ಆಧಾರ್ ಸಮಸ್ಯೆ ಬಗೆಹರಿಸಲು ಅಂಚೆ ಚಳವಳಿ
Team Udayavani, Aug 4, 2019, 3:00 AM IST
ಮೈಸೂರು: ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಅವ್ಯವಸ್ಥೆ ಸರಿಪಡಿಸುವ ಮೂಲಕ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ನಿವಾರಿಸಬೇಕು ಎಂದು ಒತ್ತಾಯಿಸಿ ಮೈಸೂರು ಕನ್ನಡ ವೇದಿಕೆ ವತಿಯಿಂದ ಅಂಚೆ ಚಳವಳಿ ನಡೆಸಲಾಯಿತು. ಶನಿವಾರ ಮಹಾನಗರ ಪಾಲಿಕೆಯ ಮುಂಭಾಗ ಇರುವ ಅಂಚೆಪೆಟ್ಟಿಗೆಗೆ ಪ್ರಧಾನಿ ನರೇಂದ್ರ ಮೋದಿಗೆ ಬರೆದಿರುವ ಪತ್ರ ಹಾಕುವ ಮೂಲಕ ಆಧಾರ್ ಸಮಸ್ಯೆ ಬಗೆಹರಿಸಲು ಆಗ್ರಹಿಸಿದರು.
ಮೈಸೂರು ಒನ್ ಹಾಗೂ ಅಧಿಕೃತ ಕೇಂದ್ರಗಳಲ್ಲಿ ಆಧಾರ್ ನೋಂದಣಿ ಹಾಗೂ ತಿದ್ದುಪಡಿಯ ಅವ್ಯವಸ್ಥೆಯಿಂದ ಸಾರ್ವಜನಿಕರು, ವೃದ್ಧರು, ವಿದ್ಯಾರ್ಥಿಗRಳು, ಮಹಿಳೆಯರು ಪರದಾಡುವಂತಾಗಿದೆ. ಆಧಾರ್ ನೋಂದಣಿ ಮಾಡುವ ಕೇಂದ್ರಗಳಲ್ಲಿ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಜನ ಸಾಮಾನ್ಯರು ಪ್ರತಿದಿನ ಹಿಂಸೆ ಅನುಭವಿಸಬೇಕಾಗಿದೆ ಎಂದು ಕಿಡಿಕಾರಿದರು.
ಕಚೇರಿಗಳಲ್ಲಿ ಸಿಬ್ಬಂದಿಯ ದುರಂಹಕಾರ, ಮೂರ್ಖತನದ ಪರಮಾಧಿ ಮಿತಿ ಮೀರಿದೆ. ಅರ್ಜಿ ವಿತರಣೆ ಮಾಡಲು ಹಾಗೂ ನೋಂದಣಿ ಮಾಡಲು ಒಬ್ಬರನ್ನೇ ನೇಮಿಸಿರುವುದು ಸರಿಯಲ್ಲ, ಅಧಿಕಾರಿಗಳ ಉದಾಸೀನತೆಯಿಂದ ಜನಸಾಮಾನ್ಯರು ತಮ್ಮ ಅಮೂಲ್ಯ ಸಮಯವನ್ನು ಆಧಾರ್ ನೋಂದಣಿಗೆ ಮೀಸಲಿಡುವಂತಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚಿನ ಕೇಂದ್ರಗಳನ್ನು ನಗರಪಾಲಿಕೆಯಲ್ಲಿ ತೆರೆಯುವ ಮೂಲಕ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕು. ಆಧಾರ್ ಕೇಂದ್ರಗಳು ಸುಲಿಗೆ ಕೇಂದ್ರಗಳಾಗಿದ್ದು ನಿಯಂತ್ರಿಸುವ ಅಧಿಕಾರಿಗಳು ಮೂಕಪ್ರೇಕ್ಷಕರಾಗಿದ್ದಾರೆ. ಹೀಗಾಗಿ ಪ್ರಧಾನಮಂತ್ರಿಗಳು ಆಧಾರ್ ಹೆಸರಿನಲ್ಲಿ ನಡೆಯುವ ಹಗಲು ದರೋಡೆಯನ್ನು ತಡೆಯಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ನಾಲಾಬೀದಿ ರವಿ, ಭೋಗಾದಿ ಸಿದ್ದೇಗೌಡ, ಪ್ಯಾಲೇಸ್ ಬಾಬು, ಗುರುಬಸಪ್ಪ, ಗೋಪಿ, ಬೀಡಾಬಾಬು, ಪಾಪಣ್ಣಿ, ಮಹದೇವಸ್ವಾಮಿ, ಅರವಿಂದ, ಸೀಮೆಎಣ್ಣೆ ಮಾದಪ್ಪ, ಬಸವಣ್ಣ, ಸುನೀಲ್, ಕಾವೇರಿಯಮ್ಮ, ಸ್ವಾಮಿಗೈಡ್, ಶ್ರೀನಿವಾಸ ಸೇರಿದಂತೆ ಹಲವರು ಭಾಗವಹಿಸಿದ್ದರು.