ಕಜ್ಜಿಬಾಧಿತ ಮಕ್ಕಳ ಹಾಡಿಗೆ ವೈದ್ಯರು ಭೇಟಿ, ಚಿಕಿತ್ಸೆ
Team Udayavani, Jan 29, 2019, 7:26 AM IST
ಹುಣಸೂರು: ಆದಿವಾಸಿ ಮಕ್ಕಳು ಕಜ್ಜಿ ಬಾಧೆ ಅನುಭವಿಸುತ್ತಿರುವ ತಾಲೂಕಿನ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರಕ್ಕೆ ಆರೋಗ್ಯ, ಗಿರಿಜನ ಕಲ್ಯಾಣ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಔಷಧೋಪಚಾರ ನಡೆಸಿದರು.
ಉದಯವಾಣಿಯಲ್ಲಿ ಜ.28ರಂದು ‘ಹಾಡಿಯ ಮಕ್ಕಳಿಗೆ ಕಜ್ಜಿಯಿಂದ ಕೀವು, ರಕ್ತ’ ಶೀರ್ಷಿಕೆಯಡಿ ಪ್ರಕಟವಾದ ವರದಿಯಿಂದ ಎಚ್ಚೆತ್ತುಕೊಂಡ ಅಧಿಕಾರಿ ಗಳ ತಂಡ ಸೋಮವಾರ ಬೆಳಗ್ಗೆ ಕೇಂದ್ರರದ 2ನೇ ಬ್ಲಾಕ್ಗೆ ಭೇಟಿ ನೀಡಿ, ಮನೆ ಮನೆಗೆ ತೆರಳಿ ಆರೋಗ್ಯದ ಸ್ಥಿತಿ ಬಗ್ಗೆ ವಿಚಾರಿಸಿದರು.
ಸರ್ಕಾರಿ ಸಂಚಾರ ಆರೋಗ್ಯ ಘಟಕದ ವೈದ್ಯೆ ಡಾ. ಸೌಮ್ಯಶ್ರೀ, ಬೆಳಗಾಂನ ಯುನೈಟೆಡ್ ಸಮಾಜ ಕಲ್ಯಾಣ ಇಲಾಖೆ ವೈದ್ಯ ಡಾ.ಅಮೀರ್ ಅಹಮ್ಮದ್, ಫಾರ್ಮಸಿಸ್ಟ್ ಮಸೂದ್ ಹಾಗೂ ನರ್ಸ್ಗಳ ತಂಡ ಕಜ್ಜಿಬಾಧಿತ ಮಕ್ಕಳ ಆರೋಗ್ಯ ವಿಚಾರಿಸಿ, ಸೂಕ್ತ ಚಿಕಿತ್ಸೆ ನೀಡಿತು.
ಜಿಪಂ ಅಧ್ಯಕ್ಷ ಭೇಟಿ: ಈ ನಡುವೆ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸಾ.ರಾ. ನಂದೀಶ್ ಸಹ ಕೇಂದ್ರಕ್ಕೆ ಭೇಟಿ ನೀಡಿ, ಮಕ್ಕಳ ಆರೋಗ್ಯ ಸ್ಥಿತಿ ಕಂಡು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ತರಾಟೆ ತೆಗೆದುಕೊಂಡು, ಮಕ್ಕಳ ಸಂಪೂರ್ಣ ಆರೋಗ್ಯ ರಕ್ಷಣೆ ನೀಡುವಂತೆ ತಾಕೀತು ಮಾಡಿದರು.
ತರಾಟೆ: ಕಜ್ಜಿಯಿಂದ ಬಳಲುತ್ತಿದ್ದ ಮಕ್ಕಳ ರೋದನೆ ಯನ್ನು ಕಂಡ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು ಯಾವ ದಿನ ಹಾಡಿಗೆ ಭೇಟಿ ನೀಡಿದ್ದೀರಿ, ಯಾರಿಗೆ ಚಿಕಿತ್ಸೆ ಕೊಟ್ಟಿದ್ದೀರಿ, ಈ ಬಗ್ಗೆ ದಾಖಲೆ ತೋರಿಸಿ ಎಂದು ಎನ್ಜಿಒ ಸಂಚಾರ ಘಟಕದ ವೈದ್ಯ ಡಾ.ಅಮೀರ್ ಅಹಮ್ಮದ್ ಹಾಗೂ ಸಿಬ್ಬಂದಿಯನ್ನು ಪ್ರಶ್ನಿಸಿದರು. ಮಕ್ಕಳಿಗೆ ಕಜ್ಜಿ ಕಾಮನ್ ಡಿಸೀಸ್, ನೀರಿನ ಸೌಲಭ್ಯ ವಿಲ್ಲವೆಂದು ಮಕ್ಕಳು ಸ್ನಾನ ಮಾಡುವುದಿಲ್ಲ. ಔಷಧವನ್ನು ಸರಿಯಾಗಿ ಬಳಸುತ್ತಿಲ್ಲ ಎಂಬ ಉತ್ತರದಿಂದ ಆಕ್ರೋಶಗೊಂಡ ಜಿಪಂ ಅಧ್ಯಕ್ಷರು, ಕಾಮನ್ ಡಿಸೀಸ್ ಅಂದ್ರೆ ಏನು, ಯಾವ ಚಿಕಿತ್ಸೆ ಕೊಟ್ಟಿದ್ದೀರಾ, ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದೀರಾ, ಲಿಖೀತ ಮಾಹಿತಿ ಏಕೆ ನೀಡಿಲ್ಲವೆಂದು ತರಾಟೆ ತೆಗೆದುಕೊಂಡರು.
