ದೌರ್ಜನ್ಯ ಎಸಗಿದ್ದು ಸಾಕು, ಈಗಲೇ ಎಚ್ಚೆತ್ತುಕೊಳ್ಳಿ
Team Udayavani, Apr 23, 2019, 3:05 AM IST
ಮೈಸೂರು: ನೈಸರ್ಗಿಕ ಹಾಗೂ ಸಾವಯವ ಗೊಬ್ಬರಗಳನ್ನು ಕೃಷಿ ಭೂಮಿಗೆ ಬಳಕೆ ಮಾಡುವ ಮೂಲಕ ಭೂಮಿಯ ಸತ್ವವನ್ನು ನಾವು ಕಾಪಾಡಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಕೆ. ಒಂಟಿಗೋಡಿ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮೈಸೂರು ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಪಂಚಾಯತ್ಸಂಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಭೂ ದಿನಾಚರಣೆ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನುಷ್ಯನ ದುರಾಸೆ ಹೆಚ್ಚಾದಂತೆ ಪ್ರಕೃತಿಯ ಮೇಲೆ ಒಂದಲ್ಲ ಒಂದು ರೀತಿಯ ದೌರ್ಜನ್ಯ ಎಸಗುತ್ತಾ ಬಂದಿದ್ದು, ಕೊನೆಗೆ ಅದು ಮನುಷ್ಯನಿಗೇ ಮಾರಕವಾಗುತ್ತಿದೆ. ನಮ್ಮ ಸುತ್ತಲಿನ ಬೆಟ್ಟ, ಗುಡ್ಡಗಳನ್ನು° ಕಡಿದು ವಸತಿ ಪ್ರದೇಶವನ್ನಾಗಿ ಪರಿವರ್ತಿಸುತ್ತಿದ್ದಾನೆ.
ಈ ಪರಿಣಾಮ ಇತ್ತೀಚೆಗೆ ಕೊಡಗು ಜಿಲ್ಲೆ ಮತ್ತು ಪಕ್ಷದ ಕೇರಳ ರಾಜ್ಯದಲ್ಲಿ ಅತಿವೃಷ್ಟಿಯಂತಹ ಅಪಾಯವನ್ನು ಎದುರಿಸಬೇಕಾಯಿತು. ಈ ನಿಟ್ಟಿನಲ್ಲಿ ನೈಸರ್ಗಿಕವಾಗಿರುವ ಬೆಟ್ಟ-ಗುಡ್ಡ, ಅರಣ್ಯ, ಕೃಷಿ ಭೂಮಿ, ಕೆರೆ-ಕಟ್ಟೆಗಳನ್ನು ಕಾಪಾಡಿಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.
ಇತ್ತೀಚೆಗೆ ಕೃಷಿಯಲ್ಲಿ ನೈಸರ್ಗಿಕ ಮತ್ತು ಸಾವಯವ ಗೊಬ್ಬರ ಬಳಕೆ ಕಡಿಮೆಯಾಗಿದೆ. ರಾಸಾಯನಿಕ ಯುಕ್ತ ಗೊಬ್ಬರ ಬಳಕೆಯಿಂದ ಭೂಮಿ ತನ್ನ ಸತ್ವ ಕಳೆದುಕೊಂಡು ಬಂಜರು ಭೂಮಿಯಾಗಿ ಮಾರ್ಪಡುತ್ತಿದೆ.
ಜೊತೆಗೆ ಮನುಷ್ಯನ ಆರೋಗ್ಯದ ಮೇಲು ಕೆಟ್ಟ ಪರಿಣಾಮ ಬೀರಿದೆ. ರಾಸಾಯನಿಕ ಗೊಬ್ಬರ ಬಳಕೆಯಿಂದ ನಾವು ಭೂಮಿಗೆ ಧಕ್ಕೆಯನ್ನಂಟುಮಾಡಿದ್ದೇವೆ. ನಮ್ಮ ಪೂರ್ವಜರು ಅನುಸರಿಸುತ್ತಿದ್ದ ಕೃಷಿ ಪದ್ಧತಿ ಹಾಗೂ ಭೂಮಿ ರಕ್ಷಣೆ ಕಾಳಜಿಯನ್ನು ನಾವು ಅನುಸರಿಸುವ ಮೂಲಕ ಮುಂದಿನ ಪೀಳಿಗೆಗೂ ಫಲವತ್ತಾದ ಮತ್ತು ಆರೋಗ್ಯಯುತ ಭೂಮಿ ಬಿಟ್ಟು ಹೋಗಬೇಕಿದೆ ಎಂದು ಹೇಳಿದರು.
