ತಂಬಾಕಿಗೆ ದರ ನೀಡದಿದ್ದರೆ ಹರಾಜು ನಿಲ್ಲಿಸಿ : ಶಾಸಕ ಮಂಜುನಾಥ್
Team Udayavani, Nov 6, 2022, 8:08 AM IST
ಹುಣಸೂರು: ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ತಂಬಾಕು ಹರಾಜಿನಲ್ಲಿ ದರ ಕುಸಿದಿದೆ ಎಂಬ ಮಾಹಿತಿ ಮೇರೆಗೆ ಭೇಟಿ ಇತ್ತು ಹರಾಜು ಪ್ರಕ್ರಿಯೆಯನ್ನು ವೀಕ್ಷಿಸಿದರು.
ಶನಿವಾರದಂದು ಕೆಲ ರೈತರು ಖರೀದಿದಾರರು ಮತ್ತೆ ಕಡಿಮೆ ದರಕ್ಕೆ ತಂಬಾಕನ್ನು ಬಿಡ್ ಮಾಡುತ್ತಿದ್ದಾರೆಂಬ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ದಿಢೀರ್ ಭೇಟಿ ನೀಡಿದರು.
ಶುಕ್ರವಾರ242, ಶನಿವಾರ 251:
ಖರೀದಿದಾದರು ಕೂಡಾ ಶುಕ್ರವಾರ 242ಕ್ಕೆ ಖರೀದಿಸಿದ್ದರು, ಶನಿವಾರವೂ ಬೆಲೆ ಏರಿಕೆ ಕಂಡಿರಲಿಲ್ಲ. ಹೀಗಾಗಿ ಶಾಸಕರಲ್ಲಿ ಮನವಿ ಮಾಡಿದ್ದ ಮೇರೆಗೆ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿದ ವಿಷಯ ತಿಳಿಯುತ್ತಿದ್ದಂತೆ 251 ರೂಗೆ ಖರೀದಿಸಿದರು, ಇದರಿಂದ ಒಂಬತ್ತು ರೂ. ನಷ್ಟು ಏರಿಕೆಯಾದಂತಾಯಿತು.
ಹರಾಜು ಅಧೀಕ್ಷಕರುಗಳು ಹಾಗೂ, ಮಾರುಕಟ್ಟೆಯಲ್ಲಿದ್ದ ರೈತರು ಕಂಪನಿಗಳವರೊಂದಿಗೆ ಚರ್ಚಿಸಿದ ನಂತರ ಮಾತನಾಡಿದ ಶಾಸಕರು ಪದೇಪದೇ ದರ ಕುಸಿತ ಕಂಡಲ್ಲಿ ರೈತರು ಸಂಕಷ್ಟಕ್ಕೊಳಗಾಗಲಿದ್ದಾರೆ. ಅಧಿಕಾರಿಗಳಿಗೆ ಹಲವಾರು ಬಾರಿ ಎಚ್ಚರಿಸಿದರೂ ರೈತರ ನೆರವಿಗೆ ಬರುತ್ತಿಲ್ಲ. ನಿಮ್ಮ ಹರಾಜು ಅಧೀಕ್ಷಕಿ ನಾಯ್ಡು ಈವರೆಗೂ ಮಾರುಕಟ್ಟೆಗೆ ಬಂದೇ ಇಲ್ಲ, ಬಾರೀ ಮಳೆಯಿಂದ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ.
ಹೀಗಾಗಿ ಕನಿಷ್ಟ ಪ್ರತಿ ಕೆ.ಜಿ.ಗೆ 250 ರೂಗೆ ಬಿಡ್ ಮಾಡಿ ರೈತರ ನೆರವಿಗೆ ನಿಲ್ಲಬೇಕೆಂದು ಕಂಪನಿಗಳವರಿಗೆ ಮನವಿ ಮಾಡಿ, ಮತ್ತೆ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದರೆ ತಾವು ಸಹ ರೈತರೊಂದಿಗೆ ಸೇರಿ ಮಾರುಕಟ್ಟೆಗೆ ಬೀಗ ಜಡಿಯುತ್ತೇನೆಂದು ಎಚ್ಚರಿಸಿದರು.
ರೈತರು ಸಹ ತಮ್ಮ ಮಾತಿಗೆ ಮನ್ನಣೆ ನೀಡಿ ಮಾರುಕಟ್ಟೆಗಾಗಮಿಸಿ ಸಮಸ್ಯೆ ಆಲಿಸಿ ಉತ್ತಮ ಬೆಲೆ ಕೊಡಿಸಿದ್ದಕ್ಕಾಗಿ ಶಾಸಕರಿಗೆ ಧನ್ಯವಾದ ತಿಳಿಸಿದರು.
ಈ ವೇಳೆ ಹರಾಜು ಅಧೀಕ್ಷಕರಾದ ಡಾಂಗೆ, ಧನರಾಜ್ ಹಾಗೂ ತಂಬಾಕು ಗುತ್ತಿಗೆದಾರರಾದ ಶೃಂಗಾರ್, ಸೋಮು, ಮಹೇಶ್, ಮಹದೇವ್, ರೈತ ಮುಖಂಡರಾದ ಅಶೋಕ್, ಮಹದೇವ್ ವೆಂಕಟರಮಣ, ಬಸವರಾಜ್, ಅರುಣ್ಕುಮಾರ್, ಸಂಜೀವ, ಮಧು, ಪ್ರೆಮಪ್ರಸಾದ್, ವಿನಯ್ ಮತ್ತಿತರರು ಇದ್ದರು.