ವಿಮಾನ ಖರೀದಿ ಹಗರಣದಲ್ಲಿ ಕೇಂದ್ರ
Team Udayavani, Aug 27, 2018, 11:51 AM IST
ಮೈಸೂರು: ಪ್ರಧಾನಿ ನರೇಂದ್ರಮೋದಿ ಅವರ ಎನ್ಡಿಎ ಸರ್ಕಾರ ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ 40ಸಾವಿರ ಕೋಟಿ ರೂ.ಗಳ ಹಗರಣ ನಡೆಸಿದ್ದು, ಬಿಜೆಪಿಯ ಭ್ರಷ್ಟಾಚಾರದ ಮುಖವನ್ನು ಜನತೆಗೆ ತೋರಿಸಲು ಕಾಂಗ್ರೆಸ್ ಬೀದಿಗಿಳಿದು ಹೋರಾಟ ಮಾಡಲು ನಿರ್ಧರಿಸಿದೆ. ನಗರದಲ್ಲಿ ಭಾನುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಕ್ಷಣಾ ಖಾತೆ ಮಾಜಿ ರಾಜ್ಯ ಸಚಿವ ಪಲ್ಲಂರಾಜು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ಅನನುಭವಿಗಳಿಗೆ ಮಣೆ: ಮಾಜಿ ಸಚಿವ ಪಲ್ಲಂರಾಜು ಮಾತನಾಡಿ, ರಫೇಲ್ ವಿಮಾನ ಖರೀದಿಯಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಫ್ರಾನ್ಸ್ ಸರ್ಕಾರದೊಂದಿಗೆ ಭಾರತ ಮಾಡಿಕೊಂಡ ಒಪ್ಪಂದವನ್ನು ಬಿಜೆಪಿ ಸರ್ಕಾರ ತಿದ್ದುವ ಮೂಲಕ ಭಾರೀ ಅವ್ಯವಹಾರ ನಡೆಸಿದೆ. ಯುಪಿಎ ಅವಧಿಯಲ್ಲಿನ ಒಪ್ಪಂದದಂತೆ ತಂತ್ರಜ್ಞಾನ ವರ್ಗಾವಣೆಯಿಂದ ಬೆಂಗಳೂರಿನ ಎಚ್ಎಎಲ್ ಕಾರ್ಖಾನೆಯು ಉದ್ಯೋಗ ಸೃಷ್ಟಿ ಮಾಡುವುದರ ಜೊತೆಗೆ ಆರ್ಥಿಕ ಅಭಿವೃದ್ಧಿಗೂ ಅನುಕೂಲವಾಗುತ್ತಿತ್ತು.
ಆದರೆ, ಮೋದಿ ಅವರ ಸರ್ಕಾರ ಈ ಒಪ್ಪಂದವನ್ನು ಸಂಪೂರ್ಣವಾಗಿ ರದ್ದು ಮಾಡಿ ತಮ್ಮ ಆಪ್ತರಾದ ಅನಿಲ್ ಅಂಬಾನಿಯವರ ರಕ್ಷಣಾ ಕ್ಷೇತ್ರದಲ್ಲಿ ಏನೇನೂ ಅನುಭವವಿಲ್ಲದ ಹೊಸ ಉದ್ಯಮಕ್ಕೆ ಅನುವು ಮಾಡಿಕೊಟ್ಟು ದಲ್ಲಾಳಿಗಳಾಗಿದ್ದಾರೆ ಎಂದು ಆರೋಪಿಸಿದರು. ಯುಪಿಎ ಸರ್ಕಾರದ ಅವಧಿಯಲ್ಲಿ 126 ವಿಮಾನಗಳನ್ನು ಭಾರತೀಯ ವಾಯುಸೇನೆಗೆ 54 ಸಾವಿರ ಕೋಟಿಗೆ ಖರೀದಿಸುವ ವ್ಯವಹಾರವಾಗಿತ್ತು.
ಈ ಸಂಬಂಧ ಫ್ರಾನ್ಸ್ನ ದಸ್ಸಾಲ್ಟ್ ಕಂಪನಿ ಜೊತೆಗೆ ಒಪ್ಪಂದ ಮಾಡಿಕೊಂಡು 18 ವಿಮಾನಗಳನ್ನು ಭಾರತಕ್ಕೆ ಕೊಡುವುದು. ತಂತ್ರಜ್ಞಾನದ ವರ್ಗಾವಣೆ ಮೂಲಕ ಬೆಂಗಳೂರಿನ ಎಚ್ಎಎಲ್ ಕಾರ್ಖಾನೆಯು ಉಳಿದ 108 ವಿಮಾನಗಳನ್ನು ತಯಾರಿಸುವ ಯೋಜನೆ ಮಾಡಲಾಗಿತ್ತು.
ಆದರೆ, 2016ರ ಏಪ್ರಿಲ್ನಲ್ಲಿ ಪ್ರಧಾನಿ ಮೋದಿ ಅವರು,ರಕ್ಷಣಾ ಸಾಮಗ್ರಿಗಳ ಉತ್ಪಾದನೆಯ ನಿಯಮಾವಳಿಗಳನ್ನು ಗಾಳಿಗೆ ತೂರಿ 36 ವಿಮಾನಗಳನ್ನು ಖರೀದಿಸುವ ಅಂತಾರಾಷ್ಟ್ರೀಯ ಒಪ್ಪಂದ ಮಾಡಿಕೊಂಡರು. 60 ಸಾವಿರ ಕೋಟಿ ರೂ.ಗಳನ್ನು ನೀಡಿ 36 ವಿಮಾನಗಳನ್ನು ಖರೀದಿಸಲು ತೀರ್ಮಾನಿಸಿ, ತಂತ್ರಜ್ಞಾನದ ವರ್ಗಾವಣೆಯನ್ನು ಕೈಬಿಡಲಾಯಿತು.
