ವೈರಸ್ನಿಂದ ತಾಲೂಕು ಆಸ್ಪತ್ರೆಗೆ ವೆಂಟಿಲೇಟರ್, ಆಕ್ಸಿಜನ್ ಭಾಗ್ಯ
ಸರ್ಕಾರಿ ಆಸ್ಪತ್ರೆಗಳಿಗೆ ವರದಾನವಾದ ಕೋವಿಡ್, ತಾಲೂಕು ಆಸ್ಪತ್ರೆಗಳಿಗೆ 3 ವೆಂಟಿಲೇಟರ್, 50 ಆಕ್ಸಿಜನ್ ಹಾಸಿಗೆ ಸೌಲಭ್ಯ
Team Udayavani, Oct 24, 2020, 2:51 PM IST
ಮೈಸೂರು: ಜಿಲ್ಲೆಯ ಗ್ರಾಮೀಣ ಪ್ರದೇಶದ ಜನತೆಗೆ ಕೋವಿಡ್ ವರದಾನವಾಗಿದ್ದು, ಇನ್ನು ಮುಂದೆ ತುರ್ತು ಸಂದರ್ಭದಲ್ಲಿ ತಾಲೂಕು ಆಸ್ಪತ್ರೆಗಳಲ್ಲಿಯೇ ವೆಂಟಿಲೇಟರ್, ಆಕ್ಸಿಜನ್ ಹಾಸಿಗೆಗಳು ಲಭ್ಯವಾಗಲಿವೆ.
ತಾಲೂಕು ಆಸ್ಪತ್ರೆಗಳು ನಿರ್ಮಾಣವಾಗಿ ಹಲವಾರು ವರ್ಷಗಳಾದರೂ ವೆಂಟಿಲೇಟರ್ ಮತ್ತು ಆಕ್ಸಿಜನ್ ಹಾಸಿಗೆಗಳಿಲ್ಲದೆ ನಲುಗಿದ್ದವು. ಜೊತೆಗೆ ಚಿಕಿತ್ಸೆಗಾಗಿ ಗಾಯಾಳು ಅಥವಾ ರೋಗಿಗಳು ಬಂದರೂ ವೆಂಟಿಲೇಟರ್, ಆಕ್ಸಿಜನ್ ಹಾಸಿಗೆ ಸೌಲಭ್ಯಗಳಿರಲಿಲ್ಲ.ಆದರೆ, ಕೋವಿಡ್-19 ಪಾದಾರ್ಪಣೆಯಿಂದ ಇದೇ ಮೊದಲ ಬಾರಿಗೆ ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳು ಈ ಸೌಲಭ್ಯ ಕಾಣುವಂತಾಗಿದೆ.
ಅಪಘಾತಗಳಿಗೆ ಒಳಗಾಗಿ, ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದವರು ಹಾಗೂ ಗರ್ಭಿಣಿಯರಿಗೆ ತಾಲೂಕು ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ಸಂದರ್ವೆಂಟಿಲರ್ ಮತ್ತು ಆಕ್ಸಿಜನ್ ಕೊರತೆ , ಅಲ್ಲದೆ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಇದ್ದರೂ ತಾಂತ್ರಿಕ ಸಿಬ್ಬಂದಿ ಇಲ್ಲದೆ ಮೂಲೆ ಸೇರಿದ್ದವು. ಈ ಎಲ್ಲಾ ಸಮಸ್ಯೆಗಳಿಂದ ರೋಗಿಗಳು ಚಿಕಿತ್ಸೆಗಾಗಿ ಜಿಲ್ಲಾ ಕೇಂದ್ರಕ್ಕೆ ಬರುವಂತಾಗಿತ್ತು. ಈ ನಡುವೆ ಸೂಕ್ತ ಸಮಯದಲ್ಲಿ ಆ್ಯಂಬುಲೆನ್ಸ್ ಸೇವೆ ಲಭ್ಯವಾಗದೇ ಮಾರ್ಗ ಮಧ್ಯದಲ್ಲಿಯೇ ಹಲವು ರೋಗಿಗಳು ಮೃತ ಪಡುವುದು ಸಾಮಾನ್ಯವಾಗಿತ್ತು. ಆದರೆ, ಇನ್ನುಮುಂದೆ ಇದಕ್ಕೆಲ್ಲ ಪೂರ್ಣ ವಿರಾಮ ಬೀಳಲಿದೆ.
