ಚಾಮುಂಡಿ ಬೆಟ್ಟದ ನಂದಿಗೆ ಮಹಾಭಿಷೇಕ
Team Udayavani, Nov 22, 2021, 12:12 PM IST
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಮುಖ ಧಾರ್ಮಿಕ ತಾಣವಾಗಿರುವ ಚಾಮುಂಡಿ ಬೆಟ್ಟದಲ್ಲಿ ಭಾನುವಾರ ಕಾರ್ತೀಕ ಮಾಸದ ಪ್ರಯುಕ್ತ ಏಕಾಶಿಲಾ ನಂದಿ ವಿಗ್ರಹಕ್ಕೆ ಮಹಾಭಿಷೇಕ ನೆರವೇರಿಸಲಾಯಿತು.
ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್ ವತಿಯಿಂದ ಭಾನು ವಾರ ಮುಂಜಾನೆ ಆಯೋಜಿಸಿದ್ದ 16ನೇ ವರ್ಷದ ಮಹಾಭಿಷೇಕಕ್ಕೆ ಹೊಸಮಠದ ಅಧ್ಯಕ್ಷ ಚಿದಾ ನಂದ ಸ್ವಾಮೀಜಿ ಹಾಗೂ ಆದಿಚುಂಚನಗಿರಿ ಮಠದ ಮೈಸೂರು ಶಾಖೆಯ ಸೋಮನಾಥ ಸ್ವಾಮೀಜಿ ಚಾಲನೆ ನೀಡಿದರು.
ಮಜ್ಜನ: ಏಕ ಶಿಲೆಯಲ್ಲಿ ವಿಶಿಷ್ಟವಾಗಿ ಕೆತ್ತಲಾಗಿರುವ ನಂದಿ ಗೆ ವಿವಿಧ ದ್ರವ್ಯಗಳು ಸೇರಿದಂತೆ ಫಲಾಮೃತ, ಪುಷ್ಪ ಮತ್ತು ಪತ್ರೆ ಸೇರಿದಂತೆ 38 ವೈವಿಧ್ಯಮಯ ಪದಾರ್ಥಗಳಿಂದ ಮಜ್ಜನ ಮಾಡಿಸಲಾಯಿತು. ಹಾಲು, ಮೊಸರು, ತುಪ್ಪ, ಜೇನುತುಪ್ಪ, ಸಕ್ಕರೆ, ಬಾಳೆಹಳ್ಳಿ, ದ್ರಾಕ್ಷಿ, ಬೆಲ್ಲ, ಖರ್ಜೂರ, ಸೌತೆಕಾಯಿ, ಕಬ್ಬಿನ ರಸ, ಎಳನೀರು, ನಿಂಬೆ ಹಣ್ಣು, ತೈಲ, ಗೋಧಿಹಿಟ್ಟು, ಕಡಲೆ ಹಿಟ್ಟು, ಅರಿಶಿನ, ಕುಂಕುಮ, ಸಿಂಧೂರ, ರಕ್ತ ಚಂದನ, ಭಸ್ಮ, ಗಂಧ ಸೇರಿಂತೆ 38 ವಿಧವಾದ ಅಭಿಷೇಕ ಮಾಡಲಾಯಿತು.
ನಂತರ ರುದ್ರಾಭಿಷೇಕ, ಸುಗಂಧ ದ್ರವ್ಯದ ಅಭಿಷೇಕ ಮಾಡಲಾಯಿತು. ಬಳಿಕ ನಂದಿಯನ್ನು ಸ್ವತ್ಛಗೊಳಿಸಿ ಅಲಂಕಾರ ಮಾಡಿ ಅಷ್ಟ್ರೋತ್ತರ ಹಾಗೂ ಪೂಜೆ ನಡೆಸಿ ಮಹಾಮಂಗಳಾರತಿ ನಡೆಸಲಾಯಿತು.