ಇಂದು ಮನುಷ್ಯನ ದುರಾಸೆಯಿಂದ ಕೆರೆ ಒತ್ತುವರಿ, ಅರಣ್ಯನಾಶದಂತ ಕೃತ್ಯಗಳು ಹೆಚ್ಚಾಗಿ ಸೇವಿಸುವ ಗಾಳಿ, ನೀರಿಗೆ ಪರದಾಡುವಂತಾಗಿದೆ. ಇದೇ ಪ್ರಕ್ರಿಯೆ ಮುಂದುವರಿದರೆ ಮುಂದಿನ ಹತ್ತು ವರ್ಷಗಳಲ್ಲಿ ಪರಿಸ್ಥಿತಿ ಭಿನ್ನವಾಗಿರುತ್ತದೆ. ಒಬ್ಬ ಮನುಷ್ಯ ದಿನಕ್ಕೆ ಇಷ್ಟೇ ಪ್ರಮಾಣದ ನೀರನ್ನು ಬಳಕೆ ಮಾಡಬೇಕು ಎನ್ನುವ ಕಾನೂನು ಜಾರಿಯಾಗುವುದು ಬಹಳ ದೂರವೇನಿಲ್ಲ.
ನೀರನ್ನು ಅತಿಯಾಗಿ ಬಳಕೆ ಮಾಡುತ್ತಿದ್ದೇವೆ ಹೊರತು ಅದನ್ನು ಮರುಬಳಕೆ ಮಾಡುತ್ತಿಲ್ಲ. ಈ ನಿಟ್ಟಿನಲ್ಲಿ ನಾವು ಪರಿಸರ, ಭೂಮಿ, ಅರಣ್ಯ, ನೀರು, ಗಾಳಿಯ ಬಗ್ಗೆ ಅರಿವು ಪಡೆಯುವ ಮೂಲಕ ನಮ್ಮ ಪಕ್ಕದಲ್ಲಿರುವವರಿಗೂ ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಸುತ್ತೂರು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಹಾಗೂ ಕೃಷಿ ವಿಜ್ಞಾನಿ ಡಾ. ಅರುಣ ಬಳಮಟ್ಟಿ ಮಾತನಾಡಿ, ಭೂ ದಿನಾಚರಣೆ ವ್ಯಾಪ್ತಿ ಅಗಾಧವಾಗಿದೆ. ಭೂ ಸಂರಕ್ಷಣೆಯನ್ನು ನಾವೆಲ್ಲರೂ ಒಟ್ಟುಗೂಡಿ ಮಾಡುವ ಕರ್ತವ್ಯ. ಜಲ, ಅರಣ್ಯ, ನೀರು, ಗಾಳಿ ಎಲ್ಲಾ ದಿನಾಚರಣೆಗಳು ಭೂಮಿಯ ಅಂಶಗಳಾಗಿವೆ. ಈ ನಿಟ್ಟಿನಲ್ಲಿ ಭೂಮಿಯ ಮಹತ್ವ ಹೆಚ್ಚಿನದು ಎಂದರು.
ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಕೆ. ಜ್ಯೋತಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಪಿ. ದೇವಮಾನೆ, ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ನಿರ್ದೇಶಕ ಅಂಬಾಡಿ ಮಾಧವ್, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಸ್ನೇಹಾ, ವಕೀಲರ ಸಂಘದ ಅಧ್ಯಕ್ಷ ಅನಂತಕುಮಾರ್ ಇದ್ದರು.
ಭೂಮಿ ಕೆಡದಂತೆ ತುರ್ತು ಕ್ರಮ ಅನಿವಾರ್ಯ: ಭೂಮಿ ಕೆಡದಂತೆ ನಾವು ಯಾವ ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ತುರ್ತಾಗಿ ತಿಳಿಯಬೇಕಿದೆ. ಜೊತೆಗೆ ಭೂಮಿ ಸಂರಕ್ಷಣೆ ಮಾಡದಿದ್ದರೆ ಆಗುವ ಅನಾಹುತಗಳ ಬಗ್ಗೆಯೂ ತಿಳಿಯಬೇಕು. ಭೂಮಿ ಸಂರಕ್ಷಣೆಗೆ ನಾವು ಏನೆಲ್ಲ ಕಾರ್ಯಗಳನ್ನ ಅನುಷ್ಠಾನಕ್ಕೆ ತರಬೇಕು ಎಂಬುದನ್ನು ಯೋಜಿಸಿ ಎಲ್ಲರೂ ಒಟ್ಟಾಗಿ ಸೇರಿ ಭೂಮಿ ಸಂರಕ್ಷಣೆ ಮಾಡಬೇಕು.
