲ್ಲ. ನಾವೆಲ್ಲರೂ ಮುಖ್ಯಮಂತ್ರಿಗಳ ಜೊತೆ ಇದ್ದೇವೆ ಎಂದು ಮಾಜಿ ಸಚಿವ ಯುಟಿ ಖಾದರ್ ಹೇಳಿದರು.
ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಶನಿವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ನಮ್ಮ ರಾಜ್ಯದ ಸಿಎಂಗೆ ಅವಮಾನ ಆದರೆ ಅದು ನಮ್ಮೆಲ್ಲರಿಗೂ ಅವಮಾನ ಆದಂತೆ. ಕೇಂದ್ರವು ರಾಜ್ಯದ ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ವಿಳಂಬ ಮಾಡುತ್ತಿರುವುದು ಸರಿಯಲ್ಲ, ರಾಜ್ಯಕ್ಕೆ ಸಿಗುವ ಪಾಲನ್ನು ಕೇಂದ್ರವು ನ್ಯಾಯಯುತವಾಗಿ ನೀಡಬೇಕೆಂದು ಹೇಳಿದರು.
ಕಾಂಗ್ರೆಸ್ ಕಾರ್ಯಕರ್ತರು ಲಾಠಿ ಹಿಡಿದು ಪಥ ಸಂಚಲನ ಅಭ್ಯಾಸ ಮಾಡಿದ್ದು ಟ್ರೋಲ್ ಆದ ವಿಚಾರದ ಬಗ್ಗೆ ಮಾತನಾಡಿದ ಅವರು, ಗಾಂಧಿ ಜಯಂತಿ ಕಾರ್ಯಕ್ರಮಕ್ಕೆ ತಯಾರು ಮಾಡಿದ್ದೇವೆ ಅಷ್ಟೇ. ಒಂದು ಕಡೆ ಫಿಟ್ ಇಂಡಿಯಾ ಎಂದು ಹೇಳ್ತಾರೆ. ಮತ್ತೊಂದು ಕಡೆ ಟ್ರೋಲ್ ಮಾಡ್ತಾರೆ. ಫಿಟ್ ಆಗುವುದಕ್ಕೆ ನಾವು ಪಥಸಂಚಲನ ಮಾಡುವುದರಲ್ಲಿ ತಪ್ಪು ಏನಿದೆ ಎಂದು ಅವರು ಬಿಜೆಪಿ ನಾಯಕರನ್ನು ಪ್ರಶ್ನಿಸಿದರು.