ಅವೈಜ್ಞಾನಿಕ ರಸ್ತೆ-ಚರಂಡಿ ಕಾಮಗಾರಿ
Team Udayavani, Nov 8, 2017, 12:16 PM IST
ಪಿರಿಯಾಪಟ್ಟಣ: ಕೆಆರ್ಡಿಸಿಎಲ್ನಿಂದ ನಿರ್ಮಿಸುತ್ತಿರುವ ಪಿರಿಯಾಪಟ್ಟಣ-ಹಾಸನ ರಾಜ್ಯ ರಸ್ತೆ ಮತ್ತು ಚರಂಡಿ ಕಾಮಗಾರಿ ಎಂಜಿನಿಯರ್ಗಳ ಬೇಜವಾಬ್ದಾರಿತನದಿಂದ ವ್ಯವಸ್ಥಿತವಾಗಿ ನಿರ್ಮಾಣವಾಗಿಲ್ಲ ಎಂದು ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಸುರಗಳ್ಳಿ ವಿದ್ಯಾಶಂಕರ್ ಆರೋಪಿಸಿದರು.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನ ಸುರಗಳ್ಳಿ ಗ್ರಾಮದಲ್ಲಿ ರಾಜ್ಯ ರಸ್ತೆ ಹಾದು ಹೋಗಿದೆ. ರಾಜ್ಯ ಹೆದ್ದಾರಿಯಲ್ಲಿ ಒಂದು ಸೇತುವೆ ನಿರ್ಮಿಸಿ ಚರಂಡಿ ನಿರ್ಮಿಸದೆ, ಎರಡು ಕಡೆ ನೀರು ಸರಾಗವಾಗಿ ಹರಿಯದೆ ಸಂಗ್ರಹವಾಗುತ್ತಿದೆ. ಹೆಚ್ಚು ನೀರು ವಾಸದ ಮನೆಗಳಿಗೆ ನುಗ್ಗುತ್ತಿದೆ, ಇದರಿಂದ ಸೋಳ್ಳೆಗಳು ಉತ್ಪತ್ತಿಯಾಗುತ್ತಿವೆ ಎಂದು ದೂರಿದ್ದಾರೆ.
ಗ್ರಾಮದೊಳಗೆ ಹಾದು ಹೋಗುವ ರಸ್ತೆಗೆ ಚರಂಡಿ ಮತ್ತು ಕಿರು ಸೇತುವೆ ನಿರ್ಮಿಸದೆ ಹಾಗೆ ಬಿಟ್ಟಿದ್ದು, ನೀರು ಹರಿಯಲು ಜಾಗವಿಲ್ಲದೆ ನಿಂತು ಬಹಳ ತೊಂದರೆಯಾಗಿದೆ. ಕಿರು ಸೇತುವೆ ಮತ್ತು ಚರಂಡಿ ನಿರ್ಮಿಸದಿದ್ದರೆ ಗ್ರಾಮದೊಳಗೆ ಒಂದು ವಾಹನ, ಅಥವಾ ಲಾರಿಗಳು ಹೋಗಲು ಸಾಧ್ಯವಿಲ್ಲ.
ಇಲ್ಲಿ ತಂಬಾಕು ಬೆಳೆಗಾರರು ಹೆಚ್ಚಿರುವುದರಿಂದ ಸೌದೆ ಲಾರಿಗಳು, ರೈತ ಬೆಳೆದ ಜೋಳ ತುಂಬಲು ದಿನಕ್ಕೆ ಹತ್ತಾರು ಲಾರಿಗಳು ಬರುವುದರಿಂದ ಈ ಸೇತುವೆಯನ್ನು ನಿರ್ಮಿಸಲೇಬೇಕು ಎಂದು ಜನಪ್ರತಿನಿಧಿಗಳಿಗೆ ಹಾಗೂ ಕೆಆರ್ಡಿಸಿಎಲ್ ಎಂಜಿನಿಯರ್ಗಳಿಗೆ ಆಗ್ರಹಿಸಿದ್ದಾರೆ. ಶಿವೇಗೌಡ, ಶಿವನಂಜೇಗೌಡ, ಕುಮಾರ, ಚಂದ್ರೇಗೌಡ, ಲವ ಮತ್ತಿತರರು ಹಾಜರಿದ್ದರು.