ಪರಿಸರ ಸಂರಕ್ಷಣೆಗೆ ವಿದ್ಯಾರ್ಥಿಗಳು ಕೈಜೋಡಿಸಿ: ಜಗದೀಶ್
Team Udayavani, Jul 19, 2017, 11:42 AM IST
ಮೈಸೂರು: ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಮನೆಯ ಮುಂದೆ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕು ಎಂದು ಮಹಾ ನಗರಪಾಲಿಕೆ ಆಯುಕ್ತ ಜಿ.ಜಗದೀಶ್ ಸಲಹೆ ನೀಡಿದರು. ನಗರದ ಶ್ರೀ ಜಯ ಚಾಮರಾಜ ಅರಸು ಎಜುಕೇಷನ್ ಟ್ರಸ್ಟ್ ವತಿಯಿಂದ ಮಂಗಳವಾರ ಜಯ ಚಾಮರಾಜೇಂದ್ರ ಅರಸು ಬೋರ್ಡಿಂಗ್ ಶಾಲೆಯಲ್ಲಿ ಆಯೋಜಿಸಿದ್ದ ಜಯಚಾಮರಾಜ ಒಡೆಯರ್ರ 98ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೈಸೂರು ಸಂಸ್ಥಾನದಲ್ಲಿ ಆಳ್ವಿಕೆ ನಡೆಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ನವರಾಜ್ಯ ನಿರ್ಮಾಣದ ಕನಸನ್ನು ಜಯಚಾಮರಾಜ ಒಡೆಯರ್ ಮುಂದುವರೆಸಿದರು, ಹೀಗಾಗಿ ಮೈಸೂರು ಅರಸರು ಅಂದು ರೂಪಿಸಿದ ಯೋಜನೆಗಳು ಇಂದು ಫಲ ನೀಡುತ್ತಿದ್ದು, ಇದರ ಪರಿಣಾಮ ಮೈಸೂರಿಗೆ ಸ್ವತ್ಛನಗರ ಎಂಬ ಹೆಗ್ಗಳಿಕೆ ದೊರೆತಿದೆ ಎಂದರು.
ಆದರೆ ಬೆಂಗಳೂರು ನಗರಕ್ಕೆ ಹೋಲಿಸಿದರೆ ಮೈಸೂರಿನಲ್ಲಿ ರಸ್ತೆಗಳ ಇಕ್ಕೆಲಗಳಲ್ಲಿ ಮರಗಳ ಸಂಖ್ಯೆ ಕಡಿಮೆ ಇದೆ. ಈ ಕಾರಣದಿಂದಲೇ ತಾವು ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿ ನಗರದ ಉದ್ಯಾನಗಳು ಹಾಗೂ ರಸ್ತೆಗಳ ಪಕ್ಕದಲ್ಲಿ ಸಸಿಗಳನ್ನು ನೆಡುವ ಕೆಲಸ ಮಾಡುತ್ತಿದ್ದು, ಹೀಗಾಗಿ ವಿದ್ಯಾರ್ಥಿಗಳು ಸಹ ತಮ್ಮ ಮನೆಯ ಮುಂದೆ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಹೇಳಿದರು.
ರಾಜವಂಶಸ್ಥೆ ಡಾ.ಪ್ರಮೋದಾದೇವಿ ಒಡೆಯರ್ ಮಾತನಾಡಿ, ಈ ಹಿಂದೆ ರಾಜರು ಮರಗಳನ್ನು ಉಳಿಸಿ-ಬೆಳೆಸಲು ಹಲಮ ವಿಧಾನಗಳನ್ನು ಅನುಸರಿಸುವ ಜತೆಗೆ ರಸ್ತೆ ಪಕ್ಕದಲ್ಲಿ ಗಿಡಗಳನ್ನು ನೆಡಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಜಾಗತಿಕ ತಾಪಮಾನ ಕಡಿಮೆ ಮಾಡುವ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ಅತೀ ಮುಖ್ಯವಾಗಿದ್ದು, ಈ ಹಿನ್ನೆಲೆ ಪಾಲಿಕೆ ವತಿಯಿಂದ ಮಕ್ಕಳಿಗೆ ಸಸಿಗಳನ್ನು ನೀಡುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಿದೆ ಎಂದರು.
ವರ್ಚಸ್ವಿ ಸಿದ್ದಲಿಂಗರಾಜೇ ಅರಸ್ ಮಾತನಾಡಿ, ಜಯಚಾಮರಾಜ ಒಡೆಯರ್ ಜನಾನುರಾಗಿ, ಉತ್ತಮ ರಾಜಕಾರಣಿ, ಉತ್ತಮ ಚಿಂತಕ ಹಾಗೂ ಉತ್ತಮ ಸಂಗೀತಗಾರರಾಗಿದ್ದರು. ಗಿಡ-ಮರಗಳ ಸಂರಕ್ಷಣೆ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದ ಅವರು, ಆ ಮೂಲಕ ಪರಿಸರ ಸಂರಕ್ಷಣೆಯ ಉದ್ದೇಶದಿಂದ ಹೆಚ್ಚು ಗಿಡಗಳನ್ನು ನೆಡಲು ಆಸಕ್ತಿ ತೋರುತ್ತಿದ್ದರು ಎಂದು ಹೇಳಿದರು.
ಅಳಿವಿನಂಚಿನಲ್ಲಿರುವ ಪುಷ್ಪ ವೃಕ್ಷಗಳೆಡೆಗೆ ನಮ್ಮ ನಡಿಗೆ ಎಂಬ ಘೋಷಣೆಯೊಂದಿಗೆ ಮೈಸೂರು ಮಹಾ ನಗರಪಾಲಿಕೆಗೆ ಅಪರೂಪದ ಪುಷ್ಪ$ ವೃಕ್ಷಗಳಾದ ಜಕರಾಂಡ, ಕ್ಯಾಸಿಯಾ ಫಿಸ್ಟುಲಾ, ಕ್ಯಾಸಿಯಾ ವೈಟ್, ಕ್ಯಾಸಿಯಾ ನಡೋಸಾ ಸಸಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಶಾಲಾ ಆವರಣದಲ್ಲಿ ಸಸಿಯೊಂದನ್ನು ನೆಟ್ಟು ನೀರೆರೆದರು. ಮೇಯರ್ ಎಂ.ಜೆ. ರವಿಕುಮಾರ್, ಪಾಲಿಕೆ ಸದಸ್ಯ ಎಚ್.ಎನ್.ಶ್ರೀಕಂಠಯ್ಯ, ಟ್ರಸ್ಟಿ ಭಾರತಿ ಶ್ರೀಧರ್ರಾಜೇ ಅರಸ್, ಮಹೇಶ್ ಎನ್.ಅರಸ್ ಇತರರು ಇದ್ದರು.