ಕದ್ರಿ ರಸ್ತೆ ಅಪಘಾತ ಶಿಕ್ಷಕಿ ಸಾವು ಪ್ರಕರಣ: ಲಾರಿ ಚಾಲಕನಿಗೆ ನ್ಯಾಯಾಂಗ ಬಂಧನ
Team Udayavani, Dec 2, 2019, 6:25 PM IST
ಮಂಗಳೂರು: ಮಂಗಳೂರಿನ ಕದ್ರಿ ಕಂಬಳದಲ್ಲಿ ಭಾನುವಾರದಂದು ನಡೆದ ಲಾರಿ-ರಿಕ್ಷಾ ಅಪಘಾತದಲ್ಲಿ ಓರ್ವ ಶಿಕ್ಷಕಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕನಾದ ಗದಗ ಜಿಲ್ಲೆ ನರಗುಂದ ತಾಲೂಕಿನ ಶಿರೋಲ್ ಗ್ರಾಮದ ಸಿದ್ಧಲಿಂಗನ ಗೌಡ ವಿ. ಪೊಲೀಸ್ ಪಾಟಿಲ್ (29 ವರ್ಷ) ಎಂಬವರು ಆರೋಪಿಯಾಗಿದ್ದು, ಈತನ ವಿರುದ್ಧ ಐಪಿಸಿ 304 ಕೇಸ್ ದಾಖಲಾಗಿದೆ. ಈತನ ವಿರುದ್ಧ ಕೊಲೆಯಲ್ಲದ ಮಾನವ ಹತ್ಯೆ ಪ್ರಕರಣ ದಾಖಲಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ನಗರದ ಕದ್ರಿ ಕಂಬಳ ರಸ್ತೆಯಲ್ಲಿ ಭಾನುವಾರದಂದು ಈಶರ್ ಲಾರಿಯೊಂದು ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾದಲ್ಲಿ ಪಣಂಬೂರು ಕೇಂದ್ರೀಯ ವಿದ್ಯಾಲಯದ ಶಿಕ್ಷಕಿ ಶೈಲಜಾ ರಾವ್ (55) ಎಂಬವರು ಸಾವನ್ನಪ್ಪಿದ್ದು, ಚಾಲಕ ವಿನೋದ್ (40) ಗಂಭೀರವಾಗಿ ಗಾಯಗೊಂಡಿದ್ದರು.
ಲಾರಿಯು ಬೆಂಗಳೂರಿನಿಂದ ಫರ್ನಿಚರ್ ಸಾಮಗ್ರಿಗಳನ್ನು ಸಾಗಿಸುತ್ತಿತ್ತು. ಮಂಗಳೂರಿನಲ್ಲಿ ಕೆಲವು ಸರಕನ್ನು ಇಳಿಸಿ ಉಡುಪಿ ಕಡೆಗೆ ಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಲಾರಿ ಚಾಲಕ ಬೆಂಗಳೂರಿನ ಸಿದ್ಧಲಿಂಗನ ಗೌಡನ ಅತಿ ವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದ ಈ ಅಪಘಾತ ಸಂಭವಿಸಿತ್ತು.