“ಆತ್ಮಸ್ಥೈರ್ಯದಿಂದ ನೆಲೆ ಕಂಡುಕೊಳ್ಳಿ’
Team Udayavani, Aug 18, 2017, 11:51 AM IST
ಮೈಸೂರು: ಪರಾವಲಂಬಿಗಳಾಗಿರುವ ಮಹಿಳೆಯರು ಇಂದಿನ ಆಧುನಿಕ ಸೌಲಭ್ಯಗಳ ಜತೆಗೆ ತಮ್ಮಲ್ಲಿರುವ ಪ್ರತಿಭೆ, ಆತ್ಮಸ್ಥೈರ್ಯದಿಂದ ಸಮಾಜಮುಖೀಯಾಗಿ ನೆಲೆ ಕಾಣಬೇಕಿದೆ ಎಂದು ಪ್ರಜಾ ಪರಿವರ್ತನಾ ವೇದಿಕೆ ರಾಜಾಧ್ಯಕ್ಷ ಬಿ.ಗೋಪಾಲ್ ಹೇಳಿದರು.
ಪ್ರಜಾ ಪರಿವರ್ತನಾ ವೇದಿಕೆಯ ಮೈಸೂರು ಜಿಲ್ಲಾ ಘಟಕದಿಂದ ನಗರದ ಪುರಭವನದಲ್ಲಿ ಗುರುವಾರ ಆಯೋಜಿಸಿದ್ದ ಭಾರತೀಯ ಸಂವಿಧಾನದಲ್ಲಿ ಮಹಿಳೆಯರ ಸ್ಥಾನಮಾನ ಕುರಿತ ಜಾಗೃತಿ ಚಿಂತನಾ ಸಭೆ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರ ಸ್ಥಿತಿ ಅತ್ಯಂತ ಶೋಚನೀಯವಾಗಿದ್ದ ಕಾಲದಲ್ಲಿ ಬುದ್ಧನ ಮಾರ್ಗದರ್ಶನ ಮಹಿಳೆಯರಿಗೆ ದಾರಿ ದೀಪವಾಯಿತು. ಆ ಮೂಲಕ ಪುರುಷರಂತೆ ಮಹಿಳೆಯರು ಸಮಾನರೆಂಬ ಕಲ್ಪನೆ ಹುಟ್ಟಿಕೊಂಡಿದೆ. ಹೀಗಿದ್ದರೂ ಮಹಿಳೆಯರು ಸೂಕ್ತ ಸ್ಥಾನಮಾನ, ಅವಕಾಶದಿಂದ ವಂಚಿತರಾಗಿದ್ದು, ಆದ್ದರಿಂದ ಮಹಿಳೆಯರು ತಮ್ಮ ಪ್ರತಿಭೆ ಹಾಗೂ ಆತ್ಮಸ್ಥೈರ್ಯದಿಂದ ಸಮಾಜಮುಖೀಯಾಗಿ ನೆಲೆ ಕಾಣಬೇಕಿದೆ ಎಂದು ಹೇಳಿದರು.
ಈ ಹಿಂದೆ ಮಹಿಳೆಯರನ್ನು ಕೇವಲ ಸಂಸಾರಕ್ಕೆ ಮಾತ್ರ ಸೀಮಿತ ಮಾಡಲಾಗಿತ್ತು. ಆದರೆ ಇದೀಗ ಪುರುಷರಿಗೆ ಇರುವ ಸಮಾನತೆ, ಸ್ವಾತಂತ್ರ ಮಹಿಳೆಯರಿಗೂ ನೀಡಲಾಗಿದೆ. ಹೀಗಾಗಿ ಮಹಿಳೆಯರು ಜಾತಿ, ಧರ್ಮವೆಂಬ ಅಂಧಕಾರದ ಕೂಪದಿಂದ ಹೊರಬಂದು, ಸಮಾನತೆಯ ಸಮಾಜಕ್ಕೆ ನಾಂದಿ ಹಾಡಬೇಕಿದೆ ಎಂದರು.
ಗಾಂಧಿನಗರ ಉರಿಲಿಂಗಿಪೆದ್ದಿ ಮಠದ ಜಾnನಪ್ರಕಾಶ್ ಸ್ವಾಮೀಜಿ, ಪ್ರಜಾ ಪರಿವರ್ತನ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ವಿ.ಎ.ಮಂಜುಳ, ಬೆಂಗಳೂರು ಸರ್ಕಾರಿ ಕಲಾ ಕಾಲೇಜಿನ ಡಾ.ಆರ್.ಕಾವಲಮ್ಮ, ವೇದಿಕೆ ಜಿಲ್ಲಾಧ್ಯಕ್ಷ ಎಚ್.ಎಂ.ಸತೀಶ್, ಮಂಡ್ಯ ಮಹಿಳಾ ಘಟಕದ ಅಧ್ಯಕ್ಷೆ ರಾಜಮ್ಮಣಿ, ನಗರಾಧ್ಯಕ್ಷೆ ಎಚ್.ಎಲ್.ಮಂಗಳಗೌರಿ ಹಾಜರಿದ್ದರು.