ತಮಿಳುನಾಡಿಗೆ ಕಬಿನಿ ನೀರು, ನಮಗೆ “ಕಂಬನಿ’
Team Udayavani, Jul 23, 2017, 11:37 AM IST
ಎಚ್.ಡಿ.ಕೋಟೆ: ಒಂದು ವಾರದಿಂದ ಸುರಿದ ಮಳೆಗೆ ಕಬಿನಿ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗುತ್ತಿದ್ದಂತೆಯೇ ತಮಿಳುನಾಡಿಗೆ ಸುಮಾರು 7 ಸಾವಿರಕ್ಕೂ ಕ್ಯೂಸೆಕ್ಗೂ ಹೆಚ್ಚು ನೀರನ್ನು ಹೊರ ಬಿಡಲಾಗುತ್ತಿದೆ.
ಕಳೆದ ಮೂರು ವರ್ಷಗಳಿಂದ ಸರಿಯಾಗಿ ಮಳೆ ಇಲ್ಲದೇ ರೈತರು ಬರದಿಂದ ನಲುಗಿ ಹೋಗಿದ್ದಾರೆ. ನಮ್ಮ ನಾಲೆ ಭಾಗದಲ್ಲಿ ನೀರಿಲ್ಲದೇ ಜಮೀನಿನಲ್ಲಿ ಬೆಳೆ ಇಡಲಾಗುತ್ತಿಲ್ಲ ಎಂದು ಕಣ್ಣೀರು ಹಾಕುತ್ತಿದ್ದರೆ ಇತ್ತ ತಮಿಳುನಾಡಿಗೆ ಸರಾಗವಾಗಿ ಕಬಿನಿ ನೀರನ್ನು ಹರಿಸಲಾಗುತ್ತಿದೆ. ಅಧಿಕಾರಿಗಳ ರಾಜ್ಯದ ಮತ್ತು ಅಚ್ಚುಕಟ್ಟು ಪ್ರದೇಶದ ರೈತರ ಹಿತವನ್ನು ಕಡೆಗಣಿಸಿ ಜಲಾಶಯ ಭರ್ತಿಗೊಳ್ಳುವ ಮುನ್ನವೇ ತಮಿಳುನಾಡಿಗೆ ಹರಿಸಲಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ವಾರ ತಾಲೂಕು ಸೇರಿದಂತೆ ಕಬಿನಿ ಹಿನ್ನಿರು ಪ್ರದೇಶ ಹಾಗೂ ಕೇರಳದ ವೈನಾಡು ಪ್ರದೇಶದಲ್ಲಿ ಹೆಚ್ಚಿನ ಮಳೆ ಸುರಿದಿದ್ದರಿಂದ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿತ್ತು. ಈ ಹಿನ್ನೆಲೆಯಲ್ಲಿ ಜಲಾಶಯ ಇನ್ನೇನು ಕೆಲವೇ ದಿನಗಳಲ್ಲಿ ಭರ್ತಿಯಾಗಲಿದೆ ಎಂದು ರೈತರು ಹರ್ಷಗೊಂಡಿದ್ದರು. ಅದರೆ, ಶುಕ್ರವಾರ ಮಧ್ಯರಾತ್ರಿಯಿಂದಲೇ ಸಾವಿರಾರು ಕ್ಯೂಸೆಕ್ ನೀರನ್ನು ಜಲಾಶಯ ಸಮೀಪದಲ್ಲಿರುವ ಸುಭಾಷ್ ವಿದ್ಯುತ್ ಘಟಕದ ಮೂಲಕ ಮುಂಭಾಗದ ನದಿಗೆ ನೀರು ಬಿಡಲಾಗುತ್ತಿದ್ದು, ಜಲಾಶಯದಿಂದ ಹರಿದು ಹೊಗುತ್ತಿರುವ ನೀರು ತಮಿಳುನಾಡು ಸೇರುತ್ತಿದೆ.
ನಾಲೆಗಳ ಮೂಲಕ ಹರಿಸಬಹುದಿತ್ತು: ಜಲಾಶಯದಿಂದ ಹೊರ ಬಿಡಲಾಗುತ್ತಿರುವ ನೀರನ್ನು ಜಲಾಶಯದ ಎಡದಂಡೆ ಮತ್ತು ಬಲದಂಡೆ ನಾಲೆಗಳ ಮೂಲಕ ಹರಿಸಿದ್ದರೆ ರೈತರ ಹೊಲ ಗದ್ದೆಗಳಿಗೆ ನೀರು ಪೂರೈಸುವುದರ ಜೊತೆಗೆ ಕೆರೆ ಕಟ್ಟೆಗಳ ತುಂಬಿ ಅಲ್ಲಿಂದ ಹರಿದ ನೀರು ನದಿ ಸೇರುತ್ತಿತ್ತು. ಆ ನೀರು ಕೂಡ ತಮಿಳುನಾಡನ್ನೇ ಸೇರುತ್ತದೆ. ಆದರೆ, ಕಬಿನಿ ಜಲಾಶಯದ ಅಧಿಕಾರಿಗಳು ಈ ಕುರಿತು ಗಮನ ಹರಿಸಿಲ್ಲ. ಜೊತೆಗೆ ಉನ್ನತ ಮಟ್ಟದ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಇದನ್ನು ತಿಳಿಸುವಲ್ಲಿ ವಿಫಲವಾಗಿದ್ದಾರೆ.
