ಕಾರ್ಯಕರ್ತರು ಧೃತಿಗೆಡಬೇಕಾಗಿಲ್ಲ: ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಎಚ್.ಪಿ.ಮಂಜುನಾಥ್
ಈ ಬಾರಿ ಗೆದ್ದಿದ್ದರೆ ನಾನು ಸಚಿವನಾಗುತ್ತಿದ್ದೆ...
Team Udayavani, May 14, 2023, 10:47 PM IST
ಹುಣಸೂರು: ನನ್ನ ಸೋಲಿನಿಂದ ಕಾಂಗ್ರೆಸ್ ಕಾರ್ಯಕರ್ತರು ಅಧೀರರಾಗಬೇಡಿ, ರಾಜ್ಯದಲ್ಲಿ ನಮ್ಮದೇ ಸರಕಾರ ಬಂದಿದೆ. ನಿಮ್ಮೊಂದಿಗೆ ಯಾವಾಗಲೂ ಇರುವೆ ಎಂದು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಚ್.ಪಿ.ಮಂಜುನಾಥ್ ಮನವಿ ಮಾಡಿದ್ದಾರೆ.
ನಮ್ಮ ಕಾರ್ಯಕರ್ತರು, ಅಭಿಮಾನಿಗಳು ಕಳೆದ ಎರಡು ದಿನಗಳಿಂದ ಕರೆಮಾಡಿ, ಭೇಟಿ ಮಾಡಿ ನನ್ನ ಸೋಲಿಗೆ ಬೇಸರ ವ್ಯಕ್ತಪಡಿಸಿದ್ದೀರಾ, ಟೀಕೆ ಟಿಪ್ಪಣಿಗಳಿಗೆ ಪ್ರತಿಕ್ರಿಯಿಸಬೇಡಿ, ತಾಳ್ಮೆಯಿಂದ ವರ್ತಿಸಿ. ಸೋಲು ಶಾಶ್ವತವಲ್ಲ. ಕಾಂಗ್ರೆಸ್ ಸರಕಾರ ಅಸ್ಥಿತ್ವಕ್ಕೆ ಬರಲಿದೆ. ನಿಮ್ಮೆಲ್ಲರ ಹಾಗೂ ಕ್ಷೇತ್ರದ ಜನರ ಆಶೋತ್ತರಗಳಿಗೆ ಸದಾ ಧ್ವನಿಯಾಗಿರುವೆ. ಸಕಾರಾತ್ಮಕವಾಗಿರಿ. ಕೋಟ್ಯಂತರ ರೂ ಖರ್ಚುಮಾಡಿರುವ ಜೆಡಿಎಸ್ ಪಕ್ಷದವರು ಸೋಲಿಸಿದ್ದಾರೆ. ಸೋಲನ್ನು ಋಣಾತ್ಮಕವಾಗಿ ಪರಿಗಣಿಸೋಣ. ಈ ಬಗ್ಗೆ ಆತಂಕ ಬೇಡ. ಮುಂದೆ ತಾಲೂಕಿನಲ್ಲಿ ಶಾಂತಿ ಸೌಹಾರ್ದತೆ ಕಾಪಾಡಲು ಎಲ್ಲರೂ ಶ್ರಮಿಸೋಣ ಎಂದರು.
ನನ್ನ ಬೆಂಬಲಕ್ಕೆ ನಿಂತ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು, ಹಿತೈಷಿಗಳು ಸಂಬಂಧಿಕರು, ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸುವೆ. ನನ್ನನ್ನು ಮೂರು ಬಾರಿ ಆಯ್ಕೆ ಮಾಡಿದ್ದೀರಿ, ಈ ಬಾರಿ ಗೆದ್ದಿದ್ದರೆ ನಾನು ಸಚಿವನಾಗುತ್ತಿದ್ದೆ. ನನಗೆ ಸಚಿವನಾಗುವಭಾಗ್ಯವಿಲ್ಲ. ಈ ಸೋಲಿಗೆ ಸಂಪೂರ್ಣ ಜವಾಬ್ದಾರಿ ನಾನೇ ಹೊರುತ್ತೇನೆ. ನನ್ನ ಒಂದು ನಡೆ ನುಡಿಗಳಿಂದ ತಪ್ಪಾಗಿರಬಹುದೆಂಬುದು ನನ್ನ ಭಾವನೆ. ಯಾರೂ ಬೇಸರಿಸಿಕೊಳ್ಳಬೇಡಿರೆಂದು ಮನವಿ ಮಾಡಿರುವ ಅವರು ನೂತನವಾಗಿ ಆಯ್ಕೆಯಾಗಿರುವ ಜಿ.ಟಿ.ಹರೀಶ್ಗೌಡರಿಗೆ ಶುಭಾಶಯ ಸಲ್ಲಿಸುತ್ತೇನೆ ಎಂದರು.