ಹುಣಸೂರು: ಚಿಲ್ಕುಂದ; ವೇತನಕ್ಕಾಗಿ ಆಗ್ರಹಿಸಿ ಗ್ರಾ.ಪಂ.ಸಿಬ್ಬಂದಿಗಳ ಪ್ರತಿಭಟನೆ
Team Udayavani, May 31, 2022, 1:52 PM IST
ಹುಣಸೂರು: ಗ್ರಾಮೀಣಾಭಿವೃದ್ದಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ದುಡಿಯುತ್ತಿರುವ ಗ್ರಾಮ ಪಂಚಾಯ್ತಿ ನೌಕರರಿಗೆ ಕಳೆದ 10ನೇ ತಿಂಗಳಿನಿಂದ ವೇತನವೇ ಬಿಡುಗಡೆಯಾಗಿಲ್ಲವೆಂದು ಇದೀಗ ಪ್ರತಿಭಟನೆ ಹಾದಿ ಹಿಡಿದಿದ್ದಾರೆ.
ತಾಲೂಕಿನ ಚಿಲ್ಕುಂದ ಗ್ರಾ.ಪಂ.ನೌಕರರು ತಮ್ಮ ಹಳೇ ಬಾಕಿ ವೇತನಕ್ಕಾಗಿ ಗ್ರಾಮ ಪಂಚಾಯಿತಿ ನೌಕರರು ಸೋಮವಾರದಂದು ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ನೌಕರರು ನಮಗೂ ಎಲ್ಲರಂತೆ ಹೆಂಡತಿ,ಮಕ್ಕಳು,ವಯಸ್ಸಾದ ತಂದೆಯಾಯಿಯರಿದ್ದಾರೆ. ಕೆಲವರು ಮಕ್ಕಳ ಶಿಕ್ಷಣಕ್ಕೂ ಹಣ ಹೊಂದಿಸಲಾಗದ ಸ್ಥಿತಿಯಲ್ಲಿದ್ದೇವೆ. ನಮಗೂ ಬದುಕಿದೆ, ನರೇಗಾ ಅನುಷ್ಠಾನ, ಕೋವಿಡ್ ನಿರ್ವಹಣೆ, ಕಂದಾಯ ವಸೂಲಿ, ಕಚೇರಿ ಕೆಲಸ, ಸ್ವಚ್ಛತೆ ಹೀಗೆ ಅಧಿಕಾರಿಗಳು, ಗ್ರಾ.ಪಂ.ಪ್ರತಿನಿಧಿಗಳ ಆದೇಶದಂತೆ ಹಗಲಿರುಳೆನ್ನೆದೆ ಕಾರ್ಯನಿರ್ವಹಿಸುವ ನಮ್ಮ ಬಾಕಿ ಸಂಬಳ ನೀಡಿ ಎಂದು ಘೋಷಣೆ ಕೂಗಿ ಸಾರ್ವಜನಿಕರ ಗಮನ ಸೆಳೆದರು.
ನೌಕರ ಜಗದೀಶ್ ಮಾತನಾಡಿ ನಮಗೆ 2018 ರ ಹತ್ತು ತಿಂಗಳ ವೇತನ ಬಾಕಿ ಇದ್ದು, ಕಳೆದ ನಾಲ್ಕು ವರ್ಷಗಳಿಂದ ಬಾಕಿ ಸಂಬಳ ನೀಡದೆ ಸತಾಯಿಸುತ್ತಿದ್ದಾರೆ. ಈಗಲಾದರೂ ಬಾಕಿ ಸಂಬಳ ನೀಡಬೇಕೆಂದು ಒತ್ತಾಯಿಸಿದರು.
ಭರವಸೆ, ಪ್ರತಿಭಟನೆ ವಾಪಾಸ್:
ಧರಣಿ ಸ್ಥಳಕ್ಕೆ ಭೇಟಿ ಇತ್ತ ಗ್ರಾ.ಪಂ.ಅಧ್ಯಕ್ಷೆ ಶೋಭಾಜಯರಾಂ, ಉಪಾಧ್ಯಕ್ಷö್ಯ ಜಯಣ್ಣ, ಪಿಡಿಓ ಶಿವಕುಮಾರ್ ನೌಕರರ ಸಮಸ್ಯೆ ಆಲಿಸಿ, ಗ್ರಾ.ಪಂ.ಗೆ ಸಾಕಷ್ಟು ಆದಾಯವಿಲ್ಲದೆ, ಸರಕಾರದಿಂದ ಬಿಡುಗಡೆಯಾಗಬೇಕಿದ್ದ ಕೆಲ ಅನುದಾನ ಬಾರದ್ದರಿಂದ ತೊಂದರೆಯಾಗಿದೆ. ಆದರೂ ಜೂನ್ 10 ರೊಳಗೆ ಹಳೆ ಬಾಕಿಯ ಎರಡು ತಿಂಗಳ ವೇತನ ನೀಡಲಾಗುವುದು. ಉಳಿದ ಬಾಕಿಯನ್ನು ಹಂತ-ಹಂತವಾಗಿ ನೀಡುವ ಭರವಸೆ ಮೇರೆಗೆ ಪ್ರತಿಭಟನೆ ಹಿಂಪಡೆದರು. ಗ್ರಾ.ಪಂ.ಸದಸ್ಯರಾದ ಪುಟ್ಟಮ್ಮ, ಗೌರಮ್ಮ ಹಾಜರಿದ್ದರು.
ಪ್ರತಿಭಟನೆಯಲ್ಲಿ ನೌಕರರಾದ ಮದುಸ್ವಾಮಿ, ಕರಿಯಪ್ಪ, ರವಿ, ಶಿವಣ್ಣ, ಚಂದ್ರು, ನಾಗೇಶ, ವಿವೇಕ, ಅರುಣ್ ಕುಮಾರ್ ಸೇರಿದಂತೆ ಇತರೆ ಸಿಬ್ಬಂದಿಗಳು ಭಾಗವಹಿಸಿದ್ದರು.