ಡಾ.ಅಂಬೇಡ್ಕರ್ಗೆ ಅಗೌರವ ತೋರಿದ ಮುಖ್ಯ ಶಿಕ್ಷಕ ಅಮಾನತು
Team Udayavani, Aug 22, 2022, 3:05 PM IST
ಎಚ್.ಡಿ.ಕೋಟೆ: ಸ್ವಾತಂತ್ರ್ಯ ದಿನಾಚರಣೆ ಸರ್ಕಾರಿ ಶಾಲಾ ಸಮಾಂಭದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಫೋಟೋ ಇರಿಸದೇ ಗ್ರಾಮಸ್ಥರೊಡನೆ ಮಾತಿನ ವಾಗ್ಧಾಳಿ ನಡೆಸಿ ದಿನಾಚರಣೆ ನೆರ ವೇರಿಸಿದ ರಾಜೇಗೌಡನಹುಂಡಿ ಸರ್ಕಾರಿ ಶಾಲೆ ಮುಖ್ಯಶಿಕ್ಷಕ ಯತೀಶ್ ಅಮಾನತು ಗೊಳಿಸಿ ಶಿಕ್ಷಣ ಇಲಾಖೆ ಜಿಲ್ಲಾ ಉಪ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಆ.15ರಂದು ರಾಜೇಗೌಡನಹುಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗಿತ್ತು. ದಿನಾಚರಣೆ ಸಮಾರಂಭದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಫೋಟೋ ಕಡ್ಡಾಯವಾಗಿ ಇರಬೇಕೆಂಬ ನ್ಯಾಯಾಲಯದ ಆದೇಶ ಇದ್ದರೂ ಶಾಲೆಯ ಮುಖ್ಯಶಿಕ್ಷಕ ಮತ್ತು ಶಾಲೆ ಆಡಳಿತ ಮಂಡಳಿ ನಿಯಮ ಪಾಲಿಸಿದೆ ಮಹಾತ್ಮ ಗಾಂಧೀಜಿಯವರ ಫೋಟೋ ಮಾತ್ರ ಇರಿಸಿ ಕಾರ್ಯಕ್ರಮ ನೆರವೇರಿಸಿದ್ದರು. ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಫೋಟೋ ಇರಿಸಬೇಕಾದ್ದದ್ದು ಕಡ್ಡಾಯ ಎಂದು ಪಟ್ಟಣದ ಪ್ರಜ್ಞಾವಂತ ಯುವಕರು ಪ್ರಶ್ನಿಸಿದಾಗ ಮುಖ್ಯಶಿಕ್ಷಕ ಮತ್ತು ಶಾಲೆ ಆಡಳಿತ ಮಂಡಳಿ ಅಂಬೇಡ್ಕರ್ ಏನು ಸ್ವಾತಂತ್ರ್ಯ ಹೋರಾಟಗಾರರಲ್ಲ. ಸಂವಿಧಾನ ಬರೆದವರು ಎಂದು ಉಡಾಫೆ ಉತ್ತರ ನೀಡಿದ್ದರೆಂದು ಗ್ರಾಮಸ್ಥರು ಆರೋಪಿ ತಹಶೀಲ್ದಾರ್ ಸೇರಿದಂತೆ ಶಿಕ್ಷಣ ಇಲಾಖೆಗೆ ದೂರು ನೀಡಿದ್ದರು.
ದೂರಿನ ಮೇರೆಗೆ ತನಿಖೆ ನಡೆಸಿದ ಶಿಕ್ಷಣ ಇಲಾಖೆಗೆ ಸಾರ್ವಜನಿಕರ ದೂರು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಜಿಲ್ಲಾ ಉಪನಿರ್ದೇಶಕರಿಗೆ ವರದಿ ನೀಡಿದ್ದರು. ವರದಿಯನ್ನಾಧರಿಸಿ ಉಪ ನಿರ್ದೇಶಕರು ಯತೀಶ್ ಅವ ರನ್ನು ಅಮಾನತುಗೊಳಿಸಿ ಅದೇಶಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ ಬಳಿಕ ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಅಶಾಂತಿ ನೆಲೆಸಿದೆ. ಘಟನೆಯ ಬಳಿಕ ಅಧಿಕಾರಿಗಳ ತಂಡ ತನಿಖೆಗೆ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿಚಾರ ಇಲ್ಲಿಗೆ ಬಿಟ್ಟು ಗ್ರಾಮದ ಶಾಂತಿ ಸುವ್ಯವಸ್ಥೆಗೆ ಗ್ರಾಮಸ್ಥರು ಮನವಿ ಮಾಡಿ ಕೊಂಡಿದ್ದರು. ಆದರೂ ನಿಯಮಾನುಸಾರ ಕ್ರಮ ಕೈಗೊಂಡು ಮುಖ್ಯಶಿಕ್ಷಕರನ್ನು ಅಮಾನತು ಗೊಳಿಸಿದ್ದರಿಂದ ಕುಪಿತರಾದ ಗ್ರಾಮದ ಹಲವು ಮಂದಿ ಮುಖ್ಯಶಿಕ್ಷಕರನ್ನು ಶಾಲೆಯಲ್ಲಿ ಮುಂದುವರಿಸದಿದ್ದರೆ ನಮ್ಮ ಮಕ್ಕಳನ್ನು ಶಾಲೆಗೆ ಕಳಿಸೋಲ್ಲ ಎಂದು ಪಟ್ಟು ಹಿಡಿದು ಕಳೆದ 3-4 ದಿನಗಳ ಹಿಂದಿನಿಂದ ಮಕ್ಕಳನ್ನು ಮನೆಯಲ್ಲಿಯೇ ಇರಿಸಿಕೊಂಡಿದ್ದಾರೆ