ಬದಲಿಗೆ 21ಸಾವಿರ ಕೋಟಿ ವೆಚ್ಚದಲ್ಲಿ ರಿಲಯನ್ಸ್ ಡಿಫೆನ್ಸ್ ಮತ್ತು ಇಂಜಿನಿಯರಿಂಗ್ ಲಿ. ನಿಂದ ಬಿಡಿ ಭಾಗಗಳನ್ನು ಕೊಳ್ಳುವ ಒಪ್ಪಂದ ಮಾಡಿಕೊಳ್ಳಲಾಯಿತು. ರಿಲಯನ್ಸ್ನ ಈ ನೂತನ ಕಂಪನಿಗೆ ವಿಮಾನಗಳ ತಯಾರಿಕೆಯಲ್ಲಿ ಯಾವುದೇ ಅನುಭವವೂ ಇಲ್ಲ ಮತ್ತು ತಂತ್ರಜ್ಞಾನವೂ ತಿಳಿದಿಲ್ಲ. ಹೀಗಾಗಿ ಈ ವ್ಯವಹಾರ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ದೂರಿದರು.
ಮೂರರಷ್ಟು ಬೆಲೆ ನಿಗದಿ: ಯುಪಿಎ ಒಪ್ಪಂದದ ಪ್ರಕಾರ ಪ್ರತಿ ವಿಮಾನಕ್ಕೆ 526.10ಕೋಟಿ ಬೆಲೆ ಇತ್ತು. ಆದರೆ, ಮೋದಿಯವರು ಮಾಡಿಕೊಂಡ ಒಪ್ಪಂದದಂತೆ ಪ್ರತಿ ವಿಮಾನಕ್ಕೆ 1670.70ಕೋಟಿ ಬೆಲೆ ನಿಗದಿಯಾಗಿದೆ. ಆರು ವರ್ಷಗಳಲ್ಲಿ ಇಷ್ಟು ದುಬಾರಿ ವೆಚ್ಚದಲ್ಲಿ ಖರೀದಿಸುವ ಅವಶ್ಯಕತೆಯ ಬಗ್ಗೆ ಅನುಮಾನಕ್ಕೆ ಕಾರಣವಾಗಿದೆ. ಅಲ್ಲದೇ, ದೇಶಕ್ಕೆ ಅತ್ಯಂತ ಅವಶ್ಯಕವಾಗಿರುವ ತಂತ್ರಜ್ಞಾನ ವರ್ಗಾವಣೆಯೂ ಇಲ್ಲದೇ ಇರುವುದು ಸ್ವದೇಶಿ ಉತ್ಪಾದನೆಗೆ ಹಿನ್ನಡೆಯಾಗಿದೆ ಎಂದು ಟೀಕಿಸಿದರು.
ಹಾದಿ ತಪ್ಪಿಸಲಾಗ್ತಿದೆ: ಯುಪಿಎ ಸರ್ಕಾರವು ಮಿರಾಜ್ ಮತ್ತು ಸುಕೋಯಿ ವಿಮಾನಗಳನ್ನು ಖರೀದಿಸುವಲ್ಲಿ ಸಂಸತ್ತಿಗೆ ಮತ್ತು ದೇಶಕ್ಕೆ ಅದರ ಬೆಲೆಗಳನ್ನು ತಿಳಿಸಿ ಪಾರದರ್ಶಕ ವ್ಯವಹಾರ ಮಾಡಿತ್ತು. ಆದರೆ, ಮೋದಿಯವರ ಸರ್ಕಾರ ರಫೇಲ್ ವಿಮಾನದ ಬೆಲೆ 670 ಕೋಟಿ ರೂ. ಎಂದು ಸಂಸತ್ತಿಗೆ ತಿಳಿಸಿದ್ದರೂ ದಸ್ಸಾಲ್ಟ್ ಕಂಪನಿಯ ವಾರ್ಷಿಕ ವರದಿಯಲ್ಲಿ ಇದರ ಬೆಲೆ 1670 ಕೋಟಿ ಎಂದು ನಮೂದಿಸಿರುವುದು ಇದರಲ್ಲಿ ಪಾರದರ್ಶಕ ವ್ಯವಹಾರ ನಡೆದಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಹರಿಹಾಯ್ದರು.
ರಫೇಲ್ ವಿಮಾನ ಖರೀದಿ ವ್ಯವಹಾರ 40 ಸಾವಿರ ಕೋಟಿ ರೂ.ಗಳ ಬಹು ದೊಡ್ಡ ಹಗರಣ. ಮೋದಿ ಸರ್ಕಾರ ರಕ್ಷಣಾ ಇಲಾಖೆಯಲ್ಲಿ ನಡೆಸಿರುವ ಈ ಹಗರಣವನ್ನು ಕಾಂಗ್ರೆಸ್ ಪಕ್ಷ ಜನತೆಗೆ ತಿಳಿಸುವ ಕೆಲಸ ಮಾಡುತ್ತಿದೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ. ನಾವು ಸಚ್ಛಾರಿತ್ರ್ಯರು, ಪ್ರಾಮಾಣಿಕರು ಎನ್ನುತ್ತಿದ್ದವರ ಬಂಡವಾಳ ಬಯಲು ಮಾಡುತ್ತೇವೆ. ಬೀದಿಗಿಳಿದು ಹೋರಾಡುತ್ತೇವೆ.
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