ಪ್ಲಾಸ್ಟಿಕ್ ಬಳಕೆ ಭೂಮಿಯ ಮೇಲೆ ಬಹುದೊಡ್ಡ ದುಶ³ರಿಣಾಮ ಬೀರುತ್ತಿದೆ. ಇದರಿಂದ ಭೂಮಿಯ ಫಲವತ್ತತೆ ನಾಶವಾಗುವುದಲ್ಲದೇ, ಜೀವಿಗಳ ಮೇಲೆಯೂ ದುಶ³ರಿಣಾಮ ಬೀರುತ್ತಿದೆ. ಈ ಹಿನ್ನೆಲೆ ಪ್ಲಾಸ್ಟಿಕ್ ಬಳಕೆಯನ್ನು ಬಿಟ್ಟು, ಪರಿಸರ ಉಳಿವಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.
ಪರಿಸರ ಉಳಿಸದಿದ್ದರೆ ಶೀಘ್ರ ಶೂನ್ಯ ದಿನ: ನಮ್ಮ ಮುಂದಿನ ಪೀಳಿಗೆಗೆ ಸ್ವಸ್ಥ ಭವಿಷ್ಯವನ್ನು ನೀಡುವ ನಿಟ್ಟಿನಲ್ಲಿ ವಿಫಲರಾಗಲು ಅಥವಾ ಯಶಸ್ವಿಯಾಗಲು ನಮಗುಳಿದಿರುವುದು ಇನ್ನು ಕೆಲವೇ ವರ್ಷಗಳು ಮಾತ್ರ. ಈ ಹಿನ್ನೆಲೆಯಲ್ಲಿ ನಾವು ಗಂಭೀರವಾಗಿ ಚಿಂತಿಸುವ ಮೂಲಕ ನಮ್ಮ ಪರಿಸರ, ನೆಲ, ಜಲ ಹಾಗೂ ಗಾಳಿ ಸಂರಕ್ಷಣೆಗೆ ಮುಂದಾಗಬೇಕಿದೆ.
ಈಗಾಗಲೇ ಹಲವು ಜೀವ ಪ್ರಭೇದಗಳು ನಶಿಸಿಹೋಗಿವೆ. ಇದರಿಂದ ಜೀವ ಸರಪಳಿ ಕೊಂಡಿಗಳು ದಿನೆ ದಿನೆ ಕಳುಚುತ್ತಿದ್ದು, ಮನುಷ್ಯನ ಅಸ್ತಿತ್ವಕ್ಕೆ ಮಾರಕವಾಗುತ್ತಿದೆ ಎಂದು ಕೃಷಿ ವಿಜ್ಞಾನಿ ಡಾ. ಅರುಣ ಬಳಮಟ್ಟಿ ಎಚ್ಚರಿಕೆ ನೀಡಿದರು. ನಮಗೆ ಇರುವುದು ಒಂದೇ ಭೂಮಿ, ಇದನ್ನು ಕಾಪಾಡಿಕೊಳ್ಳದಿದ್ದರೆ ಶೂನ್ಯ ದಿನ ನಮ್ಮನ್ನು ಆವರಿಸುತ್ತದೆ.
ಪ್ರತಿ ವರ್ಷ 8ಲಕ್ಷ ಟನ್ ಪ್ಲಾಸ್ಟಿಕ್ ಸಮುದ್ರ ಸೇರುತ್ತಿದೆ. ಇದರಿಂದ ಹವಳಗಳು ತಮ್ಮ ಸತ್ವ ಕಳೆದುಕೊಳ್ಳುತ್ತಿದ್ದು, ಶೇ.90ರಷ್ಟು ಆಮೆ ಪ್ರಭೇದಗಳು ಕಣ್ಮರೆಯಾಗಿವೆ. ಈ ಭೂಮಿ ನಮ್ಮ ಎಲ್ಲಾ ಆಸೆಗಳನ್ನು ಪೂರೈಸಿದೆ. ಆದರೆ ದುರಾಸೆಗಳನ್ನಲ್ಲ ಎಂಬುದನ್ನು ನಾವೆಲ್ಲ ಅರಿಯಬೇಕಿದೆ ಎಂದರು.