ನೀರಿನ ಸಮಸ್ಯೆ: ಸಂಚಾರ ಘಟಕ ಹಾಗೂ ಆರ್ಬಿಎಸ್ಕೆ ಘಟಕದ ವತಿಯಿಂದಲೂ ಆರೋಗ್ಯ ಮಾಹಿತಿ ಹಾಗೂ ಚಿಕಿತ್ಸೆ ನೀಡಿದ್ದರೂ ಇಲ್ಲಿ ನೀರು ಪೂರೈಕೆ ಸಮಸ್ಯೆಯೇ ದೊಡ್ಡದೆಂದು ಹಾಡಿಜನ ಹೇಳುತ್ತಾರೆಂದು ತಾಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್, ಸಂಚಾರ ಘಟಕದ ವೈದ್ಯೆ ಡಾ.ಸೌಮ್ಯಶ್ರೀ ಅಧ್ಯಕ್ಷರಿಗೆ ಮಾಹಿತಿ ನೀಡಿದರು.
ಪ್ರತ್ಯೇಕ ಚಿಕಿತ್ಸೆ: ಆರೋಗ್ಯ ಹಾಗೂ ಗಿರಿಜನ ಕಲ್ಯಾಣ ಇಲಾಖೆ ಒಟ್ಟಿಗೆ ಸೇರಿ ಕಜ್ಜಿ ಬಾಧಿತ ಮಕ್ಕಳನ್ನು ಆಶ್ರಮ ಶಾಲೆಯಲ್ಲಿ ಪ್ರತ್ಯೇಕ ಆಶ್ರಯ ಕಲ್ಪಿಸಿ, ನಿತ್ಯ ಬಿಸಿನೀರು ಸ್ನಾನ, ಔಷಧ ಹಚ್ಚಿ ಗಾಯ ವಾಸಿ ಯಾಗುವವರೆಗೆ ವಿಶೇಷ ನಿಗಾವಹಿಸಬೇಕೆಂದು ಜಿಲ್ಲಾ ಗಿರಿಜನ ಸಮನ್ವಯಾಧಿಕಾರಿ ಪದ್ಮ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ. ಕೀರ್ತಿಕುಮಾರ್ ಅವರಿಗೆ ಜಿಪಂ ಅಧ್ಯಕ್ಷರು ತಾಕೀತು ಮಾಡಿದರು.
ನಂತರ ಆಶ್ರಮ ಶಾಲೆಗೂ ತೆರಳಿ ಬಾಧಿತ ಮಕ್ಕಳೊಂದಿಗೆ ಮಾತನಾಡಿದ ಅಧ್ಯಕ್ಷರು, ಎಲ್ಲಾ ಮಕ್ಕಳ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕೆಂದು ಅಲ್ಲಿನ ಮುಖ್ಯ ಶಿಕ್ಷಕ ಮಂಜುನಾಥ್ ಹಾಗೂ ತಾಲೂಕು ಗಿರಿಜನ ಕಲ್ಯಾಣಾಧಿಕಾರಿ ಮಂಜುಳಾ ಅವರಿಗೆ ಸೂಚಿಸಿದರು.
ಈ ವೇಳೆ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಪ್ರಭಾ, ತಾಲೂಕು ಗಿರಿಜನಕಲ್ಯಾಣಾಧಿಕಾರಿ ಮಂಜುಳಾ, ತಾಲೂಕು ಆರೋಗ್ಯಾಧಿಕಾರಿ ಡಾ. ಕೀರ್ತಿಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಉಪ ನಿರ್ದೇಶಕಿ ಪದ್ಮಾ, ಸಿಡಿಪಿಒ ನವೀನ್ಕುಮಾರ್ ಇತರರಿದ್ದರು.