ಮುಂದಿನ ದಿನಗಳಲ್ಲಿ ಜಲಾಶಯದ ಎಡೆದಂಡೆ ಮತ್ತು ಬಲದಂಡೆ ನಾಲೆಗಳ ಮೂಲಕ ನೀರು ಹರಿಸಿದರೆ ರೈತರ ಹಿತ ಕಾಪಾಡಿದಂತೆಯೂ ಆಗುತ್ತದೆ. ಕಾವೇರಿ ನ್ಯಾಯಾಧಿಕರಣದ ತೀರ್ಪನ್ನು ಗೌರವಿಸಿದ್ದಂತೆಯೂ ಅಗುತ್ತದೆ. ಈ ನಿಟ್ಟಿನಲ್ಲಿ ಜಲಾಶಯದ ಅಧಿಕಾರಿಗಳು ಜಾಣ್ಮೆಯ ಕೆಲಸಕ್ಕೆ ಮುಂದಾಗಬೇಕಾಗಿದೆ ಎಂಬುದು ಅಚ್ಚುಕಟ್ಟು ಪ್ರದೇಶದ ರೈತರ ಆಗ್ರಹವಾಗಿದೆ.
ಜನಪ್ರತಿನಿಧಿಗಳ ಮತ್ತು ಉನ್ನತ ಮಟ್ಟದ ಅಧಿಕಾರಿಗಳ ಸೂಚನೆ ಮೇರೆಗೆ ಜಲಾಶಯದಿಂದ ನೇರವಾಗಿ ನದಿಗೆ ನೀರು ಹೊರ ಬಿಡುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಜಲಾಶಯದ ನೀರನ್ನೇ ನಂಬಿ ಬೆಳೆ ಬೆಳೆಯುವ ಲಕ್ಷಾಂತರ ರೈತರ ಬೆಳೆಗಳಿಗೆ ಮುಂದಿನ ದಿನಗಳಲ್ಲಿ ನೀರಿನ ಅಭಾವ ಉಂಟಾಗಲಿದೆ. ಮುಂದೆ ಇದೇ ಸ್ಥಿತಿ ಮುಂದುವರಿದರೆ ಅಚ್ಚುಕಟ್ಟು ಪ್ರದೇಶದ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ.
ಈಗ ಮಳೆ ಪ್ರಮಾಣ ಕ್ಷೀಣಿಸುತ್ತಿರುವುದರಿಂದ ಜಲಾಶಯಕ್ಕೆ ಹರಿದು ಬರುತ್ತಿರುವ ಒಳ ಹರಿವಿನ ಪ್ರಮಾಣ ಕಡಿಮೆಯಾಗುತ್ತಿದೆ. ಜಲಾಶಯದಲ್ಲಿ ಈಗ 73 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಜಲಾಶಯ ಭರ್ತಿಗೊಳ್ಳುವ ಮೊದಲೇ ತಮಿಳುನಾಡಿಗೆ ಇದೇ ರೀತಿ ನೀರು ಹರಿಸಿದರೆ, ಮುಂದಿನ ದಿನಗಳಲ್ಲಿ ಅಚ್ಚುಕಟ್ಟು ಪ್ರದೇಶದ ರೈತರ ಜಮೀನುಗಳಿಗೆ ಬೆಳೆಗೆ ನೀರು ಹರಿಸಲು ಕಷ್ಟವಾಗಲಿದೆ.
ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ ನಾಲೆಗಳಿಗೆ ನೀರು ಬಿಡಲು ತೀರ್ಮಾನ ತೆಗೆದುಕೊಳ್ಳುವಷ್ಟರಲ್ಲೇ ತಮಿಳುನಾಡಿಗೆ ನೀರು ಬಿಟ್ಟಿರುವುದರಿಂದ ಮೊದಲೇ ಈ ಭಾಗದ ರೈತರು ಕಳೆದೆರಡು ವರ್ಷಗಳಿಂದ ಅವರಿಸಿದ್ದ ತೀವ್ರ ಬರದಿಂದ ಯಾವುದೇ ಬೆಳೆ ಬೆಳೆಯದೆ ಸಂಕಷ್ಟ ಸ್ಥಿತಿ ಎದುರಿಸುತ್ತಿದ್ದಾರೆ. ಈ ಬಾರಿಯೂ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಬೇಜವಾಬ್ದಾರಿ ಮುಂದುವರಿದು ತಮಿಳುನಾಡಿಗೆ ನೀರು ಬಿಟ್ಟಿರುವುದಕ್ಕೆ ರೈತರಲ್ಲಿ ಅಸಮಧಾನ ವ್ಯಕ್ತವಾಗಿದೆ.
ನೀರಿದ್ದಾಗ ನಾಲೆಗಳಿಗೆ ನೀರು ಬಿಟ್ಟು ನಮ್ಮ ರಾಜ್ಯದ ರೈತರ ಹಿತ ಕಾಪಾಡಲು ಎಲ್ಲಾ ಸರ್ಕಾರಗಳೂ ಮೀನಮೇಷ ಎಣಿಸುತ್ತಿವೆ. ತಮಿಳುನಾಡಿಗೆ ಕದ್ದು ಮುಚ್ಚಿ ನೀರು ಹರಿಸಲಾಗುತ್ತಿದೆ ಎಂದು ರೈತ ಮುಖಂಡ ಚೆಲುವರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
* ಬಿ.ನಿಂಗಣ್ಣಕೋಟೆ