ಸುರೇಶ್ ಕುಮಾರ್ ಹೇಳಿದ್ದು ಯಾವುದಾದಾರೂ ಆಗಿದೆಯಾ? ವಿಶ್ವನಾಥ್ ವಾಗ್ದಾಳಿ
Team Udayavani, Dec 24, 2020, 11:48 AM IST
ಮೈಸೂರು: ಶಿಕ್ಷಣ ಸಚಿವ ಸುರೇಶ್ ಕುಮಾರ್ ಆದೇಶ ಮಾಡುತ್ತಾರೆ. ಬಳಿಕ ವಾಪಸ್ಸು ಪಡೆಯುತ್ತಾರೆ. ಅವರಿಗೆ ಮಾತು ವಾಪಸ್ಸು ಪಡೆಯುವ ಕಾಯಿಲೆ ಇದ್ದಂತಿದೆ. ಸುರೇಶ್ ಕುಮಾರ್ ಹೇಳಿದ್ದು ಯಾವುದಾದಾರೂ ಒಂದು ಆಗಿದೆಯಾ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಶಾಲೆಗಳು ಆರಂಭ ವಿಚಾರವಾಗಿ ಮೈಸೂರಿನಲ್ಲಿ ಮಾತನಾಡಿದ ಅವರು, ಸದ್ಯ ಕೋವಿಡ್ ಸೋಂಕಿನ ಎರಡನೇ ಅಲೆ ಜೋರಾಗಿದೆ. ಜೀವದ ಜೊತೆ ಚೆಲ್ಲಾಟ ಸರಿಯಲ್ಲ. ಮಕ್ಕಳು ಮನೆಯ ಆಸ್ತಿ. ಜನವರಿ ಒಂದರಿಂದ ಶಾಲಾರಂಭ ಬೇಡ, ಪೋಷಕರನ್ನು ಮಕ್ಕಳನ್ನು ಆತಂಕಕ್ಕೆ ಈಡು ಮಾಡಬೇಡಿ ಎಂದು ವಿಶ್ವನಾಥ್ ಹೇಳಿದರು.
ಸಂಕ್ರಾಂತಿ ಆದ ಮೇಲೆ ಶಾಲೆ ಆರಂಭಿಸಿ, ಈಗ ಬೇಡ. ಮಕ್ಕಳೆ ನಮ್ಮ ಜೀವ ನಮ್ಮ ಆಸ್ತಿ ಎರಡನೇ ಅಲೆ ಬಗ್ಗೆ ಆತಂಕ ಇದೆ. ಯಾರು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ. ಹೀಗಾಗಿ ಜನವರಿ 1 ರಿಂದ ಶಾಲೆ ಆರಂಭ ಬೇಡ ಎಂದರು.
ಕೊಡಗಿನವರ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಕೊಡವರು ಹಸುವನ್ನು ಪೂಜೆ ಮಾಡುತ್ತಾರೆ. ಸಿದ್ದರಾಮಯ್ಯನವರ ಹೇಳಿಕೆ ಕೊಡವರಿಗೆ ಮಾಡಿದ ಅವಮಾನ, ನಿಮ್ಮ ಹೇಳಿಕೆಗಳಲ್ಲಿ ಕಾಂಗ್ರೆಸ್ ಮುಗಿಸುವ ಹುನ್ನಾರ ಇದೆ. ಒಂದು ಕಡೆ ಬಲಗೈ ದಲಿತರು ಮತಹಾಕಿಲ್ಲ ಎಂದು ಹೇಳುತ್ತೀರಿ. ಇದರಿಂದ ಅವರ ಮತಬ್ಯಾಂಕ್ ಹಾಳಾಗಿದೆ ಎಂದು ಟೀಕಿಸಿದರು.
