ಸೋರುತಿಹುದು ಅರಮನೆ ಮಾಳಿಗೆ!
ಸರಕಾರದ ನಿರ್ಲಕ್ಷ್ಯ ಕುರಿತು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅಸಮಾಧಾನ
Team Udayavani, Nov 24, 2021, 6:40 AM IST
ಮೈಸೂರು: ಕೆಲವು ದಿನಗಳಿಂದ ಸತತವಾಗಿ ಸುರಿದ ಮಳೆಯಿಂದಾಗಿ ವಿಶ್ವವಿಖ್ಯಾತ ಮೈಸೂರಿನ ಅಂಬಾವಿಲಾಸ ಅರಮನೆ ಮೇಲ್ಛಾವಣಿ ಸೋರುತ್ತಿದ್ದು, ಗೋಡೆಗಳು ತೇವಗೊಂಡಿವೆ.
ರಾಜವಂಶಸ್ಥರು ವಾಸಿಸುತ್ತಿರುವ ಅರಮನೆಯ ಭಾಗದ ಮೇಲ್ಛಾವಣಿ ಯಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ಸೋರುತ್ತಿದ್ದು, ಛಾವಣಿಯ ಪ್ಲಾಸ್ಟರಿಂಗ್ ಉದುರಿ ಬಿದ್ದಿದೆ. ಆಗ ಯಾರೂ ಇಲ್ಲದಿದ್ದ ಕಾರಣ ಅಪಾಯ ಸಂಭವಿಸಿಲ್ಲ. ನೆಲಕ್ಕೆ ಹಾಸಲಾಗಿರುವ ಟೈಲ್ಸ್ಗಳೂ ಕಿತ್ತು ಬಂದಿವೆ ಎಂದು ರಾಜವಂಶಸ್ಥೆ ಪ್ರಮೋದಾ ದೇವಿ ಹೇಳಿದ್ದಾರೆ.
ಅರಮನೆಯ ಕೆಲವು ಭಾಗಗಳು ಈ ಹಿಂದೆಯೇ ದುರಸ್ತಿಯಾಗಿವೆ. ಆದರೆ, ಈ ಬಾರಿ ಸತತ ಮಳೆಯಿಂದಾಗಿ ಹೆಚ್ಚಿನ ಹಾನಿಗೊಳಗಾಗಿದೆ. ಪ್ರಮೋದಾ ದೇವಿ ಅವರು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪ್ರತಿಷ್ಠಾನದಿಂದ ಅರಮನೆಯಲ್ಲಿ ಹಾನಿಗೀಡಾದ ಕರಿಕಲ್ಲುತೊಟ್ಟಿ ಭಾಗದ ಚಂದ್ರಕಲಾ ತೊಟ್ಟಿ ಮತ್ತಿತರ ಕಡೆಗಳಲ್ಲಿ ತಜ್ಞರ ಮಾರ್ಗದರ್ಶನದಲ್ಲಿ ಕೈಗೊಂಡಿರುವ ದುರಸ್ತಿ ಕಾರ್ಯ ನಡೆಯುತ್ತಿರುವಾಗಲೇ ಇತರ ಕೆಲವು ಭಾಗಗಳಲ್ಲಿ ಹಾನಿಯ ಪ್ರಮಾಣ ಹೆಚ್ಚಾಗುತ್ತಿದೆ. ಆದರೆ, ಕಟ್ಟಡದ ದುರಸ್ತಿ ಕೈಗೊಳ್ಳಲು ರಾಜ್ಯ ಸರಕಾರ ಮುಂದಾಗಿಲ್ಲ. ಹೀಗಾಗಿ, ಅಂಬಾವಿಲಾಸ ಅರಮನೆಯಲ್ಲಿ ಹಾನಿಯ ಪ್ರಮಾಣ ಹೆಚ್ಚಾಗುತ್ತಿದೆ.
