ಪ್ರತಿರೋಧದ ನಡುವೆಯೂ ನಟ ದರ್ಶನ್ ಪ್ರಚಾರ
Team Udayavani, May 6, 2018, 5:12 PM IST
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರಕ್ಕೆ ಬಂದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಜೆಡಿಎಸ್ ಕಾರ್ಯಕರ್ತರ ಪ್ರತಿರೋಧ ಎದುರಿಸಬೇಕಾಯಿತು.
ಶನಿವಾರ ಬೆಳಗ್ಗೆ ಚಾಮುಂಡೇಶ್ವರಿ ಕ್ಷೇತ್ರದ ನಾಗನಹಳ್ಳಿಯಲ್ಲಿ ರೋಡ್ ಶೋ ನಡೆಸಲು ಬಂದ ದರ್ಶನ್ ವಿರುದ್ಧ ಘೋಷಣೆ ಕೂಗಿದ ಜೆಡಿಎಸ್ ಕಾರ್ಯಕರ್ತರು ಜಿ.ಟಿ.ದೇವೇಗೌಡ ಪರ ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕಾರ್ಯಕರ್ತರು ದರ್ಶನ್ ಹಾಗೂ ಸಿದ್ದರಾಮಯ್ಯ ಅವರಿಗೆ ಜೈಕಾರ ಕೂಗಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.
ಲಘು ಲಾಠಿ ಪ್ರಹಾರ: ಇದರ ಮಧ್ಯೆಯೇ ತೆರೆದ ವಾಹನ ಏರಿದ ದರ್ಶನ್, ಜನರತ್ತ ಕೈ ಬೀಸಿ ಹೊರಟ ನಂತರ, ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ತಮ್ಮ ಪಕ್ಷದ ಬಾವುಟ ಹಿಡಿದುಧಿಕ್ಕಾರ, ಜೈಕಾರ ಕೂಗ ತೊಡಗಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿದ್ದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದರು.
ಒಂದೆಡೆ ತಮ್ಮ ನೆಚ್ಚಿನ ನಟನನ್ನು ನೋಡಲು ಜನರು ಮುಗಿ ಬಿದ್ದು, ಮಹಡಿಗಳನ್ನು ಹತ್ತಿ ತಮ್ಮ ಮೊಬೈಲ್ಗಳಲ್ಲಿ ನೆಚ್ಚಿನ ನಟನನ್ನು ಸೆರೆ ಹಿಡಿದುಕೊಳ್ಳುತ್ತಿದ್ದರೆ, ಮತ್ತೂಂದೆಡೆ ದರ್ಶನ್ ಅಭಿಮಾನಿಗಳು ಎಲ್ಲ ಪಕ್ಷಗಳಲ್ಲೂ ಇದ್ದಾರೆ. ಆದರೆ ಅವರು ಕೇವಲ ಒಂದು ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿರುವುದು ಸರಿಯಲ್ಲ ಎನ್ನುವ ಮಾತುಗಳೂ ಕೇಳಿ ಬಂದವು.
ಅಭಿಮಾನಿಗಳ ಅಸಮಾಧಾನ: ಕಾವೇರಿ ವಿಚಾರದಲ್ಲಿ ಬಾಯಿಬಿಡದ ದರ್ಶನ್, ಅಂಬರೀಶ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂತ್ರಿ ಮಂಡಲದಿಂದ ಕೈಬಿಟ್ಟಾಗಲೂ ಮೌನ ಮುರಿಯದ ದರ್ಶನ್, ಈಗ ಸಿದ್ದರಾಮಯ್ಯ ಪರವಾಗಿ ಪ್ರಚಾರಕ್ಕೆ ಬಂದಿರುವುದು, ನಾವು ದರ್ಶನ್ ಮೇಲೆ ಇಟ್ಟಿರುವ ಅಭಿಮಾನಕ್ಕೆ ತಣ್ಣೀರೆರಚಿದೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದರು.
ಪೇಟಾ ರಸ್ತೆಗೆಸೆದು ಆಕ್ರೋಶ: ರೋಡ್ ಶೋ ವೇಳೆ ನಟ ದರ್ಶನ್ ಬೆಲವತ್ತ ಗ್ರಾಮದ ಒಳಗೆ ಬಾರದೇ ಹಿಂತಿರುಗಿದ್ದರಿಂದ ಬೇಸರಗೊಂಡ ದರ್ಶನ್ ಅಭಿಮಾನಿಗಳು, ಸನ್ಮಾನಕ್ಕಾಗಿ ತಂದಿದ್ದ ಶಾಲು, ಮೈಸೂರು ಪೇಟಾವನ್ನು ರಸ್ತೆಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು.
ಬೆಳವಾಡಿ ಬಳಿ ದರ್ಶನ್ ಬರುವ ಮುನ್ನವೇ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಬಿಗುವಿನ ವಾತಾವರಣ ಉಂಟಾಗಿತ್ತು. ಪೊಲೀಸರು ಎರಡು ಬಣದವರನ್ನು ಸಮಾಧಾನಪಡಿಸಿ ದೂರ ಕಳಿಸಿದರು. ಬಿರುಸಿನ ಪ್ರಚಾರ: ಜೆಡಿಎಸ್ ಕಾರ್ಯಕರ್ತರ ಪ್ರತಿರೋಧದ ನಡುವೆಯೂ ನಟ ದರ್ಶನ್, ಸಿಎಂ ಸಿದ್ದರಾಮಯ್ಯ ಪರ ಚಾಮುಂಡೇಶ್ವರಿ ಕ್ಷೇತ್ರದ 33 ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ಹಣ ಹಂಚಿಕೆ: ಚುನಾವಣಾ ಆಯೋಗದ ಅಧಿಕಾರಿಗಳು ಹಾಗೂ ಪೊಲೀಸರ ಎದುರೇ ಕಾಂಗ್ರೆಸ್ ಕಾರ್ಯಕರ್ತರು ರಾಜಾ ರೋಷವಾಗಿ ಹಣ ಹಂಚಿಕೆಯಲ್ಲಿ ತೊಡಗಿದ್ದು ಕಂಡುಬಂದಿತು.