ನನ್ನದು ಈಗ ಸೈಲೆಂಟ್ ಪಾಲಿಟಿಕ್ಸ್ : ಜಿ.ಟಿ.ದೇವೇಗೌಡ
Team Udayavani, Jan 7, 2020, 7:04 PM IST
ಮೈಸೂರು: ಅಬ್ಬರಿಸಿ ಬೊಬ್ಬಿರಿದರಷ್ಟೆ ರಾಜಕಾರಣ ಅಲ್ಲ. ನನ್ನದು ಈಗ ಸೈಲೆಂಟ್ ಪಾಲಿಟಿಕ್ಸ್ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನೀಗ ಮಾತನಾಡದೆಯೇ ರಾಜಕಾರಣ ಮಾಡುತ್ತೇನೆ ಎಂದರು. ಮೈಸೂರು ಮಹಾನಗರಪಾಲಿಕೆ ಮೇಯರ್-ಉಪ ಮೇಯರ್ ಚುನಾವಣೆ ಕುರಿತು ಪ್ರತಿಕ್ರಿಯಿಸಿ, ಎಚ್.ಡಿ.ಕುಮಾರಸ್ವಾಮಿ ಎಲ್ಲವನ್ನೂ ಸಾ.ರಾ.ಮಹೇಶ್ಗೆ ಬಿಟ್ಟುಕೊಟ್ಟಿದ್ದಾರೆ. ಪಕ್ಷದ ಸಭೆ ನಡೆದಾಗ ಸಹ ಯಾರೂ ನನ್ನನ್ನು ಸಭೆಗೆ ಕರೆಯಲಿಲ್ಲ. ಮಹೇಶ್ ಯಾರಿಗೆ ಹೇಳುತ್ತಾರೋ ಅವರು ಮೇಯರ್ ಆಗುತ್ತಾರೆ.
ಮೈತ್ರಿ ಕುರಿತಾಗಿನ ತೀರ್ಮಾನವೂ ಅವರದೆ. ನನ್ನದೇನಿದ್ದರೂ ಜೆಡಿಎಸ್ನ ಮೇಯರ್ ಅಭ್ಯರ್ಥಿಗೆ ಮತ ಹಾಕಿ ಬರುವುದಷ್ಟೇ ಕೆಲಸ. ಸಮ್ಮಿಶ್ರ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಲೇ ನನ್ನ ಮಾತು ನಡೆಯಲಿಲ್ಲ. ಈಗ ನಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು.