Hunsur: ಸಾಲಬಾಧೆಯಿಂದ ರೈತ ಅತ್ಮಹತ್ಯೆಗೆ ಶರಣು
Team Udayavani, Mar 18, 2024, 9:02 PM IST
ಹುಣಸೂರು: ಸಾಲಬಾಧೆಯಿಂದ ರೈತರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ತಿಪ್ಪಲಾಪುರದಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ತಿಪ್ಪಲಾಪುರದ ಕರಿಗೌಡ(54) ಆತ್ಮಹತ್ಯೆ ಮಾಡಿಕೊಂಡವರು. ಇವರಿಗೆ ಒಬ್ಬ ಮಗನಿದ್ದಾನೆ.
ಮೃತ ರೈತ ಕರಿಗೌಡರಿಗೆ 2.5 ಎಕರೆ ಜಮೀನಿದ್ದು, ತಂಬಾಕು ಮತ್ತಿತರ ಬೆಳೆ ಬೆಳೆಯುತ್ತಿದ್ದರು. ಕೊತ್ತೆಗಾಲ ಕರ್ನಾಟಕ ಬ್ಯಾಂಕ್ ನಲ್ಲಿ 2 ಲಕ್ಷ ಹಾಗೂ ಗ್ರಾಮದಲ್ಲಿ 2 ಲಕ್ಷದಷ್ಟು ಕೈ ಸಾಲ ಮಾಡಿಕೊಂಡಿದ್ದರು. ಬೆಳೆ ಕೈಹತ್ತದೆ, ಸಾಲ ತೀರಿಸಲಾಗದೆ ಚಿಂತಿತರಾಗಿದ್ದ ಪತಿ ಬೆಳೆಗೆ ಹಾಕಲು ತಂದಿರಿಸಿದ್ದ ಕ್ರಿಮಿನಾಶಕದ ಮಾತ್ರೆಗಳನ್ನು ಸೇವಿಸಿದ್ದರು. ಅಸ್ವಸ್ಥರಾಗಿದ್ದವರನ್ನು ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತ ಕರಿಗೌಡರ ಪತ್ನಿ ಸುಶೀಲಮ್ಮ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.