ಇದನ್ನೂ ಓದಿ:ಲವ್ ಜೆಹಾದ್ ಹಿಂದೂ -ಮುಸ್ಲಿಂ ವಿಚಾರವಲ್ಲ: ಹೆಣ್ಣುಮಕ್ಕಳ ಹಕ್ಕುಗಳ ರಕ್ಷಣೆಯೇ ಉದ್ದೇಶ
ನಿಮಗೆ ತಾನು ಸಿಎಂ ಆದ ಮೇಲೆ ಬೇರೆ ಯಾರು ಸಿಎಂ ಆಗಬಾರದು ಎನ್ನುವ ಮನೋಭಾವವಿದೆ. ಇದನ್ನು ಕಾಂಗ್ರೆಸ್ ನಾಯಕರು ಗಂಭೀರವಾಗಿ ಪರಿಗಣಿಸಬೇಕು. 140 ಸ್ಥಾನ ಗೆಲ್ಲುವ ಕಾಂಗ್ರೆಸ್ನಲ್ಲಿ 20 ಸ್ಥಾನ ಗೆಲ್ಲುವುದಿಲ್ಲವೇ ಎನ್ನುವ ಚರ್ಚೆ ಆರಂಭವಾಗಿದೆ. ಸಿದ್ದರಾಮಯ್ಯನವರೇ ಇನ್ನಾದರೂ ನಿಮ್ಮ ದುರಂಹಕಾರದ ಮಾತನ್ನು ನಿಲ್ಲಿಸಿ, ನಿಮ್ಮ ಹೇಳಿಕೆಗೆ ನೀವೇ ಕೊಡವರ ಕ್ಷಮೆಯಾಚಿಸಿ ಎಂದು ವಿಶ್ವನಾಥ್ ಒತ್ತಾಯ ಮಾಡಿದರು.
ರಾಜ್ಯದಲ್ಲಿ ನೈಟ್ ಕರ್ಪ್ಯೂ ವಿಚಾರವಾಗಿ ಮಾತನಾಡಿದ ಅವರು, ನೈಟ್ ಕರ್ಪ್ಯೂ ಬಗ್ಗೆ ಜನಾಭಿಪ್ರಾಯ ಬರುತ್ತಿದೆ. ಸರ್ಕಾರದ ಪರವಾಗಿ ನಾನು ಸರಿಯಿದೆ ಅಂತಾ ಹೇಳಬಹುದು. ಆದರೆ ನಾಡಿನ ಜನರು ಇದನ್ನು ಜೋಕ್ ರೀತಿ ತೆಗೆದುಕೊಂಡಿದ್ದಾರೆ. ನೈಟ್ ಕರ್ಪ್ಯೂ ವಿಚಾರದಲ್ಲಿ ಪುನರ್ ವಿಮರ್ಶೆ ಮಾಡಬೇಕಿದೆ ಎಂದರು.
ಹೊಸವರ್ಷದ ಆಚರಣೆ ಜನ ಸೇರುತ್ತಾರೆ. 30/ 31 ನೈಟ್ ಕರ್ಪ್ಯೂ ಮಾಡಿ ಈಗಲೇ ಯಾಕೆ? ಪುನರ್ ವಿಮರ್ಶೆ ಮಾಡಿದರೆ ಒಳ್ಳೆಯದು. ನೈಟ್ ಕರ್ಪ್ಯೂ ನಿಂದ ಯಾವುದೇ ಪ್ರಯೋಜನವಿಲ್ಲ ಎಂದರು.
ಕೆಲ ತೀರ್ಮಾನಗಳು ಯೋಚನೆ ಮಾಡಿ ತೆಗೆದುಕೊಳ್ಳಬೇಕು. ನಗೆಪಾಟಲಿಗೆ ಈಡಾಗಬಾರದು. ನೈಟ್ ಕರ್ಫ್ಯೂ ವನ್ನು ಯಾರು ಸ್ವಾಗತ ಮಾಡಿಲ್ಲ. ಎಲ್ಲರೂ ಮುಸಿ ಮುಸಿ ನಗುತ್ತಿದ್ದಾರೆ. ಸಂಚಾರ ಸೇವೆಯ ಎಲ್ಲದಕ್ಕೂ ಅನುಮತಿ ನೀಡಿ ಜನ ಓಡಾಡಬಾರದು ಅಂದರೆ ಹೇಗೆ ಎಂದು ಮೈಸೂರಿನಲ್ಲಿ ವಿಶ್ವನಾಥ್ ಪ್ರಶ್ನಿಸಿದರು