ಭಕ್ತರಿಗೆ ಪ್ರಸಾದ: ಬೆಟ್ಟದ ಬಳಗ ಟ್ರಸ್ಟ್ ಸದಸ್ಯರು ಹಾಗೂ ಭಕ್ತಾರ ಸಮ್ಮುಖದಲ್ಲಿ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಮಹಾಭಿಷೇಕ ವೀಕ್ಷಣೆ ಬಂದಿದ್ದ ಭಕ್ತರಲ್ಲದೆ ಮೆಟ್ಟಿಲು ಹತ್ತಲು ಬಂದಿದ್ದವರು ಸಹ ಅಭಿಷೇಕದಿಂದ ಕಂಗೊಳಿಸುತ್ತಿದ್ದ ನಂದಿಯನ್ನು ಕಣ್ತುಂಬಿಕೊಂಡರು. ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಇದಕ್ಕೂ ಮುನ್ನ ಮಾತನಾಡಿದ ಸೋಮನಾಥ ನಂದ ಸ್ವಾಮೀಜಿ , ಬೆಟ್ಟದ ಬಳಗದ ಚಾರಿಟಬಲ್ ಟ್ರಸ್ಟ್ನವರು ಹಲವು ವರ್ಷಗಳಿಂದ ಬೆಟ್ಟದ ನಂದಿಗೆ ಮಹಾಭಿಷೇಕ ನೆರವೇರಿಸುತ್ತಾ ಬಂದಿದ್ದಾರೆ.
ಇದನ್ನೂ ಓದಿ:- ರ್ಯಾಲಿ ಆಯೋಜಕರ ತನಿಖೆಯಾಗಲಿ: ಫಡ್ನವೀಸ್
ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ಆಚರಿಸಲಾಗುತ್ತಿದೆ. ಕೋವಿಡ್ ಸಂಪೂ ರ್ಣವಾಗಿ ದೂರ ಆಗಿ, ನಾಡು ಸುಭಿಕ್ಷವಾಗಲಿ. ಮುಂದಿನ ವರ್ಷ ನಂದಿಯ ಮಹಾಭಿಷೇಕ ಮೊದಲಿ ನಂತೆ ವಿಜೃಂಭಣೆಯಿಂದ ಜರುಗಲಿ ಎಂದು ಆಶಿಸಿದರು.
ಇದು 16ನೇ ವರ್ಷದ ಸೇವೆ: ಬೆಟ್ಟದ ಬಳಗದ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಗೋವಿಂದ ಮಾತನಾಡಿ, ಬೆಟ್ಟಕ್ಕೆ ಮೆಟ್ಟಿಲು ಹತ್ತಲು ಬರುತ್ತಿದ್ದ ಗೆಳೆಯರೆಲ್ಲ ಸೇರಿ ಕೊಂಡು ಟ್ರಸ್ಟ್ ರಚಿಸಿಕೊಂಡು 2005ರಿಂದ ನಂದಿ ವಿಗ್ರ ಹಕ್ಕೆ ಮಹಾಭಿಷೇಕ ಮಾಡುವುದನ್ನು ಆರಂಭಿಸಿದೆವು. ಇದು 16ನೇ ವರ್ಷದ ಮಹಾಭಿಷೇಕ ಎಂದರು. ಪ್ರತಿ ವರ್ಷ ಅಟ್ಟಣೆ ನಿರ್ಮಿಸಿ ವಿಜೃಂಭಣೆಯಿಂದ ಅಭಿಷೇಕ ಮಾಡಲಾಗುತ್ತಿತ್ತು.
ಐದು ಸಾವಿರ ಲೀಟರ್ ಹಾಲು, ಮೊಸರು ಸೇರಿದಂತೆ ಮೊದಲಾದ ದ್ರವ್ಯಗಳನ್ನು ಅಭಿಷೇಕಕ್ಕೆ ಬಳಸುತ್ತಿದ್ದೇವೆ. ಈ ಬಾರಿ ಕಡಿಮೆ ಪ್ರಮಾಣದ ದ್ರವ್ಯವನ್ನು ಬಳಸಲಾಗುತ್ತಿದೆ ಎಂದು ತಿಳಿಸಿದರು. ಮಹಾರಾಜ ಕಾಲದಲ್ಲಿ ನಂದಿಗೆ ಮಹಾಭಿ ಷೇಕ ನೆರವೇರಿಸುತ್ತಿದ್ದು, ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿದ್ದೇವೆ ಎಂದರು. ಈ ವೇಳೆ ಟ್ರಸ್ಟ್ ಅಧ್ಯಕ್ಷ ಪ್ರಕಾಶನ್, ಖಜಾಂಚಿ ಸುರೇಶ್, ಟ್ರಸ್ಟಿ ವಿ.ಎನ್.ಸುಂದರ್, ಶಿವಕುಮಾರ್, ಶಂಕರ್, ಚಿನ್ನಪ್ಪ, ಬಸವರಾಜು, ಸುಬ್ಬಣ ಸೇರಿದಂತೆ ಇತರರು ಇದ್ದರು.