ಮುಸ್ಲಿಮರು ಹಂದಿ ತಿನ್ನದಿರುವುದನ್ನು ತಪ್ಪು ಎನ್ನುತ್ತೀರಾ?ಹಂಸಲೇಖಗೆ ಪ್ರತಾಪ್ ಸಿಂಹ ಪ್ರಶ್ನೆ
Team Udayavani, Nov 15, 2021, 1:00 PM IST
ಮೈಸೂರು: ನಿಮ್ಮ ಮನೆಗೆ ಮುಸ್ಲಿಂ ಸ್ನೇಹಿತರನ್ನು ಕರೆದು ಅವರಿಗೆ ಹಂದಿ ಮಾಂಸದ ಊಟ ಹಾಕಿ, ಅವರು ತಿನ್ನುತ್ತಾರಾ ನೋಡಿ. ಮುಸ್ಲಿಂ ಧರ್ಮದಲ್ಲಿ ಹಂದಿ ಮಾಂಸ ತಿನ್ನುವುದು ನಿಷೇಧ, ಅದಕ್ಕೆ ಅವರು ತಿನ್ನುವುದಿಲ್ಲ. ಆಗ ಅದನ್ನು ತಪ್ಪು ಎನ್ನುತ್ತೀರಾ ಎಂದು ಸಂಗೀತ ನಿರ್ದೇಶಕ ಹಂಸಲೇಖ ವಿರುದ್ಧ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾಭಿಪ್ರಾಯದ ವಿರುದ್ದ ಮಾತಾನಾಡಿದ ನಂತರ ಕ್ಷಮೆಯಾಚಿಸುವ ಛಾಳಿ ಹೆಚ್ಚಾಗಿದೆ. ಹಂಸಲೇಖರು ಪರಿಜ್ಞಾನದಿಂದ ಮಾತಾಡಬೇಕಿತ್ತು. ಪೇಜಾವರ ಶ್ರೀಗಳು ಬೇರೆ ರೀತಿಯ ಜಾತಿ ಸ್ವಾಮೀಜಿ ರೀತಿ ಅಲ್ಲ. ಕರ್ಮಠ ವ್ಯವಸ್ಥೆಯನ್ನು ಮೀರಿ ಸಮಾನತೆ ಸಾರಿದವರು ಪೇಜಾವರ ಶ್ರೀಗಳು. ಸಾಧು ಸಂತರ ಆಹಾರ ಪದ್ಧತಿ ಸಸ್ಯಹಾರ. ಮನಸ್ಸಿನ ತಾರತಮ್ಯ ತೆಗೆದು ಹಾಕಲು ಶ್ರೀಗಳು ಹೋಗಿದ್ದರೆ ಹೊರತು ಆಹಾರ ಪದ್ಧತಿಯ ಸಮಾನತೆಗೆ ಅಲ್ಲ ಎಂದು ಹೇಳಿದರು.
ಇದನ್ನೂ ಓದಿ:ಶ್ರೀಕೃಷ್ಣನೇ ನೋಡಿಕೊಳ್ಳುತ್ತಾನೆ: ಹಂಸಲೇಖ ಟೀಕೆಗೆ ವಿಶ್ವಪ್ರಸನ್ನ ತೀರ್ಥರ ಪ್ರತಿಕ್ರಿಯೆ
ಪ್ರಗತಿಪರ ಅನ್ನಿಸಿಕೊಳ್ಳುವ ಗೀಳಿಗೆ ಬಿದ್ದು, ಪ್ರಚಾರಕ್ಕಾಗಿ ಹೀಗೆ ಮಾತಾಡುತ್ತಿದ್ದಾರೆ. ಹಂಸಲೇಖಾರವರು ಬಾಯಿ ತಪ್ಪಿನಿಂದ ಈ ರೀತಿ ಹೇಳಿದ್ದಾರೆ ಎಂದು ಅನ್ನಿಸುವುದಿಲ್ಲ. ಪ್ರಚಾರದ ಗೀಳಿಗೆ ಬಿದ್ದಾಗ ಅಸಂಬದ್ಧ ಮಾತು ಬರುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.