ಪ್ರತಿಯೊಬ್ಬರು ನೀರನ್ನು ಮಿತವಾಗಿ ಬಳಸಿ
Team Udayavani, Mar 24, 2017, 12:48 PM IST
ತಿ.ನರಸೀಪುರ: ಪ್ರತಿಯೊಬ್ಬ ನಾಗರಿಕರು ಇಂದಿನಿಂದಲೇ ನೀರನ್ನು ಮಿತವಾಗಿ ಬಳಕೆ ಮಾಡುವ ಮೂಲಕ ನೀರಿನ ಸಂರಕ್ಷಣೆಗೆ ಮುಂದಾಗಬೇಕು ಎಂದು ಹಿರಿಯ ಶ್ರೇಣಿ ನ್ಯಾಯಾಧೀಶರಾದ ಎ.ನಾಗಿರೆಡ್ಡಿ ಹೇಳಿದರು.
ವಿಶ್ವ ಜಲ ದಿನಾಚರಣೆ ಅಂಗವಾಗಿ ಪಟ್ಟಣದ ವಿದ್ಯೋದಯ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘ ಮತ್ತು ವಿದ್ಯೋದಯ ಕಲಾ ವಾಣಿಜ್ಯ ಪ್ರಥಮ ದರ್ಜೆ ಕಾಲೇಜು ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಜಾnವಂತ ನಾಗರಿಕರು ನೀರನ್ನು ಮಿತವಾಗಿ ಬಳಕೆ ಮಾಡುವ ಜೊತೆಗೆ ನೀರು ಕಲ್ಮಶಗೊಳ್ಳದಂತೆ ಅಗತ್ಯ ಕ್ರಮವಹಿಸಬೇಕು. ನಾಗರಿಕರು ನೀರಿನ ಸಂರಕ್ಷಣೆ ಮಾಡದೇ ಇದ್ದ ಪಕ್ಷದಲ್ಲಿ ನಮ್ಮ ಮುಂದಿನ ಪೀಳಿಗೆ ಜನರು ಹಣಕೊಟ್ಟು ಪೆಟ್ರೋಲ್ ಖರೀದಿಸುವ ಹಾಗೇ ನೀರನ್ನು ಸಹ ಖರೀದಿ ಮಾಡಬೇಕಾದ ಅನಿವಾರ್ಯತೆ ಒದಗಿ ಬರಲಿದೆ ಎಂದರು.
ಸದ್ಯದ ಪರಿಸ್ಥಿತಿಯಲ್ಲಿ ಜನರು ಹರಿಯುವ ನದಿಯಲ್ಲಿ ಸ್ನಾನ ಮಾಡುವುದು, ಬಟ್ಟೆ ತೊಳೆಯುವುದು, ಇನ್ನಿತರ ನಿತ್ಯ ಕರ್ಮಗಳನ್ನು ಮಾಡುವ ಮೂಲಕ ನದಿಯ ಪಾವಿತ್ರ್ಯ ಹಾಳು ಮಾಡುತ್ತಿದ್ದು, ನೀರನ್ನು ಕಲ್ಮಶಗೊಳಿಸುತ್ತಿದ್ದಾರೆ. ಇದೇ ನೀರನ್ನು ಕುಡಿಯಲು ಉಪಯೋಗಿಸುವ ಮೂಲಕ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಕಿರಿಯ ಶ್ರೇಣಿ ನ್ಯಾಯಾಧೀಶರಾದ ಮೋಹನ್ ಪಿ.ಚಂದ್ರ, ಪ್ರಾಂಶುಪಾಲ ಡಾ.ರಾಮಚಂದ್ರ, ವಕೀಲರ ಸಂಘದ ಅಧ್ಯಕ್ಷ ಸಿ.ಎನ್.ದೊಡ್ಡಲಿಂಗೇಗೌಡ, ಕಾರ್ಯ ನಿರ್ವಾಹಕ ಸದಸ್ಯ ಕಾರ್ಯದರ್ಶಿ ಸುಮೀಯಾಬಾನು, ವಕೀಲರಾದ ಮಾದಪ್ಪ, ಸತೀಶ್, ಬಿ.ಸುಮಿತ್ರ, ಮಾದಪ್ಪ ಇತರರು ಇದ್ದರು.