ಸಾಲ ಬಾಧೆ: ರೈತ ಆತ್ಮಹತ್ಯೆ
Team Udayavani, Feb 17, 2018, 12:49 PM IST
ಹುಣಸೂರು: ಸಾಲಬಾಧೆಯಿಂದ ರೈತನೋರ್ವ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಚನ್ನಸೋಗೆ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಹನಗೋಡು ಹೋಬಳಿಯ ಚನ್ನಸೋಗೆ ಗ್ರಾಮದ ಚಂದ್ರಪ್ಪ(35) ಮೃತ ರೈತ.
ಚಂದ್ರಪ್ಪರಿಗೆ ಎರಡು ಎಕರೆ ಜಮೀನಿದ್ದು, ತಂಬಾಕು ಬ್ಯಾರನ್ ಹೊಂದಿರುವ ಇವರು ಹುಣಸೂರಿನ ಕೆನರಾ ಬ್ಯಾಂಕಿನಲ್ಲಿ 4.30 ಲಕ್ಷರೂ. ಹಾಗೂ ಸುಮಾರು 5 ಲಕ್ಷರೂ. ನಷ್ಟು ಬಡ್ಡಿ ಸಾಲ ಮಾಡಿಕೊಂಡಿದ್ದರು ಕೃಷಿ ಕೈ ಹಿಡಿಯದ ಕಾರಣ ಸಾಲ ತೀರಿಸಲಾಗದೆ ತಮ್ಮ ಹೊಲದಲ್ಲೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಪತ್ನಿ ಸುಧಾಮಣಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸ್ಥಳಕ್ಕೆ ಎಸ್.ಐ.ಪುಟ್ಟಸ್ವಾಮಿ, ಕಂದಾಯ ಹಾಗೂ ಕೃಷಿ ಅಧಿಕಾರಿಗಳು, ಜಿಪಂ ಮಾಜಿ ಸದಸ್ಯ ಸಿ.ಟಿ.ರಾಜಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಮೃತ ರೈತನ ಕುಟುಂಬಕ್ಕೆ ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ನೀಡಬೇಕೆಂದು ಗೋವಿಂದನಹಳ್ಳಿ ಗ್ರಾಪಂ ಅಧ್ಯಕ್ಷೆ ಮಮತಾ ಆಗ್ರಹಿಸಿದ್ದಾರೆ.