ಪಾಂಡವಪುರ ಜನತೆಗೆ 7 ವರ್ಷದ ಬಳಿಕ ಮತ್ತೂಮ್ಮೆ ಜಲಕಂಟಕ
Team Udayavani, Nov 25, 2018, 6:30 AM IST
ಮೈಸೂರು: ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಜನತೆಗೆ ಏಳು ವರ್ಷಗಳ ಬಳಿಕ ಮತ್ತೂಮ್ಮೆ ಜಲಕಂಟಕ ಕಾಡಿದೆ.
2010ರ ಡಿಸೆಂಬರ್ 14ರಂದು ಮೈಸೂರು ಹೊರವಲಯದ ಉಂಡಬತ್ತಿ ಕೆರೆಯಲ್ಲಿ ಟೆಂಪೋ ಮುಳುಗಿ, 31 ಮಂದಿ ಅಸುನೀಗಿದ್ದರು. ಪಾಂಡವಪುರ ತಾಲೂಕು ಅರಳಕುಪ್ಪೆ ಗ್ರಾಮದ ಶಂಕರೇಗೌಡರ ಪುತ್ರಿಯ ಮದುವೆ ವೇಳೆ, ಬೀಗರ ಊಟ ಮುಗಿಸಿ ಕುಟುಂಬದವರು ಹಾಗೂ ನೆಂಟರು ತಮ್ಮ ಗ್ರಾಮಕ್ಕೆ ಹಿಂತಿರುಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ, ತಡೆಗೋಡೆ ಇಲ್ಲದ ಮೈಸೂರು-ನಂಜನಗೂಡು ಹೆದ್ದಾರಿ ಬದಿಯ ಉಂಡಬತ್ತಿ ಕೆರೆಗೆ ಉರುಳಿತ್ತು.
ಅಂದಿನ ದುರಂತದಲ್ಲಿ ಮೃತಪಟ್ಟ 31 ಮಂದಿಯನ್ನು ಸಾಮೂಹಿಕವಾಗಿ ಅಂತ್ಯಸಂಸ್ಕಾರ ಮಾಡಲಾಗಿತ್ತು. ವಿ.ಸಿ.ನಾಲೆ ಏರಿಯ ಮೇಲೆ ಮೃತರ ಸ್ಮರಣಾರ್ಥ ಸ್ಮಾರಕ ಮತ್ತು ಉದ್ಯಾನ ನಿರ್ಮಿಸಲು ತೀರ್ಮಾನಿಸಿ, ಜಾಗಕ್ಕೆ ತಂತಿ ಬೇಲಿ ಹಾಕಲಾಗಿತ್ತು. ಇಂದಿಗೂ ಸ್ಮಾರಕ, ಉದ್ಯಾನವನ ನಿರ್ಮಾಣ ಕಾರ್ಯ ಆಗಿಲ್ಲ. ಆದರೆ, ಉಂಡಬತ್ತಿ ಕೆರೆಗೆ ತಡೆಗೋಡೆ ಇಲ್ಲದಿರುವುದೇ ದುರಂತಕ್ಕೆ ಕಾರಣ ಎಂಬ ಕೂಗು ಕೇಳಿ ಬಂದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ತಡೆಗೋಡೆ ನಿರ್ಮಿಸಲಾಗಿತ್ತು.ಇತ್ತೀಚೆಗೆ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಿದ ಸಂದರ್ಭದಲ್ಲಿ ಉಂಡಬತ್ತಿ ಕೆರೆಗೆ ಕಬ್ಬಿಣದ ತಡೆಗೋಡೆ ನಿರ್ಮಿಸಲಾಗಿದೆ.