ಇದನ್ನೂ ಓದಿ:ಕಾಂಪ್ಲೆಕ್ಸ್ ಗೊಬ್ಬರ ಬಳಕೆಗೆ ಹೆಚ್ಚಿನ ಗಮನ ನೀಡಲು ಕ್ರಮ: ಬಿ.ಸಿ.ಪಾಟೀಲ್
ನಮ್ಮಷ್ಟು ಕಷ್ಟ ಯಾರಿಗೂ ಆಗಿಲ್ಲ
ಇಡೀ ದೇಶದಲ್ಲಿ ಸ್ವಾತಂತ್ರ್ಯದ ಬಳಿಕ ಸರಕಾರದಿಂದ ನಾವು ಪಟ್ಟಷ್ಟು ತೊಂದರೆಯನ್ನು ಬೇರೆ ಯಾವ ರಾಜಮನೆತನವೂ ಅನುಭವಿಸಿಲ್ಲ. ನಮ್ಮ ತಪ್ಪಿಲ್ಲದಿದ್ದರೂ ನಾವು ನೋವು ಅನುಭವಿಸಬೇಕಿದೆ. ನ್ಯಾಯಾಲಯಗಳು ನಮ್ಮ ಪರ ತೀರ್ಪು ನೀಡಿದರೂ ಸರಕಾರ ಜಾರಿಗೆ ತರುತ್ತಿಲ್ಲ ಎಂದು ಪ್ರಮೋದಾದೇವಿ ಒಡೆಯರ್ ಅವರು ಮಂಗಳವಾರ “ಉದಯವಾಣಿ’ಯೊಂದಿಗೆ ತಮ್ಮ ನೋವನ್ನು ತೋಡಿಕೊಂಡರು. ನಾನು ರಾಜ್ಯ ಸರಕಾರದ ಅನುಮತಿ ಪಡೆದು ಅರಮನೆಯ ಕೆಲವು ಭಾಗಗಳಲ್ಲಿ ಪಾರಂಪರಿಕ ಕಟ್ಟಡದ ಸಂರಕ್ಷಣೆಗಾಗಿ ಸ್ವಂತ ಹಣದಿಂದ ದುರಸ್ತಿ ಕಾರ್ಯ ಮಾಡುತ್ತಿದ್ದೇನೆ. ಆದರೆ, ಸರಕಾರದಿಂದ ಈ ಹಣ ನಮಗೆ ಮರು ಪಾವತಿಯಾಗಿಲ್ಲ. ಸರಕಾರಕ್ಕೆ ಪತ್ರ ಬರೆದರೂ ಪ್ರತಿಕ್ರಿಯೆ ಬರುತ್ತಿಲ್ಲ. ಇದರಿಂದ ಮನಸ್ಸಿಗೆ ತುಂಬಾ ನೋವಾಗುತ್ತದೆ ಎಂದು ಅವರು ಹೇಳಿದರು. ಅರಮನೆ ಸ್ವಾಧೀನಪಡಿಸಿಕೊಳ್ಳುವ ಸರಕಾರದ ಕಾಯ್ದೆ ವಿರುದ್ಧ ಕೋರ್ಟಿ ನಲ್ಲಿ ದಾವೆ ಹೂಡಿದ್ದೇವೆ. ಇದು ಇತ್ಯರ್ಥವಾಗುವವರೆಗೂ ಮೈಸೂರು ಅರಮನೆ ನಿರ್ವಹಣೆಯನ್ನು ಸರಕಾರ ಮಾಡಬೇಕು. ಅರಮನೆ ವೀಕ್ಷಿಸಲು ಬರುವವರಿಂದ ಪ್ರವೇಶ ದರ ಪಡೆಯಲಾಗುತ್ತದೆ. ಈ ಹಣದಿಂದಲೇ ಅರಮನೆ ಕಟ್ಟಡದ ನಿರ್ವಹಣೆ ಮಾಡಬಹುದು ಎಂದರು.
-ಕೂಡ್ಲಿ ಗುರುರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