ಯತ್ನಾಳ್ ಅವರ ಅನಿಸಿಕೆ ಬಿಜೆಪಿಯ ಅನಿಸಿಕೆಯಲ್ಲ: ಸಿಎಂ ಬದಲಾವಣೆಯಿಲ್ಲ: ಎಚ್.ವಿಶ್ವನಾಥ್
Team Udayavani, Oct 21, 2020, 4:16 PM IST
ಮೈಸೂರು: ಸಿಎಂ ಬದಲಾವಣೆ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಆದರೆ ಅದು ಬಿಜೆಪಿ ಅನಿಸಿಕೆಯಲ್ಲ. ಪಕ್ಷದ ನಿರ್ಧಾರಗಳೇ ಬೇರೆ, ವೈಯಕ್ತಿಕ ಅಭಿಪ್ರಾಯಗಳೇ ಬೇರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಹೇಳಿಕೆ ಕೇವಲ ಹೇಳಿಕಯಷ್ಟೇ. ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಸಿಎಂ ಬದಲಾವಣೆ ವಿಚಾರ ಎಲ್ಲಿಯೂ ಪ್ರಸ್ತಾಪವಾಗಿಲ್ಲ. ನೂರಕ್ಕೆ ನೂರು ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಿದ್ದಾರೆ. ಸದ್ಯಕ್ಕೆ ಬದಲಾವಣೆ ವಿಷಯ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿಯ ಬಾಂಬೆ ಟೀಮ್ ನಲ್ಲಿ ಬಿರುಕು ಉಂಟಾಗಿದೆ ಎಂಬ ವಿಚಾರವನ್ನು ಅಲ್ಲಗಳೆದ ಎಚ್. ವಿಶ್ವನಾಥ್, ನಮ್ಮಲ್ಲಿ ಯಾವುದೇ ಬಿರುಕು ಉಂಟಾಗಿಲ್ಲ. ನಾವೆಲ್ಲರೂ ಒಗ್ಗಟ್ಟಿನಿಂದಲೇ ಇದ್ದೇವೆ. ನಮ್ಮಲ್ಲಿ ಬಿರುಕುಂಟಾಗಿದೆ ಎಂಬುದು ಕೇವಲ ವದಂತಿ ಎಂದರು.
ಶಿರಾ ಮತ್ತು ಆರ್. ಆರ್ ನಗರ ಉಪಚುನಾವಣೆಯ ಪ್ರಚಾರದಲ್ಲಿ ಭಾಗಿಯಾಗುತ್ತೇನೆ. ಪಕ್ಷದ ಅಭ್ಯರ್ಥಿಗಳ ಪರವಾಗಿ ಸದ್ಯದಲ್ಲೇ ಪ್ರಚಾರಕ್ಕೆ ತೆರಳಲಿದ್ದೇನೆ ಎಂದು ವಿಶ್ವನಾಥ್ ಹೇಳಿದರು.