ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗಬಾರದು
Team Udayavani, Nov 18, 2019, 3:00 AM IST
ಎಚ್.ಡಿ.ಕೋಟೆ: ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧ ಅನ್ನುವ ಆದೇಶ ತಿಳಿದಿದ್ದರೂ ಅದೆಷ್ಟೋ ಮಂದಿ ಪೋಷಕರು ವಿವಿಧ ಕಾರಣಗಳಿಂದ ಕಾನೂನು ಕಡೆಗಣಿಸಿ ಕದ್ದು ಮುಚ್ಚಿ ರಾತ್ರೋರಾತ್ರಿ ಬಾಲ್ಯವಿವಾಹಗಳನ್ನು ನೆರವೇರಿಸಿ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ಆತಂಕ ವ್ಯಕ್ತಪಡಿಸಿದರು.
ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಆರೋಗ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ತಾಲೂಕಿ ಆಶಾ ಕಾರ್ಯಕರ್ತೆಯರಿಗಾಗಿ ಆಯೋಜಿಸಿದ್ದ ಮಕ್ಕಳಿಗೆ ಸಂಬಂಧಿಸಿದ ಕಾನೂನು ಮತ್ತು ದತ್ತು ಸ್ವೀಕಾರದ ನಿಯಮಗಳ ಬಗ್ಗೆ ಕಾಳಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತಪ್ಪು ಮಾಡಿದರೆ ಶಿಕ್ಷೆ ಖಚಿತ: ವಿವಾಹದ ನಂತರ ಅಪ್ರಾಪ್ತ ಬಾಲಕಿ ಗರ್ಭವತಿಯಾದಾಗಲು ಫೋಕ್ಸೋ ಕಾನೂನಿಯಡಿಯಲ್ಲಿ ವಿವಾಹವಾದ ವರ ಮತ್ತು ವಧುವಿನ ಪೋಷಕರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ಇದರಿಂದ ಪೋಷಕರು ಶಿಕ್ಷೆಗೊಳಗಾದರೆ ಅಪ್ರಾಪ್ತ ಬಾಲಕಿಗೆ ದಿಕ್ಕಿಲ್ಲದಂತಾಗುತ್ತಾರೆ ಅನ್ನುವುದನ್ನು ಪೋಷಕರು ಮನಗಾಣಬೇಕು ಎಂದರು.
ಪೋಷಕರಿಗೆ ತಿಳಿ ಹೇಳಿ: ಕಾನೂನು ಬದ್ಧವಾಗಿ ಯುವತಿಗೆ 18 ಯುವಕನಿಗೆ 21 ವರ್ಷವಾದಾಗ ವಿವಾಹ ನೆರವೇರಿಸಿದರೂ ಯುವತಿ ದೈಹಿಕವಾಗಿ ಮಾನಸಿಕವಾಗಿ ಸಿದ್ಧಳಾಗಲು ವಿವಾಹದ ನಂತರ 2 ವರ್ಷ ಗರ್ಭವತಿಯಾಗುವುದನ್ನು ತಡೆಗಟ್ಟಬೇಕು. ಈ ವಿಚಾರಗಳನ್ನು ಆಶಾ ಕಾರ್ಯಕರ್ತೆಯರು ಮನೆ ಮನೆಗಳಿಗೆ ಭೇಟಿ ನೀಡಿ ಪೋಷಕರಿಗೆ ತಿಳಿ ಹೇಳುವಂತೆ ತಿಳಿಸಿದರು.
ಫೋಕ್ಸೋ ಕಾಯ್ದೆ ಬಗ್ಗೆ ಮಾಹಿತಿ: ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿ ಆಶಾ ಮಾತನಾಡಿ, ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಕಾನೂನಿನಲ್ಲಿರುವ ಕ್ರಮಗಳು, ಹೆಣ್ಣು ಭ್ರೂಣ ಹತ್ಯೆ ಹಾಗೂ ಬಾಲ್ಯವಿವಾಹ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ 2012ರಲ್ಲಿ ಜಾರಿಗೆ ಬಂದಿರುವ ಫೋಕ್ಸೋ ಕಾಯ್ದೆಯ ನಿಯಮಗಳ ಬಗ್ಗೆ ತಿಳಿಸಿದರು.
ಮಕ್ಕಳ ಹಕ್ಕು ಉಲ್ಲಂಘನೆಯಾಗಬಾರದು: ಬಾಲ್ಯವಿವಾಹ ಮಕ್ಕಳು ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಮಾಹಿತಿ ತಿಳಿದು ಬಂದರೆ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ತಿಳಿಸುವಂತೆ ಮನವಿ ಮಾಡಿಕೊಂಡ ಅವರು, ಇಂದಿಗೂ ತಾಲೂಕಿನ ಹಾಡಿಗಳಲ್ಲಿ ಮಕ್ಕಳ ಹಕ್ಕು ಉಲ್ಲಂಘನೆಯಾಗಿ ಮಕ್ಕಳು ಶಾಲೆಯಿಂದ ಹೊರಗುಳಿದಿರುವುದಕ್ಕೆ ವಿಷಾದ ವ್ಯಕ್ತಪಡಿಸಿ, ಹಾಡಿಗಳತ್ತ ಆಶಾ ಕಾರ್ಯ ಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹೆಚ್ಚು ಒಲವು ಹರಿಸಿ ಪೋಷಕರ ಮನವೊಲಿಸಿ ಮಕ್ಕಳ ಹಕ್ಕು ರಕ್ಷಣೆಗೆ ಮುಂದಾಗುವಂತೆ ಸಲಹೆ ನೀಡಿದರು.
ಆಶಾ ಕಾರ್ಯಕರ್ತೆಯರಿಗೆ ಮಕ್ಕಳ ದತ್ತು ಸ್ವೀಕಾರದ ನಿಯಮ, ಮಕ್ಕಳ ಹಕ್ಕು, ಬಾಲ್ಯವಿವಾಹ, ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕುರಿತಾದ ಕಾನೂನುಗಳು ಮತ್ತು ಇವುಗಳ ತಡೆಗೆ ಆಶಾ ಕಾರ್ಯಕರ್ತೆಯರು ಅನುಸರಿಸಬೇಕಾದ ಕಾನೂನು ಕ್ರಮಗಳನ್ನು ಕುರಿತು ಜಿಲ್ಲಾ ಕಾನೂನು ಅಧಿಕಾರಿ ಶ್ರೀನಿವಾಸರಾಜೇಅರಸ್ ಪ್ರಾತ್ಯಕ್ಷತೆ ನೀಡಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ನವೀನ್ಕುಮಾರ್ ಇತರರು ಇದ್ದರು.