ತಜ್ಞ ಸಿಬ್ಬಂದಿಯೂ ಬೇಕು: ಕೋವಿಡ್ ಸೋಂಕಿತರ ನಿರ್ವಹಣೆಗಾಗಿ ಹಾಗೂ ಸೂಕ್ತ ಚಿಕಿತ್ಸೆಗಾಗಿ ಜಿಲ್ಲೆಯ 7 ತಾಲೂಕು ಆಸ್ಪತ್ರೆಗಳಲ್ಲಿ ತಲಾ ಒಂದೊಂದು ಆಸ್ಪತ್ರೆಗೆ 3 ವೆಂಟಿಲೇಟರ್ ಹಾಗೂ 50 ಆಕ್ಸಿಜನ್ ಹಾಸಿಗೆಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ. ಸದ್ಯಕ್ಕೆ ಪಿರಿಯಾಪಟ್ಟಣ, ನಂಜನಗೂಡು ಹಾಗೂ ತಿ.ನರಸೀಪುರದಲ್ಲಿ ಈ ವ್ಯವಸ್ಥೆ ಕಲ್ಪಿಸಲಾಗಿದ್ದು, ಹುಣಸೂರು, ಕೆ.ಆರ್ .ನಗರ, ಎಚ್.ಡಿ.ಕೋಟೆ ಹಾಗೂ ಸರಗೂರು ತಾಲೂಕುಗಳಲ್ಲಿ ವೆಂಟಿಲೇಟರ್ ಮತ್ತು ಆಕ್ಸಿಜನ್ ಅಳವಡಿಕೆ ಕಾರ್ಯ ನಡೆಯುತ್ತಿದೆ.
ಕೋವಿಡ್-19 ಔಷಧ ಬಂದ ನಂತರವೂ ಇದೇ ವ್ಯವಸ್ಥೆ ಮುಂದುವರಿಯಲಿದ್ದು, ವೆಂಟಿಲೇಟರ್ ಹಾಗೂ ಆಕ್ಸಿಜನ್ ನಿರ್ವಹಣೆಗಾಗಿ ಸರ್ಕಾರ ತಜ್ಞಸಿಬ್ಬಂದಿಯನ್ನು ನೇಮಿಸಬೇಕು. ಇಲ್ಲವಾದರೆ ಸಮರ್ಪಕ ನಿರ್ವಹಣೆ ಕೊರತೆಯಿಂದ ಲಕ್ಷಾಂತರ ಮೌಲ್ಯದ ವೆಂಟಿಲೇಟರ್ ನಿರುಪಯುಕ್ತವಾಗುವ ಅಪಾಯವೂ ಇದೆ.
ಸರ್ಕಾರದ ಕಣ್ತೆರೆಸಿದ ವೈರಾಣು: ತಾಲೂಕು ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸೂಕ್ತ ಸಂದರ್ಭದಲ್ಲಿ ವೆಂಟಿಲೇಟರ್ ಇಲ್ಲದೇ ಮೃತಪಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ವೆಂಟಿಲೇಟರ್ ನೀಡುವಂತೆ ಆಗಾಗ ಸರ್ಕಾರದ ಗಮನಕ್ಕೆ ವೈದ್ಯಾಧಿಕಾರಿಗಳು ತರುತ್ತಿದ್ದರು. ಆದರೆ, ಅದನ್ನು ಯಾವ ಸರ್ಕಾರವೂ ಈವರೆಗೆ ಕಾರ್ಯರೂಪಕ್ಕೆ ತಂದಿರಲಿಲ್ಲ. ಆದರೆ, ಈಗ ವಿಶ್ವವ್ಯಾಪಿ ತನ್ನ ಕಬಂಧಬಾಹು ವಿಸ್ತರಿಸಿರುವ ಕೋವಿಡ್ವೈರಾಣು ಸರ್ಕಾರವನ್ನೇ ಬೆಚ್ಚಿ ಬೀಳಿ ಸಿರುವುದರಿಂದ ತಾಲೂಕು ಆಸ್ಪತ್ರೆಗಳಲ್ಲೂ ವೆಂಟಿ ಲೇಟರ್ ಮತ್ತು ಆಕ್ಸಿಜನ್ ಹಾಸಿಗೆಗಳ ವ್ಯವಸ್ಥೆ ಮಾಡಿ ಕೋವಿಡ್ ಮರಣ ಪ್ರಮಾಣ ತಗ್ಗಿಸಲು ಮುಂದಾಗಿರುವುದು ಭವಿಷ್ಯಕ್ಕೂ ಸಹಕಾರಿಯಾಗಿದೆ. ಒಟ್ಟಾರೆ ತಾಲೂಕು ಆಸ್ಪತ್ರೆಗಳಿಗೆ ವೆಂಟಿಲೇಟರ್ ಮತ್ತು ಆಕ್ಸಿಜನ್ ಸೌಲಭ್ಯ ಸಿಗಲು ಕೋವಿಡ್ ವೈರಾಣು ಬರಬೇಕಾಯಿತು ಎಂಬಂತಾಗಿದೆ.
