Nanjangud; ಜಮೀನು ವಿಚಾರದ ದಾಯಾದಿಗಳ ಗಲಾಟೆ ಕೊಲೆಯಲ್ಲಿ ಅಂತ್ಯ
Team Udayavani, Feb 9, 2024, 2:48 PM IST
ಮೈಸೂರು: ಜಮೀನು ವಿಚಾರಕ್ಕೆ ದಾಯಾದಿಗಳ ನಡುವೆ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾದ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಕಾರ್ಯ ಗ್ರಾಮದಲ್ಲಿ ನಡೆದಿದೆ.
ಅಣ್ಣ ತಮ್ಮಂದಿರ ಗಲಾಟೆಯಲ್ಲಿ ಕರಿಶೆಟ್ಟಿ ಎಂಬವರು ಕೊಲೆಯಾಗಿದ್ದಾರೆ. ಅಣ್ಣ ಶಿವಣ್ಣ ಶೆಟ್ಟಿ ಸೇರಿ ನಾಲ್ವರ ವಿರುದ್ದ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಕಾರ್ಯ ಗ್ರಾಮದ ಸರ್ವೆ ನಂ.91 ಮತ್ತು 92 ರ ಜಮೀನಿನ ವಿಚಾರದಲ್ಲಿ ಕರಿಶೆಟ್ಟಿ ಹಾಗೂ ಶಿವಣ್ಣಶೆಟ್ಟಿ ನಡುವೆ ಎಸಿ ನ್ಯಾಯಾಲಯದಲ್ಲಿ ವ್ಯಾಜ್ಯವಿದೆ. ಜಮೀನು ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ದ್ವೇಷ ಮುಂದುವರಿದಿದ್ದು, ಗುರುವಾರ ರಾತ್ರಿ ಇದೇ ವಿಚಾರದಲ್ಲಿ ಶಿವಣ್ಣಶೆಟ್ಟಿ, ಮಗ ಸಿದ್ದಪ್ಪಾಜಿ ತೋಟದ ಮನೆಗೆ ಬಂದು ಜಗಳ ಮಾಡಿದ್ದಾರೆ. ಸಿದ್ದಪ್ಪಾಜಿ ಕರಾಟೆ ಪಟುವಾಗಿದ್ದು ಕರಿಶೆಟ್ಟಿ ಎದೆಗೆ ಗುದ್ದಿದ್ದಾನೆ. ತಂದೆ ಶಿವಣ್ಣಶೆಟ್ಟಿ ಜೊತೆ ಬಂದ ಸಿದ್ದಪ್ಪಾಜಿ, ಚಿಕ್ಕಪ್ಪ ಕರಿಶೆಟ್ಟಿಗೆ ಹೊಡೆದಿದ್ದಾನೆ. ತಂದೆಯ ರಕ್ಷಣೆಗೆ ಬಂದ ಮಗ ಕುಮಾರಶೆಟ್ಟಿ ಮೇಲೂ ಹಲ್ಲೆ ನಡೆಸಿದ್ದಾರೆ. ತಂದೆ ಮಗ ನಡೆಸಿದ ಹಲ್ಲೆಗೆ ಕರಿಶೆಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಶಿವಣ್ಣ ಶೆಟ್ಟಿ, ಸಿದ್ದಪ್ಪಾಜಿ, ಮಲ್ಲಿಗಮ್ಮ ಹಾಗೂ ನೀಲಮ್ಮ ವಿರುದ್ದ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.