ತಜ್ಞ ನೌಕರರನ್ನು ನೇಮಿಸಿದಿದ್ದರೆ ವೆಂಟಿಲೇಟರ್ಗಳು ಮೂಲೆಗುಂಪು : ಪ್ರತಿದಿನ ಕೆ.ಆರ್. ಆಸ್ಪತ್ರೆ ಆಕ್ಸಿಜನ್ ವಾರ್ಡ್ನಲ್ಲಿ 25ರಿಂದ 30 ಮಂದಿ ಹಾಗೂ ವೆಂಟಿಲೇಟರ್ನಲ್ಲಿ 20 ಮಂದಿ ಚಿಕಿತ್ಸೆಗಾಗಿ ಗ್ರಾಮಾಂತರ ಪ್ರದೇಶಗಳಿಂದ ಬರುತ್ತಿದ್ದರು. ಸದ್ಯಕ್ಕೆ ತಾಲೂಕು ಕೇಂದ್ರಗಳಲ್ಲಿ ವೆಂಟಿಲೇಟರ್ ಮತ್ತು ಆಕ್ಸಿಜನ್ ಸೌಲಭ್ಯ ಕಲ್ಪಿಸಿರುವುದರಿಂದ ಜಿಲ್ಲಾಸ್ಪತ್ರೆ, ಕೆ.ಆರ್. ಆಸ್ಪತ್ರೆ ಸೇರಿದಂತೆ ಇತರೆ ಆಸ್ಪತ್ರೆಗಳಿಗೆ ಒತ್ತಡಕಡಿಮೆಯಾಗಲಿದೆ. ಜೊತೆಗೆ ಎಲ್ಲಾ ತಾಲೂಕು ಆಸ್ಪತ್ರೆಗಳಿಗೂ ವೆಂಟಿಲೇಟರ್ ನಿರ್ವಹಣೆಗೆ ತಜ್ಞ ಸಿಬ್ಬಂದಿ ನೇಮಿಸಿದರಷ್ಟೇ ಅದರ ಪ್ರಯೋಜನ ಪಡೆಯಲು ಸಾಧ್ಯ. ಇಲ್ಲವಾದರೆ, ಅವು ಮೂಲೆಸೇರುತ್ತವೆ ಎಂದು ಕೆ.ಆರ್. ಆಸ್ಪತ್ರೆ ವೈದ್ಯ ಅಧೀಕ್ಷಕ ಡಾ| ನಂಜುಂಡಸ್ವಾಮಿ ತಿಳಿಸಿದ್ದಾರೆ.
ಕೆ.ಆರ್.ಆಸ್ಪತ್ರೆಯಲ್ಲಿ ತಗ್ಗಲಿದೆ ಒತ್ತಡ : ಪ್ರತಿದಿನ ಗ್ರಾಮಾಂತರ ಪ್ರದೇಶಗಳಿಂದ ವೆಂಟಿಲೇಟರ್ ಮತ್ತು ಆಕ್ಸಿಜನ್ಗಾಗಿ 25ರಿಂದ30 ಮಂದಿ ರೋಗಿಗಳು ನಗರದ ಕೆ.ಆರ್. ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಿಗೆ ಬರುತ್ತಿದ್ದಾರೆ. ಕೆ.ಆರ್. ಆಸ್ಪತ್ರೆಯೊಂದರಲ್ಲೆನಿತ್ಯ 25 ಮಂದಿ ಆಕ್ಸಿಜನ್ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲದೆ, ವೆಂಟಿಲೇಟರ್ಗಾಗಿ 15ರಿಂದ 20 ಮಂದಿ ಬರುತ್ತಿದ್ದರು. ಇನ್ನು ಮುಂದೆ ನಗರದ ಆಸ್ಪತ್ರೆಗಳಿಗೆ ಈ ಒತ್ತಡ ಕಡಿಮೆಯಾಗಲಿದ್ದು, ಗ್ರಾಮೀಣ ಪ್ರದೇಶದ ರೋಗಿಗಳಿಗೆ ಹತ್ತಿರದ ತಾಲೂಕು ಆಸ್ಪತ್ರೆಗಳಲ್ಲೇ ಸೂಕ್ತ ಕಾಲದಲ್ಲಿ ಸಮಪರ್ಕ ಚಿಕಿತ್ಸೆ ಸಿಗಲಿದೆ.
-ಸತೀಶ್ ದೇಪುರ